ಚಿತ್ರದುರ್ಗ: ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಸಿ.ಡಿ ಹಗರಣದಲ್ಲಿ ನನ್ನ ಹೆಸರು ತಳುಕು ಹಾಕಿಕೊಂಡಿದ್ದು ಕಂಡು ಆಶ್ಚರ್ಯವಾಗಿದೆ. ನನಗೂ ಹಾಗೂ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಮಾಜಿ ಸಚಿವ ಡಿ.ಸುಧಾಕರ್ ತಿಳಿಸಿದ್ದಾರೆ.
ಚಳ್ಳಕೆರೆಯ ತಮ್ಮ ಮನೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಭಾನುವಾರ ಮಾತನಾಡಿದ ಅವರು, 'ಸಿ.ಡಿ ಪ್ರಕಾರಣದಲ್ಲಿರುವ ಯುವತಿಗೆ ಹಣ ವರ್ಗಾವಣೆ ಮಾಡಿದ್ದೇನೆ ಎಂಬುದು ಸುಳ್ಳು. ನಾನು ಯಾರಿಗೂ ಹಣ ನೀಡಿಲ್ಲ. ಎಸ್ಐಟಿ ತನಿಖೆಗೆ ಕರೆದರೆ ಸಹಕರಿಸುವೆ' ಎಂದು ಹೇಳಿದರು.
'ನನಗೆ ನಿತ್ಯ ಅನೇಕ ಜನರು ಕರೆ ಮಾಡುತ್ತಿರುತ್ತಾರೆ. ಯಾರು ಕರೆ ಮಾಡಿದ್ದಾರೆ ಎಂಬುದು ಅನೇಕ ಸರಿ ಗೊತ್ತಾಗದು. ನನಗೆ ಭಯ ಇದ್ದಿದ್ದರೆ ಮೊದಲೇ ನ್ಯಾಯಾಲಯದ ಮೊರೆ ಹೊಗುತ್ತಿದ್ದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಹೆಚ್ಚು ಸಂಪರ್ಕ ಹೊಂದಿರುವ ಕಾರಣಕ್ಕೆ ಇಂತಹ ಪ್ರಕರಣದಲ್ಲಿ ಸಿಲಿಕಿಸುವುದು ತಪ್ಪು' ಎಂದು ಪ್ರತಿಕ್ರಿಯೆ ನೀಡಿದರು.