ಮಂಗಳೂರು: ನಗರದಲ್ಲಿ ಇತ್ತೀಚೆಗೆ ಎರಡು ಕಡೆಗಳಲ್ಲಿ ಕಂಡುಬಂದ ವಿವಾದಿತ ಗೋಡೆಬರಹ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ತೀರ್ಥಹಳ್ಳಿ ಮುಹಮ್ಮದ್ ಶಾಹೀಕ್ ಹಾಗೂ ಮಾಝ್ ಮುನೀರ್ ಬಂಧಿತ ಆರೋಪಿಗಳು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆಯು ಕೇಂದ್ರ ಉಪ ವಿಭಾಗದ ಎಸಿಪಿ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ರಚಿಸಿತ್ತು.
ಗೋಡೆ ಬರಹಕ್ಕೆ ಸಂಬಂಧಿಸಿದಂತೆ ಮಂಗಳೂರು ಪೂರ್ವ (ಕದ್ರಿ), ಮಂಗಳೂರು ಪೂರ್ವ (ಬಂದರ್) ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದ್ದವು.
ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಗರ ಪೊಲೀಸ್ ಕಮಿಷನರ್ ವಿಕಾಸ್ಕುಮಾರ್, ಬಂಧಿತ ಇಬ್ಬರು ಆರೋಪಿಗಳು ಸೇರಿ ಈ ಕೃತ್ಯ ನಡೆಸಿದ್ದಾರೆ. ಎಲ್ಲರಿಗೂ ಕಾಣುವ ಪ್ರದೇಶದಲ್ಲಿ ಬರಹ ಬರೆದಿದ್ದಾರೆ. ಪ್ರಚಾರಕ್ಕಾಗಿ ಕೃತ್ಯ ನಡೆಸಿದ್ದಾರೆ ಎಂದು ಹೇಳಿದರು.
ಬಂಧಿತ ಆರೋಪಿಗಳಾದ ಶಾಹೀಕ್ ಮತ್ತು ಮುನೀರ್ ಮೊದಲಿನಿಂದಲೂ ಸ್ನೇಹಿತರು. ಶಾಹೀರ್ ಸೇಲ್ಸ್ಮನ್ ಆಗಿದ್ದ. ಮುನೀರ್ ನಗರದಲ್ಲೇ ಬಿ.ಟೆಕ್ ವಿದ್ಯಾರ್ಥಿ ಎಂದು ತಿಳಿಸಿದರು.