ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾರಂಪರಿಕ ಕಲೆಗಳು ಸಂಸ್ಕೃತಿಯ ಭೂಷಣ

ಆಹಾರ ಕಿಟ್‌ ವಿತರಣೆಯಲ್ಲಿ ಶಿವಮೂರ್ತಿ ಮುರುಘಾ ಶರಣರು
Last Updated 3 ಜುಲೈ 2021, 16:23 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಪಾರಂಪರಿಕ ಕಲೆಗಳು ಸಂಸ್ಕೃತಿಗೆ ಭೂಷಣ ಇದ್ದಂತೆ. ಅವುಗಳನ್ನು ಉಳಿಸಿ, ಬೆಳೆಸುವ ಅಗತ್ಯವಿದೆ. ಆ ನಿಟ್ಟಿನಲ್ಲಿ ಶ್ರೀಮಠವೂ ಸಹಕಾರ ನೀಡುತ್ತಿದೆ’ ಎಂದು ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಇಲ್ಲಿಯ ಮುರುಘಾಮಠದ ಅಲ್ಲಮಪ್ರಭು ಸಂಶೋಧನಾ ಕೇಂದ್ರದಲ್ಲಿ ರಾಜ್ಯ ಜಾನಪದ ಪರಿಷತ್ತು ಜಿಲ್ಲಾ ಘಟಕದಿಂದ ಕೋವಿಡ್‌ನಿಂದಾಗಿ ಸಂಕಷ್ಟಕ್ಕೆ ಒಳಗಾದ ಜನಪದ ಕಲಾವಿದರಿಗಾಗಿ ಶನಿವಾರ ಆಯೋಜಿಸಿದ್ದ ‘ಆಹಾರ ಸಾಮಗ್ರಿ ಕಿಟ್‌ ವಿತರಣೆ’ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.

‘ಜಾಗತೀಕರಣದ ಸಂದರ್ಭದಲ್ಲಿ ಬದುಕು ತುಂಬಾ ವೇಗವಾಗಿ ಸಾಗುತ್ತಿದೆ. ಇದರಿಂದಾಗಿ ಬದಲಾವಣೆಗಳು ಆಗುತ್ತಿವೆ. ಅದೇ ರೀತಿ ಜನಪದ ಕಲೆಗಳು ಆಧುನೀಕರಣಗೊಂಡಿವೆ. ಇಂಥ ಕಲೆಗಳನ್ನು ಕಾಯಕವಾಗಿ ಕೆಲ ಶರಣರು ಮಾಡಿಕೊಂಡಿದ್ದರು’ ಎಂದ ಅವರು, ‘ಸರ್ಕಾರ, ಸಂಘ–ಸಂಸ್ಥೆಗಳು, ಮಠಮಾನ್ಯಗಳು ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸ ಮಾಡಬೇಕಿದೆ’ ಎಂದು ಸಲಹೆ ನೀಡಿದರು.

ಕಾಯಕವನ್ನಾಗಿ ಆರಿಸಿಕೊಂಡರು: ಪ್ರಾಧ್ಯಾಪಕ ಜೆ. ಕರಿಯಪ್ಪ ಮಾಳಿಗೆ, ‘ವೀಣೆಯ ಸಕಲೇಶ ಮಾದರಸ, ಕಿನ್ನರಿ ಬೊಮ್ಮಯ್ಯ, ರಾಗದ ಸಂಕಣ್ಣ, ಕಂಕರಿ ಕಕ್ಕಯ್ಯ, ಬಹುರೂಪಿ ಚೌಡಯ್ಯ, ತತ್ವಪದದ ವೀರದೇವಮ್ಮ, ಜನಪದ ನಾಟ್ಯಪ್ರವೀಣೆ ಸಿದ್ದದೇವಮ್ಮ ಸೇರಿ 12ನೇ ಶತಮಾನದ ಅನೇಕ ಶರಣ–ಶರಣೆಯರು ಜನಪದ ಕಲೆಗಳನ್ನು ಸ್ವೀಕರಿಸಿ ಕಾಯಕವನ್ನಾಗಿ ಆರಿಸಿಕೊಂಡರು. ಇದರಿಂದಾಗಿ ಈ ಕಲೆಯನ್ನು ಕೀಳಾಗಿ ಕಾಣುತ್ತಿದ್ದ ಮನೋಭಾವ ದೂರವಾಯಿತು’ ಎಂದು ತಿಳಿಸಿದರು.

‘ಶರಣ ಪರಂಪರೆಯಿಂದಾಗಿ ಕಲೆಗಳಿಗೆ ಹೊಸ ರೂಪ, ಹೊಸ ಜೀವಕಳೆ ಬಂತು. ಜನಪದ ಹಾಡು, ಕುಣಿತ, ವೇಷಗಾರಿಕೆ ಮೊದಲಾದ ಕ್ಷೇತ್ರಗಳ ಕಲಾವಿದರು ಕಲ್ಯಾಣಕ್ಕೆ ಬಂದು ಶರಣರ ಒಡನಾಟದಲ್ಲಿ ಸೇರಿದರು. ಜನಪದ ಕಲೆಗಳು ಜನಾಂಗದ ಪ್ರತಿಬಿಂಬ ಆಗಿದೆ. ಇದಿಲ್ಲದೆ ಕಲೆ ಎಂದಿಗೂ ಉಳಿಯಲಾರದು’ ಎಂದು ಅಭಿಪ್ರಾಯಪಟ್ಟರು.

ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಎ.ಎಸ್. ಸಿದ್ಧರಾಮೇಶ್, ರಘುರಾಮ ರೆಡ್ಡಿ, ಜೆ.ಎಸ್. ಬಕ್ಕೇಶ್, ಡಿ.ಒ. ಮೊರಾರ್ಜಿ, ನಿರಂಜನ ದೇವರಮನೆ, ಕೆ.ಸಿ. ರುದ್ರೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT