ಚಿತ್ರದುರ್ಗ: ಕ್ರೀಡೆಯಿಂದ ಸ್ನೇಹ ಮನೋಭಾವನೆ ಮೂಡುತ್ತದೆ. ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ, ಸೋಲನ್ನೇ ಗೆಲುವಿನ ಮೆಟ್ಟಿಲಾಗಿ ಮಾಡಿಕೊಂಡರೆ ಯಶಸ್ಸು ಕಾಣಬಹುದು ಎಂದು ವೆಂಕಟೇಶ್ವರ ಶಿಕ್ಷಣ ವಿದ್ಯಾಲಯದ ಪ್ರಾಂಶುಪಾಲ ಬಿ.ಸಿ.ಅನಂತರಾಮ ತಿಳಿಸಿದರು.
ನಗರದ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯಲ್ಲಿ ‘ಡೆಸ್ಟಿನಿ– 2024’ರ ಪ್ರಯುಕ್ತ ಆಯೋಜಿಸಿರುವ ಏಳು ದಿನಗಳ ಅಂತರ ಶಾಲಾ ಸಾಂಸ್ಕೃತಿಕ ಮತ್ತು ಕ್ರೀಡಾಕೂಟಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಅವರು, ‘ಸತತ ಹಾಗೂ ಪ್ರಾಮಾಣಿಕ ಪ್ರಯತ್ನದಿಂದ ಯಶಸ್ಸು ಸಾಧ್ಯ. ಇದನ್ನು ಕ್ರೀಡಾ ಸ್ಫೂರ್ತಿಯಿಂದ ಸ್ವೀಕರಿಸಬೇಕು ’ ಎಂದರು.
‘ಪಠ್ಯದ ಜೊತೆ ಪಠ್ಯೇತರ ವಿಷಯವಾದ ಕ್ರೀಡೆ ಮಕ್ಕಳ ದೈಹಿಕ ಆರೋಗ್ಯ ಕಾಪಾಡುತ್ತದೆ. ಜತೆಗೆ ಸ್ಪರ್ಧಾ ಮನೋಭಾವನೆ ಹಾಗೂ ಆಸಕ್ತಿ ಮೂಡಿಸುವಲ್ಲಿ ಮಹತ್ತರ ಪಾತ್ರವಹಿಸುತ್ತದೆ’ ಎಂದರು.
‘ಎಂತಹ ಕಠಿಣ ಪರಿಸ್ಥಿತಿ ಎದುರಾದರೂ ಪ್ರಯತ್ನಿಸುವುದನ್ನು ಮಾತ್ರ ನಿಲ್ಲಿಸಬಾರದು. ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದರ ಮೂಲಕ ಕ್ರೀಡೆಯಲ್ಲಿ ಸದಾ ಮುಂದವರೆಯಬೇಕು’ ಎಂದು ತಿಳಿಸಿದರು.
‘ಶಾಲಾ ಹಂತದಲ್ಲಿ ನಡೆಯುವ ಕ್ರೀಡಾಕೂಟಗಳು ಜಿಲ್ಲೆ, ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಪಾಲ್ಗೊಳ್ಳಲು ವೇದಿಕೆಯಾಗಲಿದೆ. ಮಕ್ಕಳು ತಮ್ಮ ಪ್ರತಿಭೆ ಪ್ರದರ್ಶಿಸಲು ಇದೊಂದು ಒಳ್ಳೆಯ ಅವಕಾಶ’ ಎಂದರು.
ಇಂಡಿಯನ್ ಇಂಟರ್ ನ್ಯಾಷನಲ್ ಶಾಲೆ ಆವರಣ, ಸರ್ಕಾರಿ ವಿಜ್ಞಾನ ಕಾಲೇಜು ಮೈದಾನ ಹಾಗೂ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಏಕಕಾಲಕ್ಕೆ ಕ್ರೀಡಾಕೂಟ ನಡೆದವು. 20 ವಾಲಿಬಾಲ್ ತಂಡ, 25 ಥ್ರೋಬಾಲ್, 10 ಫುಟ್ ಬಾಲ್, 8 ಕ್ರಿಕೆಟ್, 35 ಸ್ಕೇಟಿಂಗ್, 30 ನೃತ್ಯ, 22 ಸಂಗೀತ, 19ರಸಪ್ರಶ್ನೆ, 25ಚರ್ಚಾ ಸ್ಪರ್ಧೆ ಹಾಗೂ 30 ಚಿತ್ರಕಲಾ ತಂಡಗಳು ಭಾಗವಹಿಸಿವೆ.
ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್ ಸಿಬಿಎಸ್ಇ ಪ್ರಾಂಶುಪಾಲ ಆಂಥೋನಿ ಮ್ಯಾಥ್ಯೂ, ಎಸ್ಎಲ್ವಿ ನರ್ಸಿಂಗ್ ಕಾಲೇಜು ಪ್ರಾಂಶುಪಾಲ ಎಂ.ಎಂ.ಮಹಾಂತೇಶ, ಎಸ್ಎಲ್ವಿ ಪಿಯು ಕಾಲೇಜಿನ ಪ್ರಾಂಶುಪಾಲ ಕೇಶವಮೂರ್ತಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.