ಚಿತ್ರದುರ್ಗ: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಹಾಗೂ ವಿದ್ಯುತ್ ದರ ಏರಿಕೆ ಮಾಡಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಕಾಂಗ್ರೆಸ್ ಮಹಿಳಾ ಘಟಕದ ಕಾರ್ಯಕರ್ತೆಯರು ಭಾನುವಾರ ಪ್ರತಿಭಟನೆ ನಡೆಸಿದರು.
ಸರ್ಕಾರಗಳ ವಿರುದ್ಧ ಧಿಕ್ಕಾರ ಕೂಗಿದ ಪ್ರತಿಭಟನಕಾರರು, ಬೆಲೆ ಏರಿಕೆ ಖಂಡಿಸುವ ಪೋಸ್ಕರ್ ಬಿಡುಗಡೆಗೊಳಿಸಿದರು. ಕೂಡಲೇ ಬೆಲೆ ಇಳಿಕೆ ಮಾಡಿ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಪಕ್ಷದ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಗೀತಾ ನಂದಿನಿಗೌಡ, ‘ಕೋವಿಡ್ನಿಂದಾಗಿ ದೇಶದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವುದು ಎಷ್ಟು ಸರಿ? ತೆರಿಗೆ ಹೆಚ್ಚಳ ಮಾಡಿ ಸಾಮಾನ್ಯ ಜನರ ಮೇಲೆ ಸವಾರಿ ಮಾಡಲು ಸರ್ಕಾರ ಹೊರಟಿದೆ. ಕೂಡಲೇ ಬೆಲೆ ಇಳಿಕೆ ಮಾಡುವುದರ ಜತೆಗೆ ತೆರಿಗೆಯನ್ನು ಕಡಿಮೆಗೊಳಿಸಬೇಕು’ ಎಂದು ಆಗ್ರಹಿಸಿದರು.
ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ. ತಾಜ್ಪೀರ್, ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಮೋಕ್ಷ ರುದ್ರಸ್ವಾಮಿ, ಮುಖಂಡರಾದ ಡಿ.ಎನ್. ಮೈಲಾರಪ್ಪ, ಜಾಹ್ನವಿ, ನಾಗರಾಜ್, ನಜ್ಮಾ, ಮೋಹನ್ ಪೂಜಾರಿ, ಎನ್.ಡಿ.ಕುಮಾರ್, ಮುದಸಿರ್ ನವಾಜ್, ಮಹಡಿ ಶಿವಮೂರ್ತಿ ಇದ್ದರು.