ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಷ್ಟದಿಂದ ದಡ ಸೇರುತ್ತಿರುವ ಬೋಟ್‌ಗಳು

ಡೀಸೆಲ್ ಬೆಲೆಯ ನಾಗಾಲೋಟ: ಮೀನುಗಾರಿಕೆಗೆ ಮತ್ತೊಂದು ಹೊಡೆತ
Last Updated 9 ಜನವರಿ 2021, 19:31 IST
ಅಕ್ಷರ ಗಾತ್ರ

ಮಂಗಳೂರು: ದಿನದಿಂದ ದಿನಕ್ಕೆ ಡೀಸೆಲ್‌ ಬೆಲೆ ಹೆಚ್ಚಳವಾಗುತ್ತಿದ್ದು, ವಾಹನಗಳ ಮಾಲೀಕರಿಗೆ ಹೊರೆಯಾಗಿದೆ. ಇದೀಗ ಕರಾವಳಿಯ ಪ್ರಮುಖ ಉದ್ಯೋಗವಾದ ಮೀನುಗಾರಿಕೆಗೂ ಡೀಸೆಲ್‌ ಬೆಲೆ ಹೆಚ್ಚಳ ಸಂಕಷ್ಟ ತಂದೊಡ್ಡಿದೆ.

ಡೀಸೆಲ್‌ ಬೆಲೆಯಲ್ಲಿ ಆಗುತ್ತಿರುವ ಹೆಚ್ಚಳದಿಂದಾಗಿ ಮೀನುಗಾರಿಕೆ ತೆರಳುವ ಬೋಟ್‌ಗಳು ನಷ್ಟ ಅನುಭವಿಸುವಂತಾಗಿದೆ. ಇದರಿಂದಾಗಿ ಬೋಟ್‌ಗಳ ಮಾಲೀಕರು, ಮೀನುಗಾರಿಕೆಗೆ ಇಳಿಯುವುದೇ ಬೇಡ ಎನ್ನುವ ನಿರ್ಧಾರಕ್ಕೆ ಬರುತ್ತಿದ್ದಾರೆ. ಈಗಾಗಲೇ ಶೇ 60 ರಷ್ಟು ಬೋಟ್‌ಗಳು ಬಂದರಿನಲ್ಲಿ ಲಂಗರು ಹಾಕಿವೆ ಎಂದು ಬೋಟ್‌ಗಳ ಮಾಲೀಕರು ಹೇಳುತ್ತಾರೆ.

2019ರಲ್ಲಿ ಚಂಡಮಾರುತಗಳ ಹೊಡೆತಕ್ಕೆ ಸಿಲುಕಿದ್ದ ಮೀನುಗಾರಿಕೆ, ಕಳೆದ ವರ್ಷ ಕೋವಿಡ್–19 ನಿಂದ ತೊಂದರೆ ಅನುಭವಿಸುವಂತಾಗಿತ್ತು. ಇದೀಗ ಕಡಲಿಗೆ ಇಳಿಯುವ ಹುಮ್ಮಸ್ಸು ಮೈಗೂಡಿಸಿಕೊಳ್ಳುತ್ತಿರುವ ಸಂದರ್ಭದಲ್ಲಿಯೇ ಡೀಸೆಲ್‌ ಬೆಲೆ ಹೆಚ್ಚಳವಾಗಿದೆ. ಹೀಗಾಗಿ ಮೀನುಗಾರಿಕೆ ಮತ್ತೊಂದು ಸಂಕಷ್ಟವನ್ನು ಎದುರಿಸುವಂತಾಗಿದೆ.

ಪ್ರತಿ ಬಾರಿ ₹ 2–₹3 ಲಕ್ಷ ನಷ್ಟ: ಮೀನುಗಾರಿಕೆಗೆ ತೆರಳುವ ಬೋಟ್‌ಗಳು ಕನಿಷ್ಠ 10 ದಿನ ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತವೆ. ದಡಕ್ಕೆ ಮರಳುವಾಗ ಕನಿಷ್ಠ ₹ 7 ಲಕ್ಷ ಮೌಲ್ಯದ ಮೀನನ್ನು ತಂದರೆ ಮಾತ್ರ, ಬೋಟ್‌ಗಳ ಮಾಲೀಕರಿಗೆ ಅಷ್ಟಿಷ್ಟು ಲಾಭವಾಗುತ್ತದೆ.

‘ಸದ್ಯಕ್ಕೆ ಬೋಟ್‌ಗಳು ಸುಮಾರು ₹4–₹ 5 ಲಕ್ಷ ಮೌಲ್ಯದ ಮೀನುಗಳನ್ನಷ್ಟೇ ತರುತ್ತಿವೆ. ಡೀಸೆಲ್‌ ಬೆಲೆ ಹೆಚ್ಚಾಗಿರುವುದರಿಂದ ಪ್ರತಿ ಬಾರಿ ಬೋಟ್‌ಗಳಿಗೆ ₹2–₹3 ಲಕ್ಷ ನಷ್ಟ ಉಂಟಾಗುತ್ತಿದೆ. ಕಾರ್ಮಿಕರಿಗೆ ಸಂಬಳ ಕೊಡುವುದಕ್ಕೆ ಸಾಧ್ಯವಾಗುತ್ತಿಲ್ಲ’ ಎಂದು ಬೋಟ್‌ ಮಾಲೀಕ ರಾಜರತ್ನ ಪುತ್ರನ್‌ ಹೇಳುತ್ತಾರೆ.

‘ಡೀಸೆಲ್‌ಗೆ ಸಬ್ಸಿಡಿ ನೀಡಲಾಗುತ್ತದೆ ಎಂದು ಹೇಳುತ್ತಾರೆ. ಆದರೆ, 9 ಸಾವಿರ ಲೀಟರ್‌ವರೆಗೆ ಮಾತ್ರ ಸಬ್ಸಿಡಿ ದೊರೆಯುತ್ತದೆ. ಅದಕ್ಕಿಂತ ಹೆಚ್ಚಿನ ಡೀಸೆಲ್‌ ಅನ್ನು ಪೂರ್ಣ ಹಣ ಕೊಟ್ಟೇ ಖರೀದಿಸಬೇಕು. ಜೊತೆಗೆ ಮೀನುಗಾರಿಕೆಗೆ ಬಳಸುವ ಡೀಸೆಲ್‌ ಮೇಲೆ ರಸ್ತೆ ತೆರಿಗೆ ಹಾಕಲಾಗುತ್ತಿದ್ದು, ಹೆಚ್ಚಿನ ಹೊರೆಯಾಗಿದೆ’ ಎಂದು ಅವರು ಹೇಳುತ್ತಾರೆ. ಇನ್ನೊಂದೆಡೆ ಸದ್ಯಕ್ಕೆ ಇಲ್ಲಿನ ಮೀನುಗಳಿಗೆ ಬೇಡಿಕೆಯೂ ಕುಸಿದಿದೆ. ಶೈತ್ಯಾಗಾರದಲ್ಲಿ ಸಂಗ್ರಹಿಸಿರುವ ಮೀನುಗಳ ಮಾರಾಟವೂ ಆಗುತ್ತಿಲ್ಲ. ಹೀಗಾಗಿ ಶೈತ್ಯಾಗಾರ ಸೇರಿರುವ ಮೀನುಗಳ ಹಣವೂ ಬೋಟ್‌ಗಳ ಮಾಲೀಕರಿಗೆ ಸಿಗುತ್ತಿಲ್ಲ. ಇದೆಲ್ಲದರ ಪರಿಣಾಮ ಮೀನುಗಾರಿಕೆ ನಷ್ಟ ಅನುಭವಿಸುವಂತಾಗಿದೆ ಎನ್ನುವುದು ಬೋಟ್‌ ಮಾಲೀಕರ ಅಳಲು.

ಕಾರ್ಮಿಕರೂ ಊರಿಗೆ

ಹೊರ ರಾಜ್ಯಗಳ ಕಾರ್ಮಿಕರನ್ನೇ ಅವಲಂಬಿಸಿರುವ ಮೀನುಗಾರಿಕೆ ಬೋಟ್‌ಗಳ ಮಾಲೀಕರು, ಮತ್ತೊಮ್ಮೆ ಕಾರ್ಮಿಕರ ಕೊರತೆ ಎದುರಿಸುವಂತಾಗಿದೆ.

ಕ್ರಿಸ್‌ಮಸ್‌, ಹೊಸ ವರ್ಷ ಹಾಗೂ ಪೊಂಗಲ್‌ ಹಬ್ಬಕ್ಕಾಗಿ ತಮಿಳುನಾಡು, ತೆಲಂಗಾಣದ ಕಾರ್ಮಿಕರು ಮತ್ತೆ ತಮ್ಮ ಊರುಗಳಿಗೆ ತೆರಳಿದ್ದಾರೆ. ಹೀಗಾಗಿ ಬೋಟ್‌ಗಳಲ್ಲಿ ಮೀನುಗಾರಿಕೆಗೆ ತೆರಳುವವರೂ ಇಲ್ಲದಂತಾಗಿದೆ ಎಂದು ಮೀನುಗಾರ ಮುಖಂಡರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT