ಹಿರಿಯೂರು: ಆಧುನಿಕ ಕರ್ನಾಟಕ ನಿರ್ಮಾಣದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪಾತ್ರ ಮಹತ್ವದ್ದು. ಅದೇ ರೀತಿ ಹಿಂದುಳಿದ ವರ್ಗಗಳ ನೇತಾರ ದಿವಂಗತ ದೇವರಾಜ ಅರಸು ಅವರ ಆಡಳಿತ ಮತ್ತು ಅವರ ದೂರದೃಷ್ಟಿತ್ವ ಎಲ್ಲ ಕಾಲಕ್ಕೂ ಜನಪ್ರತಿನಿಧಿಗಳಿಗೆ ಮಾದರಿ ಎಂದು ಗೌತಂ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಬಿ.ಪಿ. ತಿಪ್ಪೇಸ್ವಾಮಿ ಹೇಳಿದರು.
ನಗರದ ಅಂಬೇಡ್ಕರ್ ಪಿಯು ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಹಾಗೂ ದಿವಂಗತ ದೇವರಾಜ ಅರಸು ಅವರ ಪುಣ್ಯಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇವದಾಸಿ ಪದ್ಧತಿ ರದ್ದುಗೊಳಿಸಿ, ಮಹಿಳಾ ಶಿಕ್ಷಣಕ್ಕೆ ಒತ್ತು ನೀಡಿದ್ದಲ್ಲದೆ ನೀರಾವರಿ, ಉದ್ಯೋಗಸೃಷ್ಟಿ, ಮಾಹಿತಿ ತಂತ್ರಜ್ಞಾನ ಅಭಿವೃದ್ಧಿ, ಕೈಗಾರಿಕೆಗಳ ಸ್ಥಾಪನೆ ಮೂಲಕ ನಿಜವಾದ ಅರ್ಥದಲ್ಲಿ ಒಡೆಯರ್ ಅವರು ರಾಜರ್ಷಿಯಾಗಿದ್ದರು ಎಂದು ಅವರು ತಿಳಿಸಿದರು.
ದೇವರಾಜ ಅರಸು ಅವರು ಬಡತನ ನಿರ್ಮೂಲನೆ ಹಾಗೂ ಭೂಸುಧಾರಣೆಗೆ ಹೆಚ್ಚಿನ ಒತ್ತು ನೀಡಿದ್ದರು. ನಾಲ್ವಡಿಯವರು ಮತ್ತು ದೇವರಾಜ ಅರಸು ಅವರು ತಮ್ಮ ಕಾರ್ಯಕ್ರಮಗಳ ಮೂಲಕ ರಾಜ್ಯವನ್ನು ಇಡೀ ದೇಶ ಗಮನಿಸುವಂತೆ ಮಾಡಿದ್ದರು ಎಂದು ತಿಪ್ಪೇಸ್ವಾಮಿ ತಿಳಿಸಿದರು.