ಮಂಗಳೂರು: ಬಹುಜನ ಸಮಾಜ ಪಕ್ಷವು (ಬಿಎಸ್ಪಿ) ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಕಾಂತಪ್ಪ ಅಲಂಗಾರ್ ಅವರನ್ನು ಕಣಕ್ಕಿಳಿಸಲಿದೆ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಗೋಪಾಲ ಮುತ್ತೂರು ತಿಳಿಸಿದರು.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನವ ಮಂಗಳೂರು ಬಂದರು ಪ್ರಾಧಿಕಾರದಲ್ಲಿ ಉದ್ಯೋಗದಲ್ಲಿದ್ದ ಕಾಂತಪ್ಪ ಅವರು ನಿವೃತ್ತಿ ಹೊಂದಿದ ಬಳಿಕ ಪಕ್ಷದ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ. ಪಕ್ಷದ ರಾಜ್ಯ ಸಮಿತಿಯ ಕಾರ್ಯದರ್ಶಿಯಾಗಿ, ಸಮಾಜ ಪರಿವರ್ತನಾ ಚಳವಳಿಯಲ್ಲೂ ಮುಂಚೂಣಿಯಲ್ಲಿದ್ದಾರೆ. ಕಾರ್ಮಿಕರ, ರೈತರ, ಮಹಿಳೆಯರ ಹಾಗೂ ಶೋಷಿತರ ಹಕ್ಕುಗಳಿಗಾಗಿ ನಿರಂತರ ಹೋರಾಟ ನಡೆಸಿದ್ದಾರೆ’ ಎಂದರು.
ಕಾಂತಪ್ಪ ಅಲಂಗಾರ್, ‘ಬಿಜೆಪಿ ದುರಾಡಳಿತದಲ್ಲಿ ಕಳವಳಕಾರಿ ಬೆಳವಣಿಗೆಗಳು ದೇಶದಲ್ಲಿ ನಡೆದಿವೆ. ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಬಿಜೆಪಿ ಸಂಸದರೊಬ್ಬರು ಸಂವಿಧಾನವನ್ನೇ ಬದಲಿಸುವ ಹೇಳಿಕೆ ನೀಡಿದ್ದರು. ಇದು ಖಂಡನೀಯ’ ಎಂದರು.
‘ಚುನಾವಣಾ ಬಾಂಡ್ ಹಗರಣ ಬಿಜೆಪಿಯ ಬಣ್ಣವನ್ನು ಬಯಲು ಮಾಡಿದೆ. ನಮ್ಮ ಪಕ್ಷ ಯಾರಿಂದಲೂ ಚುನಾವಣಾ ಬಾಂಡ್ ಖರೀದಿಸಿಲ್ಲ. ಬಿಜೆಪಿ ಹಾಗೂ ಕಾಂಗ್ರೆಸ್ ದುರಾಡಳಿತದಿಂದ ಜನ ಬೇಸತ್ತಿದ್ದಾರೆ. ಸಂವಿಧಾನವನ್ನು ಉಳಿಸುವುದು ಹಾಗೂ ದೇಶವನ್ನು ರಕ್ಷಿಸುವುದು ನಮ್ಮ ಉದ್ದೇಶ’ ಎಂದರು.
ಪಕ್ಷದ ಮುಖಂಡರಾದ ನಾರಾಯಣ ಬೋಧ್, ದೇವಪ್ಪ ಬೋಧ್, ಶಿವಪ್ಪ ಗರ್ಡಾಡಿ, ಕಿರಣ್ ಎಡಪದವು, ಪಿ.ಎಸ್.ಶ್ರೀನಿವಾಸ್, ಶಿವರಾಂ ಪೇಜಾವರ, ಶಶಿಕಲಾ ಭಾಗವಹಿಸಿದ್ದರು.