ಬೆಳ್ತಂಗಡಿ: ಕಾಂಕ್ರೀಟ್ ಮಿಕ್ಸಿಂಗ್ ಲಾರಿಗೆ ವಿದ್ಯುತ್ ತಂತಿ ಸಿಲುಕಿಕೊಂಡಿದ್ದನ್ನು ಗಮನಿಸದೆ, ಚಾಲಕ ವಾಹನವನ್ನು ಮುಂದಕ್ಕೆ ಚಲಾಯಿಸಿದ್ದರಿಂದ ಎರಡು ವಿದ್ಯುತ್ ಕಂಬಗಳು ರಸ್ತೆಗೆ ಉರುಳಿ ಬಿದ್ದ ಘಟನೆ ನಾಲ್ಕೂರು ಗ್ರಾಮದ ಸೂಳಬೆಟ್ಟು ಬಳಿ ಬುಧವಾರ ನಡೆದಿದೆ.
ವೇಣೂರು- ಅಳದಂಗಡಿ ರಸ್ತೆಯಲ್ಲಿನ ಸೂಳಬೆಟ್ಟು ಬಳಿ ಈ ಅವಘಡ ನಡೆದಿದೆ. ಸ್ಥಳಕ್ಕೆ ಮೆಸ್ಕಾಂ ಎಂಜಿನಿಯರ್, ವೇಣೂರು ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆಯಿಂದಾಗಿ ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು.15 ವಿದ್ಯುತ್ ಪರಿವರ್ತಕಗಳ ವ್ಯಾಪ್ತಿಯ 800 ಕ್ಕಿಂತ ಅಧಿಕ ಗ್ರಾಹಕರಿಗೆ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಉಂಟಾಯಿತು. ಘಟನೆ ರಾತ್ರಿ ನಡೆದ ಕಾರಣ ಹಾಗೂ ತಕ್ಷಣ ವಿದ್ಯುತ್ ಸಂಪರ್ಕ ಕಡಿತಗೊಂಡಿರುವುದರಿಂದ ಅನಾಹುತ ತಪ್ಪಿದೆ.
ಘಟನೆಯಿಂದ ಮೆಸ್ಕಾಂಗೆ ₹70 ಸಾವಿರಕ್ಕಿಂತ ಹೆಚ್ಚಿನ ನಷ್ಟ ಉಂಟಾಗಿದ್ದು, ಅದನ್ನು ಕನ್ಸ್ಟ್ರಕ್ಷನ್ ಕಂಪನಿ ವತಿಯಿಂದ ಭರಿಸಲಾಗುವುದು ಎಂದು ಠಾಣೆಯಲ್ಲಿ ಮುಚ್ಚಳಿಕೆ ನೀಡಲಾಗಿದೆ. ಸದ್ಯಕ್ಕೆ ಕಂಬಗಳು ಮುರಿದ ಜಾಗದಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದ್ದು, ವಿದ್ಯುತ್ ಪೂರೈಕೆ ಮಾಡಲಾಗಿದೆ.