ರಾಜಾರಾಮ್ ಮೋಹನ್ ರಾಯ್ ವಿಚಾರ ಸಂಕಿರಣ 30ರಿಂದ
ಮಂಗಳೂರು: ರಾಜಾರಾಮ್ ಮೋಹನ್ ರಾಯ್ ಅವರ 250ನೇ ಹುಟ್ಟುಹಬ್ಬದ ಪ್ರಯುಕ್ತ ಇಲ್ಲಿನ ಕೊಟ್ಟಾರಚೌಕಿಯ ಎ.ಜೆ. ಇನ್ಸಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನಲ್ಲಿ ‘ನವಭಾರತದಲ್ಲಿ ಮಹಿಳಾ ಸಬಲೀಕರಣ ಮತ್ತು ಪರಿವರ್ತನೆಯಲ್ಲಿ ರಾಜಾರಾಮ್ ಮೋಹನ್ ರಾಯ್ ಪ್ರಸ್ತುತತೆ’ ಕುರಿತು ಇದೇ 30 ಮತ್ತು 31 ರಂದು ವಿಚಾರ ಸಂಕಿರಣ ಆಯೋಜಿಸಲಾಗಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಸ್ಥೆಯ ನಿರ್ದೇಶಕ ಮತ್ತು ಪ್ರಾಂಶುಪಾಲ ಡಾ.ಟಿ.ಜಯಪ್ರಕಾಶ್ ರಾವ್, ‘ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯ ಮತ್ತು ಲಖನೌನ ಅನನ್ಯ ಇನ್ಸ್ಟಿಟ್ಯೂಟ್ ಫಾರ್ ಡೆವೆಲಪ್ಮೆಂಟ್ ರಿಸರ್ಚ್ ಮತ್ತು ಸೋಷಿಯಲ್ ಆ್ಯಕ್ಷನ್ ಸಂಸ್ಥೆಯ ಸಹಭಾಗಿತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ. ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಇದೇ 30ರಂದು ಬೆಳಿಗ್ಗೆ 9.30ಕ್ಕೆ ವಿಚಾರಸಂಕಿರಣವನ್ನು ಉದ್ಘಾಟಿಸುವರು. ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಮತ್ತಿತರರು ಭಾಗವಹಿಸಲಿರುವರು’ ಎಂದರು.
‘ಮಹಿಳಾ ಕೇಂದ್ರಿತ ರಾಜಕಾರಣ, ಲಿಂಗ ಸಂವೇದಿ ಬಜೆಟ್, ಮಹಿಳೆಯರಲ್ಲಿ ಉದ್ಯಮಶೀಲತೆ, ಕೌಶಲ ಅಭಿವೃದ್ಧಿ, ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಗೆ ರಾಜಾರಾಮ ಮೋಹನ್ರಾಯ್ ಕೊಡುಗೆ, ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಮಹಿಳೆಯರ ಭಾಗವಹಿಸುವಿಕೆ, ಗುಣಮಟ್ಟದ ಬದುಕು– ಮಹಿಳಾಸಬಲೀಕರಣ ಮೊದಲಾದ ವಿಚಾರಗಳ ಬಗ್ಗೆ ತಜ್ಞರು ವಿಚಾರ ಮಂಡಿಸುವರು. ಇದೇ 31ರಂದು ಸಂಜೆ 3.30ಕ್ಕೆ ಸಮಾರೋಪ ನಡೆಯಲಿದ್ದು, ನೀತಿ ಆಯೋಗದ ಉಪಸಲಹೆಗಾರ ಡಾ.ಆರ್.ವಿ.ಪಿ. ಸಿಂಗ್ ಹಾಗೂ ಶಾಸಕ ವೇದವ್ಯಾಸ ಕಾಮತ್ ಭಾಗವಹಿಸಲಿದ್ದಾರೆ’ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮ ಸಂಯೋಜಕಿ ಸ್ವಪ್ನಾ ಶೆಟ್ಟಿ, ಸಹಸಂಯೋಜಕ ರಾಜೇಶ್ ಹಾಗೂ ಸಹಪ್ರಾಧ್ಯಾಪಕ ಮಹೇಶ್ ಭಾಗವಹಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.