ಮಂಗಳೂರು: ಜಲಸಾರಿಗೆ ಕ್ಷೇತ್ರದಲ್ಲಿ ದೇಶಕ್ಕೆ ಉಜ್ವಲ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಮುಂಬೈನಲ್ಲಿ ಏರ್ಪಡಿಸಿದ್ದ ಜಾಗತಿಕ ಕಡಲ ಭಾರತೀಯ ಶೃಂಗ– 2023ರಲ್ಲಿ (ಜಿಎಂಐಎಸ್ 2023) ನವಮಂಗಳೂರು ಬಂದರು ಪ್ರಾಧಿಕಾರ ಒಟ್ಟು ಏಳು ಒಪ್ಪಂದಗಳಿಗೆ ಸಹಿ ಹಾಕಿದ್ದು ಇವುಗಳ ಒಟ್ಟು ಮೌಲ್ಯ ₹ 8347 ಕೋಟಿ.
‘ಮಂಗಳವಾರದಿಂದ ಗುರುವಾರದವರೆಗೆ ನಡೆದ ಮೂರು ದಿನಗಳ ಈ ಶೃಂಗವು ಗುರುವಾರ ಸಂಪನ್ನವಾಗಿದ್ದು, ಇದರಲ್ಲಿ ಒಟ್ಟು 71 ದೇಶಗಳ ಪ್ರತಿನಿಧಿಗಳು, ವಿವಿಧ ಉದ್ಯಮ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಈ ಶೃಂಗದಲ್ಲಿ ಎನ್ಎಂಪಿಎ ಒಟ್ಟು ₹ 8,347 ಕೋಟಿ ಮೌಲ್ಯದ ಏಳು ಒಪ್ಪಂದಗಳಿಗೆ ಸಹಿ ಹಾಕಿದೆ. ಈ ಒಪ್ಪಂದಗಳು ನವಮಂಗಳೂರು ಬಂದರನ್ನು ಮತ್ತಷ್ಟು ವಿಸ್ತರಿಸಲು ಹಾಗೂ ಮೂಲಸೌಕರ್ಯ ಹೆಚ್ಚಿಸಿ ಇನ್ನಷ್ಟು ಅಭಿವೃದ್ಧಿಪಡಿಸಲು ನೆರವಾಗಲಿವೆ’ ಎಂದು ಎನ್ಎಂಪಿಎ ತಿಳಿಸಿದೆ.
‘ಉದ್ಯಮ ವಹಿವಾಟು ಪ್ರಗತಿಗಾಗಿ ಬಂದರು ಆಧರಿತ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಮಂಗಳೂರು ರಿಫೈನರಿ ಮತ್ತು ಪೆಟ್ರೋ ಕೆಮಿಕಲ್ಸ್ (ಎಂಆರ್ಪಿಎಲ್) ಕಂಪನಿಯ ಜೊತೆ ₹ 5ಸಾವಿರ ಕೋಟಿ ಮೌಲ್ಯದ ಒಪ್ಪಂದಕ್ಕೆ ಎನ್ಎಂಪಿಎ ಶೃಂಗದ ಮೊದಲ ದಿನ ಸಹಿ ಹಾಕಿತು. ನಂತರ ಉಪ್ಪುನೀರಿನಿಂದ ಲವಣಾಂಶ ಹೊರತೆಗೆಯುವ ಘಟಕ ಸ್ಥಾಪನೆ ಸಂಬಂಧ ₹ 1500 ಕೋಟಿ ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಿದೆ.’
‘ಬಂದರು ಆಧರಿತ ಕೈಗಾರಿಕೀಕರಣ ಕಾರ್ಯಕ್ರಮದಡಿ ಎಚ್ಪಿಸಿಎಲ್, ಐಒಸಿಎಲ್, ಕರ್ನಾಟಕ ಜಲಸಾರಿಗೆ ಮಂಡಳಿ, ಮತ್ತು ಸೀಲಾರ್ಡ್ ಕಂಟೈನರ್ಸ್ ಲಿಮಿಟೆಡ್ ಕಂಪನಿಗಳ ಜೊತೆ ಒಟ್ಟು ನಾಲ್ಕು ಒಪ್ಪಂದಗಳಿಗೆ ಎರಡನೇ ದಿನ ಸಹಿ ಹಾಕಲಾಗಿದೆ. ಕೊನೇಯ ದಿನ, ಸಂಗ್ರಹಾಗರ/ಫಾರಮ್ ಸ್ಥಾಪನೆ ಸಂಬಂಧ ಪಿಎಚ್ಪಿಸಿ ಜೊತೆ ₹ 47 ಕೋಟಿ ಮೌಲ್ಯದ ಒಪ್ಪಂದ ಮಾಡಿಕೊಳ್ಳಲಾಗಿದೆ’ ಎಂದು ಎನ್ಎಂಪಿಎ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಶೃಂಗದಲ್ಲಿ ಎನ್ಎಂಪಿಎ ಭಾಗವಹಿಸುವಿಕೆ ಕುರಿತು ಪ್ರತಿಕ್ರಿಯಿಸಿರುವ ಪ್ರಾಧಿಕಾರದ ಅಧ್ಯಕ್ಷ ಎ.ವಿ.ರಮಣ, ‘ಜಿಎಂಐ ಶೃಂಗದ 2023ರ ಆವೃತ್ತಿಯಲ್ಲಿ ನಮ್ಮ ಬಂದರಿನ ಪಾತ್ರವೂ ಚೇತೋಹಾರಿಯಾಗಿತ್ತು. ಜಲಸಾರಿಗೆ ಕ್ಷೇತ್ರದಲ್ಲಿ ಭಾರತದ ಸಾಮರ್ಥ್ಯ ವರ್ಧನೆಯಾಗುತ್ತಿರುವುದಕ್ಕೆ ಈ ಶೃಂಗದ ಯಶಸ್ಸೇ ಸಾಕ್ಷಿ. ಈ ಕ್ಷೇತ್ರಕ್ಕೆ ತನ್ನಿಂದಾದ ಕೊಡುಗೆ ನೀಡಲು ಎನ್ಎಂಪಿಎ ಸದಾ ಬದ್ಧ. ನಾವು ಮಾಡಿಕೊಂಡಿರುವ ಎಲ್ಲ ಒಪ್ಪಂದಗಳು ಬಂದರಿನ ಅಭಿವೃದ್ಧಿಗೆ ಪೂರಕವಾಗಿದ್ದು, ಸರಿಯಾದ ದಿಕ್ಕಿನಲ್ಲೇ ಇವೆ’ ಎಂದು ತಿಳಿಸಿದ್ದಾರೆ.