ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ | ‘ವೇದ’ ಸಿನಿಮಾದ ಜುಂಜುಪ್ಪ ಹಾಡು ಬಿಡುಗಡೆ

ನಟ ಶಿವರಾಜ್‌ ಕುಮಾರ್‌, ಕಿಚ್ಚ ಸುದೀಪ್‌ ಒಟ್ಟಿಗೆ ಕಣ್ತುಂಬಿಕೊಂಡ ಅಭಿಮಾನಿಗಳು
Last Updated 16 ಡಿಸೆಂಬರ್ 2022, 6:29 IST
ಅಕ್ಷರ ಗಾತ್ರ

ಚಿತ್ರದುರ್ಗ: ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅಭಿನಯದ 125ನೇ ಸಿನಿಮಾ ‘ವೇದ’ ಚಿತ್ರದ ‘ಜುಂಜಪ್ಪ’ ಆಡಿಯೊವನ್ನು ಅಪಾರ ಅಭಿಮಾನಿಗಳ ಸಮ್ಮುಖದಲ್ಲಿ ಗುರುವಾರ ರಾತ್ರಿ ಬಿಡುಗಡೆ ಮಾಡಲಾಯಿತು. ಶಿವರಾಜ್ ಕುಮಾರ್ ಹಾಗೂ ನಟ ಸುದೀಪ್ ಅವರನ್ನು ಒಟ್ಟಿಗೆ ನೋಡಿದ ಅಭಿಮಾನಿಗಳು ‌ಹರ್ಷೋದ್ಗಾರ ಮಾಡಿ ಸಂಭ್ರಮಿಸಿದರು.

ಇಲ್ಲಿನ ಹಳೆ ಮಾಧ್ಯಮಿಕ ಶಾಲಾ ಮೈದಾನದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ನಟ ಸುದೀಪ್‌ ಅವರು ಹಾಡನ್ನು ಬಿಡುಗಡೆ ಮಾಡಿದರು. ‘ಅಕ್ಕ ಬಾ ರಕ್ಕು ಬರುವನ ಜುಂಜಪ್ಪನ, ತಂಗಿ ಬಾ ಕರೆದು ಬರುವೆನಾ…’ ಎಂಬ ಹಾಡಿಗೆ ಮೈದಾನದಲ್ಲಿ ಕಿಕ್ಕಿರಿದು ಸೇರಿದ್ದ ಅಪಾರ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು. ಸಂಗೀತ, ನೃತ್ಯಕ್ಕೆ ಪ್ರೇಕ್ಷಕರು ಹೊಡೆದ ಚಪ್ಪಾಳೆ, ಸಿಳ್ಳೆಯ ಸಂಭ್ರಮ ಮುಗಿಲು ಮುಟ್ಟಿತ್ತು.

‘ಹುಚ್ಚ ಸಿನಿಮಾ ಚಿತ್ರೀಕರಣ ಚಿತ್ರದುರ್ಗದಲ್ಲಿ ನಡೆದಿತ್ತು. ಆ ನೆನಪುಗಳನ್ನು ಮರೆಯಲು ಎಂದಿಗೂ ಸಾಧ್ಯವಿಲ್ಲ. ಆ ಸಿನಿಮಾ ಇಲ್ಲದೇ ನಾನಿಲ್ಲ. ಈ ಊರು ಇಲ್ಲದೇ ಹುಚ್ಚ ಸಿನಿಮಾ ಇಲ್ಲ. ಗೀತಾ ಶಿವರಾಜ್ ಕುಮಾರ್ ನಿರ್ಮಾಣದ ಮೊದಲ ಸಿನಿಮಾ ಇದು. ಇದು ನಮ್ಮ ಸಿನಿಮಾ ಆಗಿದ್ದು, ಯಶಸ್ಸು ಕಾಣಬೇಕು’ ಎಂದು ನಟ ಕಿಚ್ಚ ಸುದೀಪ್ ಅಭಿಪ್ರಾಯಪಟ್ಟರು.

‘ಶಿವರಾಜ್ ಕುಮಾರ್ ಇನ್ನೂ 29 ವರ್ಷದ ಯುವಕನ ರೀತಿಯಲ್ಲಿ ನೃತ್ಯ ಮಾಡುತ್ತಿದ್ದಾರೆ. ಶಿವಣ್ಣ ಅವರ ಡಾನ್ಸ್ ನೋಡಿ ನನಗೂ ಹುಮ್ಮಸ್ಸು ಮೂಡಿದೆ. ಚಿತ್ರದುರ್ಗಕ್ಕೆ ಮತ್ತೊಮ್ಮೆ ನಾನು ಬರುವೆ. ನನ್ನ ಸಿನಿಮಾದ ಸಮಾರಂಭ ಕೂಡ ಇಲ್ಲಿ ನಡೆಯಲಿದೆ’ ಎಂದು ಹೇಳಿದರು.

ನಟ ಶಿವರಾಜ್‌ ಕುಮಾರ್‌, ‘ಮೈಲಾರಿ ಚಿತ್ರಕ್ಕೆ ಚಿತ್ರದುರ್ಗಕ್ಕೆ ಬಂದಿದ್ದೆ. ಇಲ್ಲಿಯೇ ಆಡಿಯೊ ಬಿಡುಗಡೆ ಮಾಡಬೇಕು ಎಂಬ ಅಪೇಕ್ಷೆ ಇತ್ತು. ಹೀಗಾಗಿ ಚಿತ್ರದುರ್ಗ ಆಯ್ಕೆ ಮಾಡಿಕೊಂಡೆವು. ಕಿಚ್ಚ ಸುದೀಪ್ ಅಭಿಮಾನದಿಂದ ಇಲ್ಲಿಗೆ ಬಂದಿದ್ದಾರೆ. ಇದಕ್ಕೆ ಹೆಚ್ಚು ಖುಷಿ ಆಗಿದೆ. ಡಿ. 23ರಂದು ವೇದ ಚಿತ್ರ ಬಿಡುಗಡೆ ಆಗಲಿದೆ. ಸಿನಿಮಾದ ಪೂರ್ಣ ತಂಡ ಇಲ್ಲಿಗೆ ಬಂದಿದೆ. ಎಲ್ಲರೂ ಹರಸಿ’ ಎಂದು ಕೋರಿಕೊಂಡರು.

ಕೋಟೆನಾಡು ಪ್ರತಿನಿಧಿಸುವ ‘ನಾಗರಹಾವು’ ಸಿನಿಮಾದ ‘ಬಾರೆ ಬಾರೆ ಚಂದದ ಚೆಲುವಿನ ತಾರೆ, ಬಾರೆ ಬಾರೆ ಒಲುವಿನ ಚಿಲುಮೆಯ ತಾರೆ..' ಹಾಡನ್ನು ಅದ್ಭುತವಾಗಿ ಹಾಡಿದರು. ‘ಈ ಹಾಡನ್ನು ವಿಷ್ಣುವರ್ಧನ್ ಅವರಿಗೆ ಅರ್ಪಿಸಲಿದ್ದು, ಅತ್ಯಂತ ಇಷ್ಟದ ಹಾಡು’ ಎಂದು ಹೇಳಿದರು. ವೇದ ಚಿತ್ರದ ‘ಪುಷ್ಪ’ ಹಾಡು ಹಾಡಿದಾಗ ಇಡೀ ಮೈದಾನದಲ್ಲಿ ಹರ್ಷೋದ್ಗಾರ ಭುಗಿಲೆದ್ದಿತು.
‘ಶ್ರೀಕಂಠ ವಿಷಕಂಠ..’, ‘ಜೇನಿನ ಹೊಳೆಯೊ ಹಾಲಿನ ಮಳೆಯೊ..’, ‘ಯಾರೇ ಕೂಗಾಡಲಿ, ಊರೇ ಹೋರಾಡಲಿ..’, ‘ಜೀವ ಹೂವಾಗಿದೆ ಭಾವ ಜೇನಾಗಿದೆ..’ ಹಾಡಿನ ಪಲ್ಲವಿಯನ್ನು ಶಿವರಾಜ್ ಕುಮಾರ್ ಹಾಡುವ ಮೂಲಕ ಜನರನ್ನು ರಂಜಿಸಿದರು.

ನಿರ್ದೇಶಕ ಹರ್ಷ, ‘ವೇದ' ಸಿನಿಮಾದಲ್ಲಿ ಒಂದು ಒಳ್ಳೆಯ ಸಂದೇಶ ಇದೆ. ಎಲ್ಲರೂ ಚಿತ್ರವನ್ನು ನೋಡಬೇಕು’ ಎಂದರು.

‘ಸರಿಗಮ’ 19ನೇ ಆವೃತ್ತಿಯ ಸ್ಪರ್ಧಿ ಶಿವಾನಿ, ‘ಯಾವನೇ ಇವನು ಗಿಲ್ಲಕ್ಕು, ಎಲ್ಲಿಂದ ಬಂದ ಗಿಲ್ಲಕ್ಕು, ಏಳೇಳು ಬೆಟ್ಟ ದಾಟಿ ಬಂದ ಗಿಲ್ಲಕ್ಕು..’ ಹಾಡಿದರು.

ಕೆಪಿಸಿಸಿ ಹಿಂದುಳಿದ ವರ್ಗ ವಿಭಾಗದ ಅಧ್ಯಕ್ಷ ಮಧು ಬಂಗಾರಪ್ಪ, ‘ವೇದ’ ಚಿತ್ರತಂಡದ ಶ್ವೇತಾ ಚಂಗಪ್ಪ, ಗಾನವಿ, ಅದಿತಿ, ಗುರುದತ್, ಅರ್ಜುನ್ ಜನ್ಯ, ಶ್ರೀಕಾಂತ್, ಕಾಂತರಾಜ್, ನಿವೇದಿತಾ ವೇದಿಕೆಯಲ್ಲಿ ಇದ್ದರು.

****

ನಾಲ್ಕು ಸಿನಿಮಾಗಳ ಆಡಿಯೊವನ್ನು ಇಲ್ಲಿ ಬಿಡುಗಡೆ ಮಾಡಿದ್ದೇವೆ. ಎಲ್ಲ ಸಿನಿಮಾಗಳು ಯಶಸ್ಸು ಕಂಡಿವೆ. ಶಿವರಾಜ್ ಕುಮಾರ್ ಅವರ 125ನೇ ಸಿನಿಮಾ ಇದು. ಎಲ್ಲರೂ ಹರಸಬೇಕು.

- ಗೀತಾ ಶಿವರಾಜ್ ಕುಮಾರ್, ನಿರ್ಮಾಪಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT