ಮಂಗಳೂರು: ಅಂತರರಾಜ್ಯ ಗಡಿಗಳು ತೆರವಾಗಿದ್ದರೂ, ಕಾಸರಗೋಡು ಮತ್ತು ಮಂಗಳೂರಿನ ಮಧ್ಯೆ ಬಸ್ ಸಂಚಾರ ಇನ್ನೂ ಆರಂಭವಾಗಿಲ್ಲ. ಕಾಸರಗೋಡು ಜಿಲ್ಲಾಡಳಿತದ ಬಿಗಿ ಕ್ರಮಗಳಿಂದಾಗಿ ನಿತ್ಯ ಮಂಗಳೂರಿಗೆ ಬಂದು ಹೋಗುವ ಜನರು ತೊಂದರೆ ಅನುಭವಿಸುವಂತಾಗಿದೆ.
ಒಂದೆಡೆ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯು ಕಾಸರಗೋಡಿಗೆ ಬಸ್ ಓಡಿಸಲು ನಿರ್ಧರಿಸಿದೆ. ಆದರೆ, ಕೇರಳ ರಾಜ್ಯ ಸಾರಿಗೆ ಸಂಸ್ಥೆ ಮಾತ್ರ ಇನ್ನೂ ಈ ಬಗ್ಗೆ ಚಿಂತನೆಯನ್ನೇ ಮಾಡುತ್ತಿಲ್ಲ. ಇನ್ನೊಂದೆಡೆ ಕೋವಿಡ್ ತಡೆಯಲು ಕಾಸರಗೋಡು ಜಿಲ್ಲಾಡಳಿತ ಮತ್ತಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.
ಜಿಲ್ಲೆಯ ಹಲವೆಡೆ ವಿಧಿಸಲಾಗಿದ್ದ ನಿಷೇಧಾಜ್ಞೆಯನ್ನು ಇದೇ 31ರವರೆಗೆ ವಿಸ್ತರಿಸಲಾಗಿದೆ. ಇದರಿಂದಾಗಿ ಬಸ್ ಸಂಚಾರಕ್ಕೆ ಅನುಮತಿ ಸಿಗುವುದು ಇನ್ನೂ ಅನುಮಾನವಾಗಿದೆ ಎಂದು ಸಹಯಾತ್ರಿ ತಂಡದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಮಧ್ಯೆ ತಲಪಾಡಿ ಗಡಿ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಗೆ ಹೊಂದಿಕೊಂಡಿರುವ 16 ಗಡಿ ರಸ್ತೆಗಳಲ್ಲಿ ಕೋವಿಡ್–19 ತಪಾಸಣೆಯನ್ನು ಮತ್ತೆ ಆರಂಭಿಸಲು ಕಾಸರಗೋಡು ಜಿಲ್ಲಾಡಳಿತ ನಿರ್ಧರಿಸಿದೆ. ನಿಷೇಧಾಜ್ಞೆ ಇರುವುದರಿಂದ ಐದಕ್ಕಿಂತ ಹೆಚ್ಚು ಮಂದಿ ಗುಂಪು ಗೂಡುವುದನ್ನು ನಿಷೇಧಿಸಲಾಗಿದೆ.