ಬಂಟ್ವಾಳ: ಇಲ್ಲಿಗೆ ಸಮೀಪದ ಫರಂಗಿಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಪುತ್ತೂರು ವಲಯ ಅರಣ್ಯಾಧಿಕಾರಿ ಕಚೇರಿಯ ಜೀಪು ಮಂಗಳವಾರ ರಾತ್ರಿ ಡಿಕ್ಕಿ ಹೊಡೆದು ಗಾಯಗೊಂಡಿದ್ದ ಪಾದಚಾರಿ ಮೃತಪಟ್ಟಿದ್ದಾರೆ.
ಗಂಭೀರ ಗಾಯಗೊಂಡಿದ್ದ 45ರ ವಯಸ್ಸಿನ ಗಾಯಾಳುವನ್ನು ಸ್ಥಳೀಯರು ಅದೇ ಜೀಪಿನಲ್ಲಿ ಕರೆದೊಯ್ದು ಮಂಗಳೂರಿನ ಆಸ್ಪತ್ರೆಯೊಂದಕ್ಕೆ ದಾಖಲಿಸಿದ್ದಾರೆ. ಪುತ್ತೂರು ವಲಯ ಅರಣ್ಯಾಧಿಕಾರಿಯ ಜೀಪನ್ನು ಚಾಲಕ ಜಗದೀಶ ಎಂಬವರು ಚಲಾಯಿಸಿದ್ದರು. ಆಗ ಕಚೇರಿ ಸಿಬ್ಬಂದಿ ಪ್ರಕಾಶ್ ಎಂಬುವರು ಅವರ ಜೊತೆಗಿದ್ದರು. ಈ ಸಂದರ್ಭದಲ್ಲಿ ರಸ್ತೆ ದಾಟುತ್ತಿದ್ದ ಪಾದಚಾರಿಗೆ ಜೀಪು ಡಿಕ್ಕಿ ಹೊಡೆದಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದೇ ವೇಳೆ ಸ್ಥಳೀಯರು ಜಮಾಯಿಸುತ್ತಿದ್ದಂತೆಯೇ ಜೀಪು ಚಾಲಕ ಮತ್ತು ಸಿಬ್ಬಂದಿ ಸ್ಥಳದಿಂದ ಪಲಾಯನ ಮಾಡಿದ್ದರು.
‘ಈ ಜೀಪಿನಲ್ಲಿ ನೋಟಿನ ಕಂತೆಗಳು ಇದ್ದವು’ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಪಘಾತ ನಡೆದಿದ್ದ ಸ್ಥಳ ಪರಿಶೀಲನೆ ನಡೆಸಿರುವ ಬಂಟ್ವಾಳ ಸಂಚಾರ ಠಾಣೆ ಪಿಎಸ್ಐ ಸುತೇಶ್ ಕುಮಾರ್ ಇದನ್ನು ನಿರಾಕರಿಸಿದ್ದಾರೆ.