ಕಲಾವಿದರಿಗೆ ಹೆಚ್ಚು ಅವಕಾಶ ಸಿಗಲಿ ಗಣೇಶೋತ್ಸವ ಸಾಧ್ಯವಾದಷ್ಟೂ ಸಾಂಪ್ರದಾಯಿಕ ಚೌಕಟ್ಟಿನಲ್ಲಿ ಸಾಂಸ್ಕೃತಿಕ ಸ್ಪರ್ಶದೊಂದಿಗೆ ನಡೆಯಬೇಕು. ತೌಳವ ಸಂಸ್ಕೃತಿ ಅದರಲ್ಲಿ ಮೇಳೈಸಬೇಕು. ಕಲಾ ಕಾರ್ಯಕ್ರಮಗಳಿಗೆ ವೇದಿಕೆ ಸೃಷ್ಟಿಸಿ ರಾಷ್ಟ್ರೀಯ ಕಲಾವಿದರೂ ಇಲ್ಲಿಗೆ ಬಂದು ಪ್ರದರ್ಶನ ನೀಡುವಂತೆ ಮಾಡಬೇಕು. ಹಬ್ಬದ ಆಚರಣೆ ಸಮಾಜಕ್ಕೆ ಸಂದೇಶ ನಿಡುವಂತಿರಬೇಕು. ಗಣಪತಿಯನ್ನು ಸಣ್ಣವರಿಂದ ಹಿಡಿದು ಹಿರಿಯರ ವರೆಗೆ ಎಲ್ಲರೂ ಪೂಜಿಸುತ್ತಾರೆ. ಆದ್ದರಿಂದಲೇ ಬಾಲಗಣಪತಿಯಿಂದ ಶೂರ ಗಣಪತಿಯ ವರೆಗಿನ ಎಲ್ಲ ಬಗೆಯ ಗಣಪ ಹಬ್ಬದ ಸಂದರ್ಭದಲ್ಲಿ ವಿಜೃಂಭಿಸುತ್ತಾನೆ. ಕಜ್ಜಾಯ ಮೋದಕದಿಂದ ಹಿಡಿದು ಮೃಷ್ಟಾನ್ನ ಭೋಜನವೂ ಸಂಭ್ರಮದಲ್ಲಿ ಅಡಕವಾಗಿರುತ್ತದೆ. ಅಂಥ ಗಣಪನಿಗೆ ಸರ್ವಧರ್ಮ ಸಮನ್ವಯದ ನೆಲೆಯಲ್ಲಿ ಪೂಜೆಯಾಗಬೇಕು. ಅದಕ್ಕೆ ಶಬ್ದ ಮಾಲಿನ್ಯ ಅಥವಾ ಸಾಂಸ್ಕೃತಿಕ ಮಾಲಿನ್ಯದ ಕಳಂಕ ಉಂಟಾಗಬಾರದು.
ಪ್ರದೀಪ್ ಕುಮಾರ್ ಕಲ್ಕೂರ ಸಂಸ್ಕೃತಿ ಚಿಂತಕ
ಸಾರ್ವಜನಿಕ ಗಣೇಶೋತ್ಸವ 28ನೇ ವರ್ಷಕ್ಕೆ ಕಾಲಿಡುತ್ತಿದೆ. ಕ್ರೀಡೆ ಸಾಂಸ್ಕೃತಿಕ ಕಾರ್ಯಕ್ರಮ ವಿವಿಧ ಸ್ಪರ್ಧೆಗಳು ನಮ್ಮಲ್ಲಿ ಎರಡು ದಿನಗಳ ಉತ್ಸವದ ಪ್ರಮುಖ ಅಂಶಗಳು. ಈ ಹಬ್ಬಕ್ಕಾಗಿ ಪ್ರತಿ ವರ್ಷ ಕಾಯುತ್ತಾ ಇರುತ್ತೇವೆ. ಎಲ್ಲವನ್ನೂ ಮರೆತು ಪಾಲ್ಗೊಳ್ಳುತ್ತೇವೆ. ಮೂರನೇ ತರಗತಿ ವಿದ್ಯಾರ್ಥಿಯಿಂದ ಹಿಡಿದು ಎಲ್ಲ ವಯಸ್ಸಿನವರೂ ಸಮಿತಿಯಲ್ಲಿ ಇದ್ದಾರೆ. ಗಣೇಶೋತ್ಸವ ಆಚರಣೆ ಮಾಡುವುದರಿಂದ ಮಾನಸಿಕ ನೆಮ್ಮದಿ ಸಿಗುತ್ತಿದೆ. ಇಷ್ಟಾರ್ಥ ಸಿದ್ಧಿ ಆಗುತ್ತಿದೆ.