ಮಂಗಳೂರು: ಲಾಕ್ಡೌನ್ ಬಳಿಕ ಕೊಲ್ಲಿ ರಾಷ್ಟ್ರಗಳಿಂದ ಅನಿವಾಸಿ ಭಾರತೀಯರನ್ನು ಮಂಗಳೂರಿಗೆ ಕರೆತಂದ ಮೂರನೇ ವಿಮಾನವು ಬುಧವಾರ ಮಸ್ಕತ್ನಿಂದ ಹೊರಟು ಬೆಂಗಳೂರು ಮೂಲಕ ಮಂಗಳೂರಿಗೆ ರಾತ್ರಿ 8.05ಕ್ಕೆ ಬಂದಿಳಿಯಿತು.
‘ಒಟ್ಟು 63 ಪ್ರಯಾಣಿಕರಿದ್ದರು. ಪ್ರಯಾಣಿಕರ ಬೇಡಿಕೆಯಂತೆ ಅವರವರ ಜಿಲ್ಲೆಗಳಿಗೆ ಕಳುಹಿಸಿಕೊಡಲು ವ್ಯವಸ್ಥೆ ಮಾಡಲಾಯಿತು’ ಎಂದುನೋಡಲ್ ಅಧಿಕಾರಿ ರಾಹುಲ್ ಶಿಂಧೆ ತಿಳಿಸಿದರು.
ಒಟ್ಟು ಪ್ರಯಾಣಿಕರ ಪೈಕಿ ಉತ್ತರ ಕನ್ನಡದ 3, ಉಡುಪಿಯ 20 ಮತ್ತು ದಕ್ಷಿಣ ಕನ್ನಡ ಜಿಲ್ಲೆಯ 40 ಮಂದಿ ಪ್ರಯಾಣಿಕರು ಇದ್ದರು. ಇದರಲ್ಲಿ ಏಳು ಮಂದಿ ಗರ್ಭಿಣಿಯರು ಎಂದು ತಿಳಿದುಬಂದಿದೆ.
ಪ್ರಯಾಣಿಕರಿಗೆ ಆರೋಗ್ಯ ಪರೀಕ್ಷೆ, ಕ್ವಾರಂಟೈನ್ ಹೋಟೆಲ್ ನಿಗದಿ, ಊಟೋಪಚಾರ, ಇಮಿಗ್ರೇಷನ್ ಹಾಗೂ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಡಲಾಗಿದೆ.
ದುಬೈನಿಂದ ಬಂದಿದ್ದ ಮೊದಲ ವಿಮಾನದಲ್ಲಿ ಜಿಲ್ಲೆಯಲ್ಲಿ ಉಳಿದ 125 ಮಂದಿ ಪೈಕಿ 9 ಹಾಗೂ ಎರಡನೇ ವಿಮಾನದ 110 ಮಂದಿ ಪೈಕಿ 24 ಜನರಿಗೆ ಸರ್ಕಾರದ ವ್ಯವಸ್ಥೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಸೌದಿಯಿಂದ ಬೆಂಗಳೂರಿಗೆ ಬಂದಿಳಿದ ವಿಮಾನದಲ್ಲೂ ದಕ್ಷಿಣ ಕನ್ನಡ ಜಿಲ್ಲೆಯ 20 ಮಂದಿ ಪ್ರಯಾಣಿಕರು ಇದ್ದರು ಎಂದು ಎನ್ಆರ್ಐ ಟಾಸ್ಕ್ಫೋರ್ಸ್ ಘಟಕ ತಿಳಿಸಿದೆ.