ಮಂಗಳೂರು: ‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರಾಜ್ಯಕ್ಕೆ ಖಾಲಿ ಚೊಂಬು ನೀಡಿದೆ. ಆ ಚೊಂಬಿನಲ್ಲಿ ಹಾಕಬೇಕಾದ್ದನ್ನು ಹಾಕಿಲ್ಲ. ಈ ಬಗ್ಗೆ ಬಹಿರಂಗ ಚರ್ಚೆಗೆ ನಾವು ಸಿದ್ಧ. ಧೈರ್ಯವಿದ್ದರೆ, ಬಿಜೆಪಿಯವರೂ ಚರ್ಚೆಗೆ ಬರಲಿ’ ಎಂದು ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿಸೋಜ ಸವಾಲು ಹಾಕಿದರು.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಜನಧನ ಖಾತೆಗೆ ₹ 15 ಲಕ್ಷ ಹಾಕುತ್ತೇವೆ ಎಂದು ಭರವಸೆ ನೀಡಿದ್ದರು. ಅದನ್ನು ಹಾಕಿಲ್ಲ. ರೈತರ ಆದಾಯ ದ್ವಿಗುಣ ಮಾಡಿಲ್ಲ, ನೆರೆ- ಬರ ಪರಿಹಾರಕ್ಕೆ ರಾಜ್ಯಕ್ಕೆ ಅನುದಾನ ನೀಡಿಲ್ಲ. ಹಾಗಾಗಿಯೇ ಬಿಜೆಪಿಯವರು ಜನರಿಗೆ ಖಾಲಿ ಚೊಂಬು ನೀಡಿದ್ದಾರೆ ಎಂದು ಹೇಳಿದ್ದೇವೆ. ಈ ಬಗ್ಗೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಚರ್ಚೆಗೆ ಸಿದ್ಧರಿಲ್ಲ. ಅದರ ಬದಲು ನೀವು ರಾಮ ಮಂದಿರ ವಿರೋಧಿಗಳು ಎನ್ನುತ್ತಾರೆ. ಇವೆರಡಕ್ಕೂ ಏನಾದರೂ ಸಂಬಂಧ ಇದೆಯೇ’ ಎಂದು ಪ್ರಶ್ನಿಸಿದರು.
‘ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿಯ ಕೊಲೆಯನ್ನು ಯಾರೂ ಬೆಂಬಲಿಸಬಾರದು. ಸಂಸದೆ ಶೋಭಾ ಕರಂದ್ಲಾಜೆ ಬೇರೆ ವಿಚಾರದಲ್ಲಿ ಮಾತಾಡಲ್ಲ. ಈಗ ಕೊಲೆಯಲ್ಲಿ ಕಾಂಗ್ರೆಸ್ ಕೈವಾಡ ಅಂತಿದ್ದಾರೆ. ಈ ಪ್ರಕರಣದಲ್ಲಿ ಆರೋಪಿಯನ್ನು ಕೂಡಲೆ ಬಂಧಿಸಲಾಗಿದೆ. ಅದರ ಜೊತೆ ರಾಜಕೀಯ ಬೆರೆಸುವುದು ಏಕೆ. ಜನ ನಿಮ್ಮ ಮಾತುಗಳಿಗೆ ಜನ ಮೋಸ ಹೋಗಲಾರರು’ ಎಂದರು.
‘ರಾಜ್ಯದ ಸಮಸ್ಯೆಗಳ ಕುರಿತು ಸಂಸತ್ತಲ್ಲಿ ಒಂದು ಶಬ್ದವನ್ನೂ ಮಾತನಾಡದ ಬಿಜೆಪಿಯ ಸಂಸದರೂ ನಿಷ್ಪ್ರಯೊಜಕರು. ಕೆಲವು ಸಂಸದರು ಸಂಸತ್ತಲ್ಲಿ ಒಂದೇ ಒಂದು ಪ್ರಶ್ನೆ ಕೇಳಿಲ್ಲ. ಇನ್ನು ಕೆಲವರು ಸಂಸತ್ತಿನ ಮುಖವನ್ನೇ ನೋಡಿಲ್ಲ. ಅವರು ಯಾವತ್ತೂ ವಸೂಲಾಗದ ಸಾಲದಂತೆ (ಎನ್ಪಿಎ). ಚುನಾವಣೆ ಸಂದರ್ಭದಲ್ಲಿ ಚರ್ಚೆ ಆಗಬೇಕಾದುದು ಈ ವಿಷಯದ ಬಗ್ಗೆ. ಅಂತಹ ಸಂಸದರಿಗೆ ಈ ಸಲ ಮನೆಯ ದಾರಿ ತೋರಿಸಬೇಕು’ ಎಂದರು.
ಪಕ್ಷದ ಮುಖಂಡರಾದ ಶಾಹುಲ್ ಹಮೀದ್, ಶಶಿಧರ ಹೆಗ್ಡೆ, ಅಶ್ರಫ್, ಅಪ್ಪಿ, ಪ್ರಕಾಶ್ ಸಾಲ್ಯಾನ್, ಶುಭೋದಯ ಆಳ್ವ, ಎಂ.ಪಿ. ಮನೋರಾಜ್, ಪದ್ಮಪ್ರಸಾದ್ ಜೈನ್ ಅವರು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.