ಮಂಗಳೂರು: ‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 100ಕ್ಕೂ ಹೆಚ್ಚು ಮುಜರಾಯಿಯೇತರ ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ ಕಡ್ಡಾಯಗೊಳಿಸಲು ದೇವಾಲಯಗಳ ವಿಶ್ವಸ್ಥರು ಒಪ್ಪಿದ್ದಾರೆ. ಹಂತ ಹಂತವಾಗಿ ಜಾರಿಗೊಳಿಸಲಾಗುವುದು’ ಎಂದು ಕರ್ನಾಟಕ ದೇವಸ್ಥಾನ– ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ಸಂಯೋಜಕ ಮೋಹನ ಗೌಡ ಹೇಳಿದರು.
ಶುಕ್ರವಾರ ಇಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ದೇವಸ್ಥಾನಗಳ ಅಧಿವೇಶನ ಪರಿಷತ್ತು ಸಭೆಯಲ್ಲಿ ಅವರು ಮಾತನಾಡಿದರು.
ದೇವಾಲಯಗಳು ಹಿಂದೂಗಳ ಪವಿತ್ರ ಕ್ಷೇತ್ರಗಳು. ಇಲ್ಲಿಗೆ ಬರುವಾಗ ಅಸಭ್ಯ ಉಡುಪು ಧರಿಸಿ ಬಂದರೆ ಪಾವಿತ್ರ್ಯ ಹಾಳಾಗುತ್ತದೆ. ಹೀಗಾಗಿ, ವಸ್ತ್ರಸಂಹಿತೆ ಕಡ್ಡಾಯಕ್ಳೆ ನಿರ್ಧರಿಸಲಾಗಿದೆ. ವಸ್ತ್ರಸಂಹಿತೆ ಕುರಿತು ಮಂಗಳಾರತಿ ಸಮಯದಲ್ಲಿ ತಿಳಿವಳಿಕೆ ನೀಡಲಾಗುವುದು‘ ಎಂದರು.
ಜಿಲ್ಲೆಯ ವಿವಿಧ ದೇವಸ್ಥಾನಗಳ 200ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದ ಸಭೆಯಲ್ಲಿ ಸ್ವೀಕರಿಸಿದ ಪ್ರಮುಖ ನಿರ್ಣಯಗಳು:
*ದೇವಸ್ಥಾನಗಳ ಜಾತ್ರೆ, ಉತ್ಸವ ಇತ್ಯಾದಿ ಸಂದರ್ಭಗಳಲ್ಲಿ ಅನ್ಯಮತೀಯರಿಗೆ ವ್ಯಾಪಾರ, ವಹಿವಾಟು ನಡೆಸಲು ಅವಕಾಶ ನೀಡಬಾರದು.
*ಮುಜರಾಯಿ ಇಲಾಖೆಯಡಿ ಬರುವ ದೇವಸ್ಥಾನಗಳಿಂದ ಸಂಗ್ರಹವಾಗುವ ಕಾಮನ್ ಪೂಲ್ ನಿಧಿಯನ್ನು ಹಿಂದೂ ಧಾರ್ಮಿಕ ಉದ್ದೇಶಕ್ಕೆ ಮಾತ್ರ ಬಳಸಬೇಕು.
* ರಾಜ್ಯದ ಅನೇಕ ದೇವಸ್ಥಾನಗಳು ಸರ್ಕಾರದ ನಿಯಂತ್ರಣದಲ್ಲಿದ್ದು, ಅವನ್ನು ಸರ್ಕಾರದ ಹಿಡಿತದಿಂದ ಮುಕ್ತಗೊಳಿಸಬೇಕು.