ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಕೂಕ್ರಬೆಟ್ಟು ಸರ್ಕಾರಿ ಶಾಲೆ ದತ್ತು

ಶ್ರೀದುರ್ಗಾ ಚಾರಿಟಬಲ್‌ ಟ್ರಸ್ಟ್‌ ನಿರ್ಧಾರ
Last Updated 12 ಜನವರಿ 2020, 19:30 IST
ಅಕ್ಷರ ಗಾತ್ರ

ಮಂಗಳೂರು: ಬಂಟ್ವಾಳ ತಾಲ್ಲೂಕಿನ ದಡ್ಡಲಕಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ಪಡೆದು ₹ 4 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ಸೇರಿದಂತೆ ಮೂಲಸೌಕರ್ಯ ಕಲ್ಪಿಸಿರುವ ಪ್ರಕಾಶ್ ಅಂಚನ್‌ ಸಾರಥ್ಯದ ಶ್ರೀ ದುರ್ಗಾ ಚಾರಿಟಬಲ್‌ ಟ್ರಸ್ಟ್‌ ಇದೀಗ ಬೆಳ್ತಂಗಡಿ ತಾಲ್ಲೂಕಿನ ಮರೋಡಿ ಗ್ರಾಮದ ಕೂಕ್ರಬೆಟ್ಟು ಸರ್ಕಾರಿ ಶಾಲೆಯನ್ನು ದತ್ತು ಪಡೆದಿದೆ.

2015ರಲ್ಲಿ ಕೇವಲ 30 ಮಕ್ಕಳಿದ್ದು, ಮುಚ್ಚುವ ಸ್ಥಿತಿಯಲ್ಲಿದ್ದ ದಡ್ಡಲಕಾಡು ಶಾಲೆಯನ್ನು ಶ್ರೀದುರ್ಗಾ ಚಾರಿಟಬಲ್‌ ಟ್ರಸ್ಟ್‌ ಮೂಲಕ ದತ್ತು ಪಡೆದಿತ್ತು. ಬಳಿಕ ಸರ್ಕಾರದಿಂದ ಯಾವುದೇ ಅನುದಾನ ಪಡೆಯದೆ ಹೈಟೆಕ್‌ ಕಟ್ಟಡ, ಶಾಲಾ ಬಸ್‌, ಸ್ಮಾರ್ಟ್‌ಕ್ಲಾಸ್ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಿತ್ತು. ಎಲ್‌ಕೆಜಿ ಮತ್ತು ಯುಕೆಜಿ ತರಗತಿಯನ್ನು ಆರಂಭಿಸಿ ಆಂಗ್ಲಮಾಧ್ಯಮ ಶಿಕ್ಷಣಕ್ಕೂ ಒತ್ತು ನೀಡಲಾಗಿತ್ತು. ಇದರ ಪರಿಣಾಮವಾಗಿ ಇಂದು ಶಾಲೆಯಲ್ಲಿ 800ಕ್ಕೂ ಅಧಿಕ ಮಕ್ಕಳು ಕಲಿಯುತ್ತಿದ್ದಾರೆ.

2018–19ನೇ ಸಾಲಿನಲ್ಲಿ ಕೇವಲ 16 ಮಕ್ಕಳಿದ್ದು, ಇನ್ನೇನು ಬಾಗಿಲು ಮುಚ್ಚುವ ಸ್ಥಿತಿಯಲ್ಲಿದ್ದ ಕೂಕ್ರಬೆಟ್ಟು ಶಾಲೆಗೆ ಹಳೆ ವಿದ್ಯಾರ್ಥಿಗಳ, ಶಿಕ್ಷಣಾಭಿಮಾನಿಗಳ ಆಹ್ವಾನದ ಮೇರೆಗೆ ಬಂದ ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ಸಮಿತಿಯ ರಾಜ್ಯ ಅಧ್ಯಕ್ಷರೂ ಆಗಿರುವ ಪ್ರಕಾಶ್ ಅಂಚನ್‌ ಶಾಲೆಯಲ್ಲೇ ಗ್ರಾಮ ವಾಸ್ತವ್ಯ, ಮನೆಮನೆ ಭೇಟಿ ಮಾಡಿ ಗ್ರಾಮದಲ್ಲಿ ಸಂಚಲನ ಮೂಡಿಸಿದ್ದರು. ಹೀಗಾಗಿ, ಈ ಶೈಕ್ಷಣಿಕ ವರ್ಷದಲ್ಲಿ ಎಲ್‌ಕೆಜಿ, ಯುಕೆಜಿ ಸೇರಿದಂತೆ ಶಾಲೆಯಲ್ಲಿ 80 ಮಕ್ಕಳು ದಾಖಲಾತಿಯಾಗಿದ್ದಾರೆ. ಜಯಂತ ಕೋಟ್ಯಾನ್‌ ಅಧ್ಯಕ್ಷತೆಯ ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ಉಪ ಸಮಿತಿಯ ಮೂಲಕ ಶಾಲೆಗೆ ಮೂಲಸೌಕರ್ಯ ಕಲ್ಪಿಸುವ ಕೆಲಸ ನಡೆಯುತ್ತಿದೆ.

ಕೂಕ್ರಬೆಟ್ಟು ಶಾಲೆಯಲ್ಲಿ ಗುರುವಾರ ನಡೆದ ವಿಶೇಷ ಸಭೆಯಲ್ಲಿ ಶಾಲೆಯನ್ನು ದತ್ತು ಪಡೆಯುವ ಕುರಿತ ಮನವಿಯನ್ನು
ಪ್ರಕಾಶ್ ಅಂಚನ್‌ ನೀಡಿದ್ದು, ಈ ಮೂಲಕ ಮುಂದಿನ ಐದು ವರ್ಷದ ಅವಧಿಗಾಗಿ ಮೂಲಸೌಕರ್ಯ ಕಲ್ಪಿಸುವುದಕ್ಕಾಗಿ ದಡ್ಡಲಕಾಡು ಶ್ರೀ ದುರ್ಗಾ ಚಾರಿಟಬಲ್‌ ಟ್ರಸ್ಟ್‌ ದತ್ತು ಪಡೆದಿದೆ.

‘ನಮ್ಮ ಟ್ರಸ್ಟ್‌ ದಡ್ಡಲಕಾಡು ಶಾಲೆಯನ್ನು ದತ್ತು ಪಡೆದು ಇಂದು ದೇಶಕ್ಕೆ ಮತ್ತು ರಾಜ್ಯಕ್ಕೆ ಮಾದರಿಯಾಗಿ ರೂಪಿಸಿದೆ. ರಾಜ್ಯಪಾಲರು, ಶಿಕ್ಷಣ ಸಚಿವರು ಶಾಲೆಗೆ ಬಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಬಡ ಮಕ್ಕಳಿಗೆ ಗುಣಮಟ್ಟ ಶಿಕ್ಷಣ ನೀಡುವುದಕ್ಕಾಗಿ ಸರ್ಕಾರಿ ಶಾಲೆಯನ್ನು ಉಳಿಸಬೇಕೆಂಬುದು ನನ್ನ ‌ಕಾಳಜಿ. ಟ್ರಸ್ಟ್‌ನ ದತ್ತು ಯೋಜನೆಯ ಮುಂದುವರಿದ ಭಾಗವಾಗಿ ಕೂಕ್ರಬೆಟ್ಟು ಶಾಲೆಯನ್ನು ದತ್ತು ಪಡೆದಿದ್ದೇವೆ’ ಎಂದು ಪ್ರಕಾಶ್‌ ಅಂಚನ್‌ ಹೇಳಿದ್ದಾರೆ.

₹ 2 ಕೋಟಿ ವೆಚ್ಚದ ಯೋಜನೆ
‘ಕೂಕ್ರಬೆಟ್ಟು ಶಾಲೆಯ ಕಟ್ಟಡ ಬಹಳ ಹಳೆಯದಾಗಿದ್ದು, ಹೊಸ ಕಟ್ಟಡ ನಿರ್ಮಾಣವಾಗಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ, ಶಾಸಕ ಹರೀಶ್‌ ಪೂಂಜ ಮತ್ತು ದಾನಿಗಳ ಸಹಕಾರದಲ್ಲಿ ಮೊದಲ ಹಂತವಾಗಿ ಸುಮಾರು ₹ 2 ಕೋಟಿ ವೆಚ್ಚದಲ್ಲಿ 16 ಕೊಠಡಿಯ ಕಟ್ಟಡ ನಿರ್ಮಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಶೀಘ್ರದಲ್ಲೇ ಶಿಕ್ಷಣ ಸಚಿವರಿಂದ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ. ಇದೇ ಮಾರ್ಚ್‌ನಲ್ಲಿ ನೂತನ ಶಾಲಾ ಬಸ್‌ನ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಗೌರವ ಶಿಕ್ಷಕರನ್ನು ನೇಮಕ ಮಾಡಲಾಗುತ್ತದೆ. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ’ ಎಂದು ಪ್ರಕಾಶ್‌ ಅಂಚನ್‌ ತಿಳಿಸಿದ್ದಾರೆ.

*
ಹಿಂದೆ ಮಾಡಿದ್ದ ಗ್ರಾಮ ವಾಸ್ತವ್ಯದಿಂದ ಮಕ್ಕಳ ಸಂಖ್ಯೆ 80ಕ್ಕೆ ಏರಿದೆ. ಮತ್ತೆ ಗ್ರಾಮ ವಾಸ್ತವ್ಯ ಮಾಡಿ 200ರ ಗಡಿ ದಾಟಿಸುವ ಗುರಿ ಹೊಂದಲಾಗಿದೆ.
-ಪ್ರಕಾಶ್ ಅಂಚನ್‌, ಅಧ್ಯಕ್ಷರು, ಶ್ರೀ ದುರ್ಗಾ ಚಾರಿಟಬಲ್‌ ಟ್ರಸ್ಟ್‌

*
60 ವರ್ಷಗಳ ಇತಿಹಾಸ ಹೊಂದಿರುವ ಕೂಕ್ರಬೆಟ್ಟು ಶಾಲೆಯಲ್ಲಿ ಪರಿವರ್ತನೆಯ ಗಾಳಿ ಬೀಸಿದೆ. ಇದನ್ನು ಮಾದರಿ ಶಾಲೆಯನ್ನಾಗಿ ಮಾಡಲು ಒಟ್ಟಾಗಿ ಪ್ರಯತ್ನಿಸುತ್ತೇವೆ.
-ಜಯಂತ ಕೋಟ್ಯಾನ್‌, ಅಧ್ಯಕ್ಷರು, ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ಉಪ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT