ಚಿತ್ರದುರ್ಗ: ‘ಮಾನವರಿಗೆ ಅನೇಕ ಕೊಡುಗೆ ನೀಡಿರುವ ಪ್ರಕೃತಿಯ ಮೇಲೆ ದೌರ್ಜನ್ಯ ನಡೆಸುವುದು ಉತ್ತಮ ಬೆಳವಣಿಗೆಯಲ್ಲ. ಆದ್ದರಿಂದ ಪ್ರಕೃತಿಯಲ್ಲೇ ದೇವರನ್ನು ಕಾಣಲು ಮುಂದಾಗಬೇಕು’ ಎಂದು ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ಮುರುಘಾಮಠದಲ್ಲಿ ಎಸ್ಜೆಎಂ ಶಾಂತಿ ಮತ್ತು ಪ್ರಗತಿ ಫೌಂಡೇಶನ್ನಿಂದ ಶನಿವಾರ ನಡೆದ 31ನೇ ವರ್ಷದ 6ನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ನೇತೃತ್ವ ವಹಿಸಿ ಅವರು ಮಾತನಾಡಿದರು.
‘ಮಾನವ ಪ್ರಕೃತಿಯಿಂದಲೇ ಜನಿಸಿರುವುದು ಎಂಬುದನ್ನು ಎಂದಿಗೂ ಮರೆಯಬಾರದು. ಪ್ರಕೃತಿ ಮಾತೆ ಎಲ್ಲರಿಗೂ ತಾಯಿಯಾಗಿದ್ದಾಳೆ. ಯಾರಾದರೂ ಆಕೆಯ ಮೇಲೆ ದೌರ್ಜನ್ಯ ನಡೆಸಿದರೆ, ಅದನ್ನು ತಡೆಯಲು ಮುಂದಾಗಬೇಕು. ಈ ಮೂಲಕ ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕು’ ಎಂದು ಸಲಹೆನೀಡಿದರು.
‘ಪ್ರಕೃತಿಯಿಂದ ಸೂಸುವ ಉತ್ತಮ ಗಾಳಿ ಸೇವಿಸುತ್ತಲೇ ಅದನ್ನು ಮಲಿನಗೊಳಿಸುವ ಕೆಲಸ ಇಂದು ವ್ಯಾಪಕವಾಗಿ ನಡೆಯುತ್ತಿದೆ. ಪರಿಸರದಲ್ಲಿಯ ಎಲ್ಲದರ ಮೇಲೂ ದೌರ್ಜನ್ಯ ನಡೆಯುತ್ತಿದೆ. ಪ್ರಕೃತಿ ನಾಶಕ್ಕೆ ಮುಂದಾಗಿರುವ ಕಾರಣ ಅನೇಕ ರೋಗಗಳು ಹರಡುತ್ತಿವೆ. ಇದರಿಂದ ಹೊರಬರಲು ಪರಿಸರ ಸಂರಕ್ಷಣೆಯೊಂದೇ ಉತ್ತಮ ಮಾರ್ಗ’ ಎಂದರು.
ಪಟೇಲ್ ಶಿವಕುಮಾರ್, ‘ಕೋವಿಡ್ ಅವಧಿಯಲ್ಲಿ ಆಮ್ಲಜನಕ ಬಹಳ ಅತ್ಯಗತ್ಯ. ಹಾಗಾಗಿ ನಾವು ಪರಿಸರ ಉಳಿಸಿ ಬೆಳೆಸಬೇಕಿದೆ. ಇಲ್ಲದೇ ಹೋದರೆ ಮುಂದೆ ಭಾರಿ ಬೆಲೆ ತೆರಬೇಕಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.
ಇದೇ ವೇಳೆ ಒಂದು ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿತು. ಸಿದ್ಧಾಪುರ ಜಯದೇವ ಟ್ರೇಡಿಂಗ್ ಕಂಪನಿಯ ಎಸ್.ವಿ. ನಾಗರಾಜಪ್ಪ, ಎಸ್ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ, ಕೆಇಬಿ ಷಣ್ಮುಖಪ್ಪ, ಎನ್. ತಿಪ್ಪಣ್ಣ, ಮುರುಗೇಶ್ ಇದ್ದರು.