ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉನ್ನತ ಶಿಕ್ಷಣದ ಪಠ್ಯ ಕನ್ನಡದಲ್ಲಿ: ಥಾವರಚಂದ್‌ ಗೆಹಲೋತ್‌

ಮಂಗಳೂರು ವಿಶ್ವವಿದ್ಯಾಲಯದ 41 ನೇ ಘಟಿಕೋತ್ಸವ
Last Updated 15 ಮಾರ್ಚ್ 2023, 10:07 IST
ಅಕ್ಷರ ಗಾತ್ರ

ಕೊಣಾಜೆ: ‘ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಎಲ್ಲ ಪಠ್ಯಗಳನ್ನು ಕನ್ನಡದಲ್ಲೇ ರೂಪಿಸಲಾಗುತ್ತದೆ. ಈ ಐತಿಹಾಸಿಕ ತೀರ್ಮಾನ ಕೈಗೊಂಡ ಮೊದಲ ರಾಜ್ಯ ಕರ್ನಾಟಕ’ ಎಂದು ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಹೇಳಿದರು.

ಮಂಗಳೂರು ವಿಶ್ವವಿದ್ಯಾಲಯದ 41ನೇ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಅವರು ಬುಧವಾರ ಮಾತನಾಡಿದರು.

‘ಕೇಂದ್ರ ಸರ್ಕಾರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸ್ಥಳೀಯ ಭಾಷೆಯಲ್ಲಿ ಶಿಕ್ಷಣ ನೀಡುವುದಕ್ಕೆ ಉತ್ತೇಜನ ನೀಡುತ್ತಿದೆ. ಇದಕ್ಕೆ ಪೂರಕವಾಗಿ ಪಠ್ಯ ಪುಸ್ತಕವನ್ನು ಆಯಾ ನಾಡಿನ ಭಾಷೆಯಲ್ಲಿ ರೂಪಿಸಲು ಕಾರ್ಯಕ್ರಮ ರೂಪಿಸಲಾಗಿದೆ. ಇದರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಅಧಿಕಾರಿಗಳು, ರಾಜ್ಯ ಸರ್ಕಾರದ ಅಧಿಕಾರಿಗಳು ಹಾಗೂ ರಾಜ್ಯದ ಸರ್ಕಾರಿ ವಿಶ್ವವಿದ್ಯಾಲಯಗಳ ಕುಲಪತಿಗಳ ಸಭೆಯು ನನ್ನ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆದಿದೆ. ಉನ್ನತ ಶಿಕ್ಷಣ ಪಠ್ಯಪುಸ್ತಕಗಳನ್ನು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಹಾಗೂ ಕಡಿಮೆ ಸಮಯದಲ್ಲಿ ಕನ್ನಡದಲ್ಲಿ ಸಿದ್ಧಪಡಿಸುವ ನಿರ್ಣಯವನ್ನು ಈ ಸಭೆಯಲ್ಲಿ ಕೈಗೊಳ್ಳಲಾಗಿದೆ’ ಎಂದರು.

‘ಜಗತ್ತಿನ ಮುಂದುವರಿದ ರಾಷ್ಟ್ರಗಳಲ್ಲೆಲ್ಲಾ ತಮ್ಮ ನಾಡಿನ ಭಾಷೆಯಲ್ಲೇ ಶಿಕ್ಷಣ ಪಡೆದು ಉನ್ನತಿ ಸಾಧಿಸಿವೆ. ಇಂಗ್ಲಿಷ್‌ನಲ್ಲಿ ಶಿಕ್ಷಣ ಪಡೆದರೆ ಮಾತ್ರ ಅಭಿವೃದ್ಧಿ ಸಾಧ್ಯ ಎಂಬುದನ್ನು ಸುಳ್ಳಾಗಿಸಿವೆ. ಜರ್ಮನಿ, ಜಪಾನ್‌, ಫ್ರಾನ್ಸ್‌, ಚೀನಾದಂತಹ ದೇಶಗಳು ತಮ್ಮ ಭಾಷೆಯಲ್ಲಿ ಶಿಕ್ಷಣ ನೀಡುವ ಮೂಲಕವೇ ದೊಡ್ಡ ದೊಡ್ಡ ಉಪಕರಣಗಳನ್ನು ತಯಾರಿಸುವ ತಾಂತ್ರಿಕತೆಯನ್ನು ಅಭಿವೃದ್ಧಿಪಡಿಸಿವೆ’ ಎಂದರು.

‘ಭಾರತವು ಈ ಹಿಂದೆ ವಿಶ್ವಗುರು ಮನ್ನಣೆ ಗಳಿಸಿದ ಕಾಲದಲ್ಲಿ ಇಲ್ಲೂ ದೇಸಿ ಭಾಷೆಯಲ್ಲೇ ಶಿಕ್ಷಣ ನೀಡಲಾಗುತ್ತಿತ್ತು. ನಾಡಿನ ಭಾಷೆಯಲ್ಲೇ ಅಧ್ಯಯನ ನಡೆಸಿದರೆ ದೇಶದ ಅಭಿವೃದ್ಧಿಗೂ ವೇಗ ನೀಡಬಹುದು’ ಎಂದರು.

‘ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವುದು ನಮ್ಮೆಲ್ಲರ ಗುರಿಯಾಗಬೇಕು. ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ನಮಗೆ ಮುಂದಿನ 25 ವರ್ಷಗಳು ಅಮೃತ ಕಾಲ ಇದ್ದಂತೆ. ಈ ಅವಧಿಯನ್ನು ‘ಕರ್ತವ್ಯದ ಕಾಲ’ ಎಂದು ಪರಿಗಣಿಸಿ ದೇಶದ ಅಭಿವೃದ್ಧಿಗೆ ಇನ್ನಷ್ಟು ವೇಗ ನೀಡಬೇಕು. ಮುಂದುವರಿದ ರಾಷ್ಟ್ರಗಳಲ್ಲಿ ನಮ್ಮ ದೇಶವು ಮೊದಲ ಸಾಲಿನಲ್ಲಿ ನಿಲ್ಲುವಂತೆ ಮಾಡಬೇಕು’ ಎಂದರು.

‘ಪರಿಸರ ಅಸಮತೊಲನ ಜಗತ್ತಿನ ಅತಿ ದೊಡ್ಡ ಸಮಸ್ಯೆ. ಪರಿಸರವನ್ನು ಶುದ್ಧವಾಗಿ ಹಾಗೂ ಸದೃಢವಾಗಿ ಇರಿಸುವ ತುರ್ತು ಅಗತ್ಯ ಇದೆ. ನೀರಿಲ್ಲದಿದ್ದರೆ, ವಾತಾವರಣದಲ್ಲಿ ಆಮ್ಲಜನಕದ ಕೊರತೆ ಎದುರಾದರೆ ಪ್ರಾಣಿಸಂಕುಲದ ಮೇಲೆ ಏನೆಲ್ಲ ಪರಿಣಾಮ ಉಂಟಾಗಬಹುದು ಎಂದು ಊಹಿಸಿ. ನೀರಿನ, ವಾತಾವರಣದ ಹಾಗೂ ಕಾಡಿನ ಸಂರಕ್ಷಣೆ ಅವಶ್ಯಕ ಕ್ರಮಕೈಗೊಳ್ಳಬೇಕು’ ಎಂದರು.

‘ಭಾರತವನ್ನು ಒಂದೊಮ್ಮೆ ಚಿನ್ನದ ನಾಡು ಎಂದೇ ಕರೆಯಲಾಗುತ್ತಿತ್ತು. ಪ್ರಸ್ತುತ ದೇಶದ ಅರ್ಥವ್ಯವಸ್ಥೆ ಜಗತ್ತಿನಲ್ಲಿ ಐದನೇ ಸ್ಥಾನದಲ್ಲಿದೆ. ಇದನ್ನು ಇನ್ನಷ್ಟು ಉತ್ತಮಗೊಳಿಸಲು ನಿಮ್ಮ ಮನಸ್ಸಿನಲ್ಲಿ ಹೊಸ ಆಲೋಚನೆ ಇದ್ದರೆ ಅದನ್ನು ಕಾರ್ಯಗತಗೊಳಿಸ‌ಲು ಪ್ರಯತ್ನಿಸಿ. ದೇಶವನ್ನು ಯಶಸ್ವಿ ರಾಷ್ಟ್ರವನ್ನು ಮಾಡುವುದು ಎಲ್ಲರ ಕರ್ತವ್ಯ. ಇದಕ್ಕೆ ನಾವೆಲ್ಲರೂ ಕೊಡುಗೆ ನೀಡಬೇಕು’ ಎಂದರು.

‘ಏಕಾತ್ಮ ಮಾನವತಾ ವಾದ ಹಾಗೂ ವಸುಧೈವ ಕುಟುಂಬ ‌ತತ್ವದ ಆಧಾರದಲ್ಲಿ ದೇಶ ನಿರ್ಮಾಣವಾಗಬೇಕು. ಇದು ತುಂಬಾ ಸರಳ ತತ್ವ. ನೋವು ಎದುರಾದಾಗ ನಮ್ಮ ದೇಹದ ಅಂಗಾಗಗಳು ಪರಸ್ಪರ ಸ್ಪಂದಿಸುತ್ತವೆ. ಪಾದಕ್ಕೆ ಮುಳ್ಳು ಚಿಚ್ಚಿದಾಗ ಮನಸ್ಸಿಗೆ ನೋವಾಗುತ್ತದೆ. ಮುಳ್ಳು ತೆಗೆದು ನೋವು ಕಡಿಮೆ ಮಾಡಲು ಪ್ರಯತ್ನಿಸುತ್ತೇವೆ. ಕಣ್ಣಿಗೆ ಕಸ ಬಿದ್ದರೆ ಕೈ ತಕ್ಷಣ ಅದನ್ನು ತೆಗೆಯಲು ಮುಂದಾಗಿ ನೋವು ಕಡಿಮೆ ಮಾಡಲು ಯತ್ನಿಸುತ್ತದೆ. ಯಾರಾದರೂ ಪ್ರಹಾರ ಮಾಡುವಾಗ ತಲೆಯ ರಕ್ಷಣೆಗೆ ಕೈ ಧಾವಿಸುತ್ತದೆ. ತಲೆಯನ್ನು ಕಳೆದುಕೊಂಡರೆ ನಮಗೆ ಉಳಿಗಾಲವಿಲ್ಲ ಎಂದು ಎಲ್ಲ ಅಂಗಗಳು ಭಾವಿಸುತ್ತವೆ. ಇದೇ ಆ ತತ್ವದ ತಿರುಳು’ ಎಂದರು.

‘ನಮ್ಮ ಋಷಿಮುನಿಗಳು, ಮಹಾಪುರುಷರು ನಿಡಿದ ಮಾರ್ಗದರ್ಶನವನ್ನು ಅನುಸರಿಸಬೇಕು. ದೇಶದ ವಿಕಾಸಕ್ಕೆ ಮತ್ತು ಜನಹಿತಕ್ಕೆ ಪೂರಕವಾಗಿ ಸಾರ್ವಜನಿಕ ಜೀವನದಲ್ಲಿ ನಮ್ಮ ಜವಾಬ್ದಾರಿ ನಿಭಾಯಿಸಬೇಕು. ಆಗ ದೇಶವು ಗೌರವಯುತವಾದ ಹಾಗೂ ಪರಮ ವೈಭವದ ಸ್ಥಾನವನ್ನು ಗಳಿಸುತ್ತದೆ’ ಎಂದರು.

ಘಟಿಕೋತ್ಸವ ಭಾಷಣ ಮಾಡಿದ ರಾಷ್ಟ್ರೀಯ ಮೌಲೀಕರಣ ಮತ್ತು ಮಾನ್ಯತಾ ಪರಿಷತ್ತಿನ (ನ್ಯಾಕ್‌) ನಿರ್ದೇಶಕ ಪ್ರೊ.ಎಸ್‌.ಸಿ.ಶರ್ಮ, ‘ಪರಿಸರ ಬಿಕ್ಕಟ್ಟು ನಾವು ಎದುರಿಸುತ್ತಿರುವ ಅತಿದೊಡ್ಡ ಸಮಸ್ಯೆ. ಪರಿಸರ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವುದು ಜಗತ್ತಿನ ಉನ್ನತ ಶಿಕ್ಷಣ ವ್ಯವಸ್ಥೆಯ ಮುಂದಿರುವ ಅತಿದೊಡ್ಡ ಸವಾಲು. ಇದಕ್ಕೆ ನಿಸರ್ಗ ಸಹಜವಾದ ಕ್ರಿಯೆಗಳು ಹಾಗೂ ಮಾನವ ಹಸ್ತಕ್ಷೇಪಗಳೆರಡೂ ಕಾರಣ. ನೈಸರ್ಗಿಕ ವಿಕೋಪಗಳನ್ನು ಅರ್ಥಮಾಡಿಕೊಳ್ಳುವಾಗ ನಾವು ಮಾನವನಿಂದ ಆಗುತ್ತಿರುವ ಪರಿಸರ ಸಮಸ್ಯೆಗಳ ಬಗ್ಗೆ ಆಳವಾಗಿ ಯೋಚಿಬೇಕಾಗುತ್ತದೆ. ನಗರೀಕರಣ, ಅರಣ್ಯನಾಶ, ವಾಹನಗಳಿಂದ ಆಗುತ್ತಿರುವ ಮಾಲಿನ್ಯ, ವಿದ್ಯುತ್‌ ಉತ್ಪಾದಿಸಲು ಕಲ್ಲಿದ್ದಲು ಉರಿಸುವುದರಿಂದ ಆಗುತ್ತಿರುವ ದುಷ್ಪರಿಣಾಮಗಳು, ಕಸದ ಸಮಸ್ಯೆ ಸೇರಿದಂತೆ ಹಲವರು ಮಾನವ ಚಟುವಟಿಕೆಗಳು ಇದಕ್ಕೆ ಕಾರಣವಾಗುತ್ತಿವೆ’ ಎಂದರು.

‘ಮಾನವನ ಹಸ್ತಕ್ಷೇಪದಿಂದ ಆಗುತ್ತಿರುವ ಪರಿಸರ ಸಮಸ್ಯೆಗಳಿಗೆ ವಿಜ್ಞಾನಿಗಳು ಹಾಗೂ ಪರಿಣಿತರು ಇದಕ್ಕೆ ಅನೇಕ ಪರಿಹಾರಗಳನ್ನು ಸೂಚಿಸಿದ್ದಾರೆ. ಅವುಗಳ ಜೊತೆಗೆ ನಾವು ನಿಸರ್ಗದ ಕುರಿತಾಗಿ ನಮ್ಮ ನಡವಳಿಕೆಯನ್ನೇ ಬದಲಾಯಿಸಿಕೊಳ್ಳಬೇಕಿದೆ. ಜಗತ್ತಿನ ಎಲ್ಲ ಜೀವಿಗಳಲ್ಲಿ ಮನುಷ್ಯ ಮಾತ್ರ ನಿಸರ್ಗವನ್ನು ಸಂಪನ್ಮೂಲ ಎಂದು ಪರಿಗಣಿಸುತ್ತಾನೆ. ಪ್ರಸ್ತುತ ನಾವು ನಮ್ಮ ಉದ್ದೇಶಕ್ಕಾಗಿ ಪರಿಸರದ ಕಾಳಜಿ ಮಡುತ್ತಿದ್ದೇವೆ. ಈ ಭೂಮಿಯ ಅಸ್ತಿತವದಲ್ಲೇ ನಮ್ಮ ಉಳಿವು ಇದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.ಅದರಿಂದ ನಮಗೆ ಪ್ರಯೋಜನ ಇದೆಯೋ ಇಲ್ಲವೋ ಎಂಬುದರತ್ತ ನೋಡದೆಯೇ ಅದನ್ನು ಜತನವಾಗಿ ಕಾಪಾಡಬೇಕು. ಈ ಕಾಳಜಿ ನಿಸ್ವಾರ್ಥ ಹಾಗೂ ನಿರುದ್ದೇಶದಿಂದ ಕೂಡಿರಬೇಕು. ಇದಕ್ಕಾಗಿ ಹೆಚ್ಚು ಮಾನವಿಕವಾದ ಹಾಗೂ ಉದಾರವಾದ ಕಲಾ ಶಿಕ್ಷಣದ ಅಗತ್ಯವಿದೆ’ ಎಂದರು.

ಜಿ.ರಾಮಕೃಷ್ಣ ಆಚಾರ್‌, ಯು.ಕೆ.ಮೋನು, ಪ್ರೊ.ಎಂ.ಬಿ.ಪುರಾಣಿಕ್‌ ಅವರಿಗೆ ಗೌರವ ಡಾಕ್ಟರೇಟ್‌ ಪ್ರಧಾನ ಮಾಡಲಾಯಿತು.

ಒಬ್ಬರಿಗೆ ಡಾಕ್ಟರ್‌ ಆಫ್‌ ಸೈನ್ಸ್‌, ಏಳು ವಿದೇಶಿ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 115 ಮಂದಿಗೆ ಪಿಎಚ್‌.ಡಿ ಪದವಿ ಪ್ರದಾನ ಮಾಡಲಾಯಿತು. 55 ಮಂದಿಗೆ ಚಿನ್ನದ ಪದಕ ಹಾಗೂ 57 ಮಂದಿ ನಗದು ಬಹುಮಾನಗಳನ್ನು ನೀಡಲಾಯಿತು.

ಕುಲಪತಿ ಪ್ರೊ.ಪಿ.ಎಸ್‌.ಯಡಿಪಡಿತ್ತಾಯ ಹಾಗೂ ಪರೀಕ್ಷಾಂಗ ವಿಭಾಗದ ಕುಲಸಚಿವ ಪ್ರೊ. ರಾಜು ಕೃಷ್ಣ ಚಲಣ್ಣವರ, ಕುಲಸಚಿವ ಡಾ.ಕಿಶೋರ್‌ ಕುಮಾರ್‌ ಹಾಗೂ ಇತರರು ಇದ್ದರು.

–0–
ಅಂಕಿ ಅಂಶ

33,055

ಪರೀಕ್ಷೆಗೆ ಹಾಜರಾದ ಒಟ್ಟು ವಿದ್ಯಾರ್ಥಿಗಳು

27,363

ಉತ್ತೀರ್ಣರಾದ ವಿದ್ಯಾರ್ಥಿಗಳು

82.72%

ತೇರ್ಗಡೆ ಪ್ರಮಾಣ

***

ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು

ಒಟ್ಟು ವಿದ್ಯಾರ್ಥಿಗಳು; 28,520

ಪರೀಕ್ಷೆಗೆ ಹಾಜರಾದವರು;23,020

ಸ್ನಾತಕೋತ್ತರ ಪರೀಕ್ಷೆ ಬರೆದವರು;5,069

ಉತ್ತೀರ್ಣರಾದವರು;6,528 (ಶೇ 89.29)

ಪ‍ದವಿ ಪರೀಕ್ಷೆ ಬರೆದವರು;23,336

ಉತ್ತೀರ್ಣರಾದವರು;18,379 (ಶೇ 78.76)

****

ಸ್ವಾಯತ್ತ ಕಾಲೇಜುಗಳಲ್ಲಿ

ಒಟ್ಟು ವಿದ್ಯಾರ್ಥಿಗಳು; 4,535

ಪರೀಕ್ಷೆಗೆ ಹಾಜರಾದವರು;4,343

ಸ್ನಾತಕೋತ್ತರ ಪರೀಕ್ಷೆ ಬರೆದವರು;1,278

ಉತ್ತೀರ್ಣರಾದವರು;1,266 (ಶೇ 99.06)

ಪ‍ದವಿ ಪರೀಕ್ಷೆ ಬರೆದವರು;3,257

ಉತ್ತೀರ್ಣರಾದವರು;3,077 (ಶೇ 94.47)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT