ಮಂಗಳೂರು: ‘ಜೀವನಾವಶ್ಯಕ ವಸ್ತು ಮತ್ತು ಸೇವೆಗಳ ಬೆಲೆ ಏರಿಸಿ ಜನರನ್ನು ಶೋಷಿಸಲಾಗುತ್ತಿದೆ. ಬಿಜೆಪಿಯದು ಬೆಲೆ ಏರಿಸುವ ಭಕ್ತಿಯಾಗಿದೆ’ ಎಂದು ಸಿಪಿಎಂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಘಟಕದ ಕಾರ್ಯದರ್ಶಿ ವಿ. ಕುಕ್ಯಾನ್ ಆರೋಪಿಸಿದರು.
ಬೆಲೆ ಏರಿಕೆಯನ್ನು ನಿಯಂತ್ರಿಸಲು ವಿಫಲವಾದ ಕೇಂದ್ರ ಸರ್ಕಾರದ ನೀತಿಯನ್ನು ಪ್ರತಿಭಟಿಸಿ ಪಕ್ಷದ ರಾಷ್ಟ್ರವ್ಯಾಪಿ ಆಂದೋಲನದ ಭಾಗವಾಗಿ ಮಂಗಳೂರು ತಾಲ್ಲೂಕು ಸಮಿತಿ ನೇತೃತ್ವದಲ್ಲಿ ಸೋಮವಾರ ಇಲ್ಲಿ ನಡೆದ ಪ್ರತಿಭಟನಾ ಪ್ರದರ್ಶನದಲ್ಲಿ ಅವರು ಮಾತನಾಡಿದರು.
‘ಜನರ ಮೂಲಭೂತ ಸಮಸ್ಯೆ ಮರೆಮಾಚಲು ಧರ್ಮವನ್ನು ರಾಜಕೀಯಕ್ಕೆ ಬಳಸಿ ಭಾವನಾತ್ಮಕ ವಿಚಾರದಲ್ಲಿ ಜನರೊಳಗೆ ವಿಘಟನೆ ತರುತ್ತಿರುವುದು ಈ ಸರ್ಕಾರದ ಹವ್ಯಾಸವಾಗಿದೆ’ ಎಂದು ಆಪಾದಿಸಿದರು.
ವಿ.ಎಸ್. ಬೇರಿಂಜ ಸ್ವಾಗತಿಸಿದರು. ಕಟ್ಟಡ ಕಾರ್ಮಿಕರ ಮುಖಂಡ ಎಂ. ಕರುಣಾಕರ್, ಎಐವೈಎಫ್ ತಾಲ್ಲೂಕು ಕಾರ್ಯದರ್ಶಿ ಜಗತ್ಪಾಲ್ ಕೋಡಿಕಲ್ ವಂದಿಸಿದರು. ಆರ್.ಡಿ ಸೋನ್ಸ್, ಭುಜಂಗ ಕೋಡಿಕಲ್, ಸುಧಾಕರ್ ಕಲ್ಲೂರು, ಕೃಷ್ಣಪ್ಪ ವಾಮಂಜೂರು, ದಿನೇಶ್ ಕಾಯರ್ಮಾರ್, ಸುಲೋಚನಾ ಕವತ್ತಾರು, ಸಂಜೀವಿ ಹಳೆಯಂಗಡಿ ಇದ್ದರು.