ಮಂಗಳೂರು: ಶಿಕ್ಷಣ, ಕಲೆ, ಸಾಹಿತ್ಯ, ಸಮಾಜಸೇವೆ ಹಾಗೂ ಲಲಿತಕಲೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಬೈಕಾಡಿ ಪ್ರತಿಷ್ಠಾನದ ಉದ್ಘಾಟನೆ ಮಂಗಳವಾರ ಹೊಯಿಗೆಬೈಲ್ನ ಬೈಕಾಡಿ ಜನಾರ್ದನ ಆಚಾರ್ರ ನಿವಾಸದಲ್ಲಿ ನಡೆಯಿತು.
ಪ್ರತಿಷ್ಠಾನದ ಉದ್ಘಾಟಿಸಿದ ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ‘ಬೈಕಾಡಿ ಜನಾರ್ದನ ಆಚಾರ್ ಅವರ ಸಾಮಾಜಿಕ ಕಳಕಳಿ, ಅಗಾಧ ಜ್ಞಾನ ಭಂಡಾರ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಅವರ ಕೊಡುಗೆ ಸ್ಮರಣೀಯ. ಅವರ ಹೆಸರಿನ ಈ ಪ್ರತಿಷ್ಠಾನವು ಇನ್ನೂ ಅನೇಕ ಚಟುವಟಿಕೆಗಳಲ್ಲಿ ತೊಡಗಿ ಸಮಾಜಕ್ಕೆ ಸಹಕಾರಿ ಹಾಗೂ ಮಾದರಿಯಾಗಲಿ’ ಎಂದು ಹೇಳಿದರು.
2020-21ನೇ ಸಾಲಿನ ‘ಬೈಕಾಡಿ ಜನಾರ್ದನ ಆಚಾರ್ ಪ್ರಶಸ್ತಿ’ಯನ್ನು ಚಿತ್ರಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯ ಕಲಾವಿದ ಪಿ.ಎನ್. ಆಚಾರ್ಯ ಅವರಿಗೆ ಪ್ರದಾನ ಮಾಡಲಾಯಿತು. ಹಿರಿಯ ಕಲಾವಿದ ಗಣೇಶ್ ಸೋಮಯಾಜಿ, ಚಿತ್ರಕಲಾರಂಗದೊಂದಿಗೆ ಬೈಕಾಡಿ ಜನಾರ್ದನ ಆಚಾರ್ರ ನಂಟು ಹಾಗೂ ಕಲಾಚಟುವಟಿಕೆಗಳಿಗೆ ಅವರ ಕೊಡುಗೆಯನ್ನು ವಿವರಿಸಿದರು.
ರವೀಂದ್ರನಾಥ ಶೆಟ್ಟಿ ಹಾಗೂ ಮಾಧುರಿ ಶ್ರೀರಾಮ್ ಕಾರ್ಯಕ್ರಮ ನಿರೂಪಿಸಿದರು. ಪ್ರತಿಷ್ಠಾನದ ಪದಾಧಿಕಾರಿಗಳಾದ ರತ್ನಾವತಿ ಜೆ. ಬೈಕಾಡಿ, ಅಕ್ಷತಾ ಬೈಕಾಡಿ, ಭರತ್ ರಾಜ್ ಬೈಕಾಡಿ ಹಾಗೂ ರೇಖಾ ಬಿ. ಬೈಕಾಡಿ ಇದ್ದರು.