ಚಿತ್ರದುರ್ಗ: ‘ದೇಶದ 565 ರಾಜ್ಯಗಳನ್ನು ಒಗ್ಗೂಡಿಸಿ, ಸಮಗ್ರ ಭಾರತವನ್ನು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ವಿಲೀನಗೊಳಿಸಿದ ಕೀರ್ತಿ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರಿಗೆ ಸಲ್ಲುತ್ತದೆ’ ಎಂದು ರಾಜ್ಯಸಭಾ ಮಾಜಿ ಸದಸ್ಯ ಎಚ್. ಹನುಮಂತಪ್ಪ ಹೇಳಿದರು.
ಕಾಂಗ್ರೆಸ್ ಜಿಲ್ಲಾ ಘಟಕದ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಪ್ರಥಮ ಉಪಪ್ರಧಾನಿ ಸರ್ದಾರ್ ವಲ್ಲಭಬಾಯ್ ಪಟೇಲ್ ಜನ್ಮದಿನಾಚರಣೆ ಹಾಗೂ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೇಘಾಲಯದಲ್ಲಿ 85 ರಾಜ್ಯಗಳ ರಾಜ-ರಾಣಿಯರ ಸಭೆ ಕರೆದು ಎಲ್ಲರನ್ನೂಒಗ್ಗೂಡಿಸಿದರು. ಹೀಗೆ ವಿವಿಧ ರಾಜ್ಯಗಳನ್ನು ಪ್ರಜಾಪ್ರಭುತ್ವ ರಾಷ್ಟ್ರದೊಂದಿಗೆ ವಿಲೀನಗೊಳಿಸಿದ ಪಟೇಲರು ಮಹಾನ್ ದೇಶಪ್ರೇಮಿ. ಭಾರತ ಸ್ವಾತಂತ್ರ್ಯ ರಾಷ್ಟ್ರವಾಗುವಲ್ಲಿಯೂ ಹೆಗಲಿಗೆ ಹೆಗಲು ಕೊಟ್ಟು ಹೋರಾಡಿದ ಉಕ್ಕಿನ ಮನುಷ್ಯ ಎಂದು ಹೇಳಿದರು.
‘ಅಧಿಕಾರಕ್ಕಾಗಿ ಕಾಂಗ್ರೆಸ್ ಸ್ಥಾಪನೆಯಾಗಲಿಲ್ಲ. ಅದು ಒಲಿದು ಬರುತ್ತದೆ ಎಂಬುದು ಕಾಂಗ್ರೆಸ್ಸಿಗರಿಗೆ ಗೊತ್ತಿರಲಿಲ್ಲ. ಈಗ ಬಿಜೆಪಿ ಅಧಿಕಾರದಲ್ಲಿದೆ. ಈ ಅವಧಿಯಲ್ಲಿ ದುರಾಡಳಿತ ನಡೆದರೆ ಅದನ್ನು ಸಮರ್ಥವಾಗಿ ಎದುರಿಸಲು ಕಾಂಗ್ರೆಸ್ನ ಮುಖಂಡರು, ಕಾರ್ಯಕರ್ತರು ಮುಂದಾಗಬೇಕು. ನಾವು ಸರ್ದಾರ್ಜೀ, ನೆಹರೂ ಹಾಗೂ ಇಂದಿರಾಗಾಂಧಿ ಮೊಮ್ಮಕ್ಕಳು ಎಂಬುದನ್ನು ಮರೆಯಬೇಡಿ. ದೇಶವನ್ನು ಕಟ್ಟುವಲ್ಲಿ, ಮುನ್ನಡೆಸುವಲ್ಲಿ ಕಾಂಗ್ರೆಸ್ನವರು ಎಂತಹ ಮಹತ್ಕಾರ್ಯಗಕ್ಕಾದರೂ ಸಿದ್ಧರಿರಬೇಕು’ ಎಂದು ಸಲಹೆ ನೀಡಿದರು.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ತಾಜ್ಪೀರ್, ಮಾಜಿ ಅಧ್ಯಕ್ಷ ಜಿ. ಪಾತ್ಯರಾಜನ್, ಮುಖಂಡರಾದ ಎಂ. ಅಜ್ಜಣ್ಣ, ಸಂಪತ್ಕುಮಾರ್, ಎನ್.ಡಿ. ಕುಮಾರ್, ನೇತಾ ತಿಪ್ಪೇಸ್ವಾಮಿ, ನಿರಂಜನಮೂರ್ತಿ, ಕೂದ್ದೂಸ್, ಮುದಾಸಿರ್, ನಜ್ಮತಾಜ್ ಇದ್ದರು.