ಮಂಗಳೂರು: ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಹಾಗೂ ವಿದೇಶಗಳಲ್ಲೂ ಸದಸ್ಯರನ್ನು ಒಳಗೊಂಡ ಬಂಟರ ಯಾನೆ ನಾಡವರ ಮಾತೃ ಸಂಘಕ್ಕೆ 2022-2025ರ ಸಾಲಿಗೆ ಮಾಲಾಡಿ ಅಜಿತ್ ಕುಮಾರ್ ರೈ ಸತತ ನಾಲ್ಕನೇ ಬಾರಿಗೆ ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದಾರೆ.
‘ಮುಂದಿನ ದಿನಗಳಲ್ಲಿ ಸಂಘದ ಮಹತ್ವಾಕಾಂಕ್ಷೆ ಯೋಜನೆಯಾದ ಶತಮಾನೋತ್ಸವ ಕಟ್ಟಡ ಸಂಕೀರ್ಣ, ವಿಶ್ವವ್ಯಾಪಿ ಸಮಾಜ ಬಾಂಧವರನ್ನು ಒಂದೇ ಸೂರಿನಡಿ ತರ ಬಯಸುವ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು ಕೈಗೊಳ್ಳುವುದು ಹಾಗೂ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವೆ’ ಎಂದು ಅಜಿತ್ ಕುಮಾರ್ ರೈ ಹೇಳಿದರು.
ಮುಖ್ಯ ಚುನಾವಣಾಧಿಕಾರಿಯಾಗಿದ್ದ ವಕೀಲ ಬಿ. ಗುರುಪ್ರಸಾದ್ ಶೆಟ್ಟಿ ಅವರು ಅಧ್ಯಕ್ಷರ ಅವಿರೋಧ ಆಯ್ಕೆಯನ್ನು ಘೋಷಿಸಿದರು. ಉಪ ಚುನಾವಣಾಧಿಕಾರಿ, ವಕೀಲ ಬಿಪಿನ್ ರೈ, ಹಾಗೂ ಚುನಾವಣಾಧಿಕಾರಿ ದಿವಾಕರ ಸಾಮಾನಿ ಚೇಳಾರ್ ಗುತ್ತು ಇದ್ದರು.