ಹಿರಿಯೂರು: ‘ಕೋವಿಡ್ ಸೋಂಕು ದೃಢಪಟ್ಟಿರುವ ಮನೆ ಅಥವಾ ಅಂಗಡಿಯನ್ನು ಸೀಲ್ಡೌನ್ ಮಾಡಬೇಕೆ? ಸರ್ಕಾರದ ಮಾರ್ಗಸೂಚಿಯಂತೆ ಪಾಸಿಟಿವ್ ವರದಿ ಬಂದಿರುವ ಸ್ಥಳದಿಂದ 100 ಮೀಟರ್ ಸುತ್ತಳತೆಯಲ್ಲಿ ಸೀಲ್ಡೌನ್ ಮಾಡಬೇಕೆ’ ಎಂಬ ವಿಚಾರದಲ್ಲಿ ಸೋಮವಾರ ವರ್ತಕರು ಹಾಗೂ ನಗರಸಭೆ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆಯಿತು.
ಪ್ರಧಾನ ರಸ್ತೆಯಲ್ಲಿರುವ ಜವಳಿ ಅಂಗಡಿಯೊಂದರ ಮಾಲೀಕರು, ಅವರ ಮಗ ಮತ್ತು ಮೊಮ್ಮಗನಿಗೆ ಭಾನುವಾರ ಪಾಸಿಟಿವ್ ವರದಿ ಬಂದಿದ್ದು, ಅಂಗಡಿ ಮೇಲ್ಭಾಗದಲ್ಲಿಯೇ ವಾಸದ ಮನೆ ಇದೆ. ಸರ್ಕಾರದ ಮಾರ್ಗಸೂಚಿಯಂತೆ ನಗರಸಭೆಯವರು ಸೋಮವಾರ ಬೆಳಿಗ್ಗೆ ಸೀಲ್ಡೌನ್ ಮಾಡಲು ಮುಂದಾದಾಗ ಕೆಲ ವರ್ತಕರು ವಿರೋಧ ವ್ಯಕ್ತಪಡಿಸಿದರು.
ಜವಳಿ ಅಂಗಡಿ ಹಾಗೂ ಮನೆಯ ಪ್ರವೇಶ ಬಾಗಿಲಿನಿಂದ ನಾಲ್ಕೂ ದಿಕ್ಕಿಗೆ ನೂರು ಮೀಟರ್ ಸೀಲ್ಡೌನ್ ಮಾಡಬೇಕು ಎಂದು ಕೆಲವರು, ಮನೆಯ ಪ್ರವೇಶ ದ್ವಾರವನ್ನು ಮಾಡಿದರೆ ಸಾಕು ಎಂದು ಮತ್ತೆ ಕೆಲವರು ವಾದಕ್ಕೆ ನಿಂತರು. ಅಂಗಡಿ ಮುಂದಿನ ರಸ್ತೆಯನ್ನು ಬಂದ್ ಮಾಡದಿದ್ದರೂ ಅಂಗಡಿಗಳನ್ನು ಬಂದ್ ಮಾಡಿಸಬೇಕು ಎಂದು ಕೆಲವರು ಅಂಗಡಿಗಳ ಬಾಗಿಲು ಹಾಕಿಸಲು ಮುಂದಾದರು.
‘ಪ್ರಧಾನ ರಸ್ತೆ ಬಂದ್ ಮಾಡಿದರೆ ಸಂಚಾರ ಅಸ್ತವ್ಯಸ್ತವಾಗುತ್ತದೆ. ಅರ್ಬನ್ ಬ್ಯಾಂಕ್, ಶ್ರೀಶೈಲ ಚಿತ್ರಮಂದಿರದ ಹಿಂಭಾಗದ ರಸ್ತೆಯನ್ನು ಸೀಲ್ಡೌನ್ ಮಾಡುತ್ತೇವೆ’ ಎಂದು ಪೌರಾಯುಕ್ತೆ ಲೀಲಾವತಿ ಹೇಳಿದರು.
ಕೆಲವರು ಶಾಸಕರಿಗೆ ಕರೆ ಮಾಡಿ ಅಂಗಡಿ, ಮನೆ ಮಾತ್ರ ಸೀಲ್ಡೌನ್ ಮಾಡುವಂತೆ ಒತ್ತಾಯಿಸಿದರು. ಬಳಿಕ 100 ಮೀ. ವ್ಯಾಪ್ತಿಯಲ್ಲಿ ಅಂಗಡಿಗಳನ್ನು ನಗರಸಭೆ ಸಿಬ್ಬಂದಿ ಬಂದ್ ಮಾಡಿದರು.