ಮಂಗಳೂರು: ಸರ್ಕಾರ ಹಾಗೂ ಜಿಲ್ಲಾ ಆಡಳಿತ ಯಶಸ್ವಿ ಅಗಲು ಎಲ್ಲ ವರ್ಗದ ನೌಕರರ ಕಾರ್ಯ ದಕ್ಷತೆ ಅಗತ್ಯ. ಕೋವಿಡ್ಸಂದರ್ಭದಲ್ಲಿ ಸಿಬ್ಬಂದಿ ತೋರಿಸಿದ ಕಾರ್ಯ ಕ್ಷಮತೆ ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಹೇಳಿದರು.
ಮಂಗಳೂರಿನ ಪುರಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಾಜ್ಯ ಸರ್ಕಾರಿ ನೌಕರರ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸರ್ಕಾರಿ ಕೆಲಸಕ್ಕೆ ಸೇರುವಾಗ ಜನರಿಗೆ ಉತ್ತಮ ಸೇವೆ ನೀಡಬೇಕು ಎಂಬ ಹಂಬಲದಿಂದ ಸೇರಿರುತ್ತೇವೆ. ಜನರ ಕಷ್ಟಗಳಿಗೆ ಸ್ಪಂದಿಸುವ ಭಾವನೆ ನಮ್ಮೆಲ್ಲರಲ್ಲಿ ಬರಬೇಕು ಎಂದರು.
ಕರ್ತವ್ಯದ ಅವಧಿಯಲ್ಲಿ ನಾವು ಮಾಡುವ ಕೆಲಸದಲ್ಲಿ ಬದ್ಧತೆ ಅಗತ್ಯ. ನೌಕರರ ದಿನಾಚರಣೆ ವೇಳೆ ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ನಮ್ಮಲ್ಲಿ ಬದಲಾಗಬೇಕು ಎಂಬ ಭಾವನೆ ಬಂದರೆ. ಬದಲಾವಣೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸರ್ವೋತ್ತಮ ಸೇವಾ ಪ್ರಶಸ್ತಿ ವಿತರಣೆ ಮಾಡಲಾಯಿತು. ಜತೆಗೆ ಪ್ರತಿಭಾ ಪುರಷ್ಕಾರ ನೀಡಲಾಯಿತು.
ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೊನಾವಣೆ, ಜಿಲ್ಲಾ ಪಂಚಾಯಿತಿ ಸಿಇಒ ಡಾ. ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಸೇರಿದಂತೆ ವಿವಿಧ ಇಲಾಖೆಯ ಸಿಬ್ಬಂದಿ ಇದ್ದರು.