ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಪ್ಪ ಹತ್ತಿ, ದಿಕ್ಕು ತಪ್ಪಿ ಅಪಾಯದಲ್ಲಿ ಸಿಲುಕಿದ್ದ ಯುವಕರ ರಕ್ಷಣೆ!

ವಿವಿಸಾಗರದ ಮತ್ತೊಂದು ದಡ ಸೇರಿದ್ದವರು ಪಾರು
Last Updated 24 ಮೇ 2022, 3:07 IST
ಅಕ್ಷರ ಗಾತ್ರ

ಹಿರಿಯೂರು:ತಾಲ್ಲೂಕಿನ ವಾಣಿವಿಲಾಸ ಜಲಾಶಯದಲ್ಲಿ ಭಾನುವಾರ ರಾತ್ರಿ ಹುಟ್ಟುಹಬ್ಬ ಆಚರಣೆಗೆ ಹೋದ ಯುವಕರ ಗುಂಪೊಂದು ತೆಪ್ಪ ಹತ್ತಿ, ದಿಕ್ಕು ತಪ್ಪಿ, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತಾಲ್ಲೂಕಿನ ಬಬ್ಬೂರು ಗ್ರಾಮದ ಸಂಪತ್, ಯೋಗೇಶ್ ಹಾಗೂ ಧನುಷ್ ಸಾವಿನ ದವಡೆಯಿಂದ ಪಾರಾಗಿ ಬಂದವರು.

ಬಬ್ಬೂರಿನ 9 ಜನ ಯುವಕರು ಭಾನುವಾರ ಸಂಜೆ ಹುಟ್ಟುಹಬ್ಬ ಆಚರಿಸಲು ಆರನಕಣಿವೆ ರಂಗನಾಥ
ಸ್ವಾಮಿ ದೇವಸ್ಥಾನದ ಕೆಳಭಾಗದಲ್ಲಿರುವ ವಾಣಿವಿಲಾಸ ಜಲಾಶಯದ ಹಿನ್ನೀರು ಭಾಗಕ್ಕೆ ಹೋಗಿದ್ದರು. ಕೆಲವರು ದಡದಲ್ಲಿದ್ದ ತೆಪ್ಪದಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಆ ಸಮಯದಲ್ಲಿ ಗೂಟಕ್ಕೆ ಕಟ್ಟಿದ್ದ ಹಗ್ಗ ಬಿಚ್ಚಿಕೊಂಡಿದೆ. ಒಂದಿಬ್ಬರು ಹೆದರಿ ತೆಪ್ಪದಿಂದ ಜಿಗಿದು ದಡಕ್ಕೆ ಬಂದಿದ್ದಾರೆ. ಮೂವರು ಮಾತ್ರ ತೆಪ್ಪದಲ್ಲಿ ಉಳಿದಿದ್ದರು. ಅದೇ ಸಮಯಕ್ಕೆ ಜೋರಾಗಿ ಬೀಸುತ್ತಿದ್ದ ಗಾಳಿ ತೆಪ್ಪವನ್ನು ದಡದಿಂದ ದೂರಕ್ಕೆಎಳೆದೊಯ್ದಿದೆ.

ಎಷ್ಟು ಹೊತ್ತಾದರೂ ಗೆಳೆಯರ ಸುಳಿವು ಕಾಣದಿದ್ದರಿಂದ ಗಾಬರಿಗೊಂಡ ಸ್ನೇಹಿತರು ನೆನಪಿಗೆ ಬಂದವರಿಗೆಲ್ಲ ದೂರವಾಣಿ ಕರೆ ಮಾಡಿದರು. ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ಕ್ರೀಡಾ ಇಲಾಖೆ ಸಿಬ್ಬಂದಿ ಸಹಾಯದಿಂದ ಕಣ್ಮರೆಯಾದ ಯುವಕರ ಪತ್ತೆ ಕಾರ್ಯಕ್ಕೆ ಮುಂದಾದರು. ಹೊಸದುರ್ಗ ತಾಲ್ಲೂಕಿನ ಮತ್ತೋಡು ಗ್ರಾಮದ ಹಿನ್ನೀರಿನವರೆಗೆ ಹುಡುಕಾಟ ನಡೆಸಿದರೂ ತೆಪ್ಪ ಪತ್ತೆಯಾಗಿರಲಿಲ್ಲ. ಅಂತಿಮವಾಗಿ ಹೊಸದುರ್ಗದ ಗಡಿಭಾಗದಲ್ಲಿ ಜಲಾಶಯದ ದಂಡೆಯ ಮೇಲೆ ಕುಳಿತಿದ್ದ ಸಂಪತ್, ಯೋಗೇಶ್ ಹಾಗೂ ಧನುಷ್ ಅವರನ್ನು ರಕ್ಷಣಾ ಸಿಬ್ಬಂದಿ ಸುರಕ್ಷಿತವಾಗಿಕರೆತಂದಿದ್ದಾರೆ.

ತೆಪ್ಪದಲ್ಲಿ ಧೈರ್ಯ ಕಳೆದುಕೊಳ್ಳದೆ ಗಾಳಿ ಬೀಸಿದತ್ತ ಸಾಗಿ, ದಡ ಸೇರಿದ್ದ ಯುವಕರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಒಂದೆಡೆ ಮೆಚ್ಚುಗೆ ವ್ಯಕ್ತವಾಗಿದ್ದರೆ, ಕೆಲವರಿಂದ ಟೀಕೆಗೆ ಗುರಿಯಾಗಿದ್ದಾರೆ.

ರಕ್ಷಣಾ ಕಾರ್ಯಾಚರಣೆಯಲ್ಲಿ ಗ್ರಾಮಾಂತರ ಠಾಣೆ ಎಸ್ಐ ಶಶಿಕಲಾ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT