ಉಳ್ಳಾಲ: ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಇಲ್ಲಿನ ಹಳೇಕೋಟೆ ಬಳಿ ಗುಡ್ಡೆ ಜರಿದು ಕಟ್ಟಡವೊಂದು ಅಪಾಯದಂಚಿಗೆ ಸಿಲುಕಿದೆ. ಈ ಕಟ್ಟಡದಲ್ಲಿ ವಾಸವಾಗಿದ್ದ ಮೂರು ಕುಟುಂಬಗಳನ್ನು ಬೇರೆಡೆ ಸ್ಥಳಾಂತರ ಮಾಡಲಾಗಿದೆ.
ಹಳೆಕೋಟೆ ನಿವಾಸಿ ಅಬ್ದುಲ್ಲಾ ಅವರ ಮಾಲೀಕತ್ವದ ಬಾಡಿಗೆ ನೀಡಿದ್ದ ಕಟ್ಟಡ ಅಪಾಯದಲ್ಲಿದ್ದು, ಗುಡ್ಡೆ ಜರಿದಿದ್ದರಿಂದ ಕಟ್ಟಡ ಬಿರುಕು ಬಿಟ್ಟಿದೆ. ವಿದ್ಯುತ್ ಕಂಬ ಉರುಳಿ ಬಿದ್ದಿದ್ದು, ರಸ್ತೆ ಸಂಪೂರ್ಣ ಹದಗೆಟ್ಟಿದೆ. ವರ್ಷದ ಹಿಂದೆ ಈ ಭಾಗದಲ್ಲಿ ರಸ್ತೆ ಕುಸಿದು ಬಿದ್ದು ಹಾನಿಯಾಗಿತ್ತು.
‘ಈ ಸಂದರ್ಭದಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಮತ್ತು ಶಾಸಕ ಯು.ಟಿ.ಖಾದರ್ ಗಮನ ತಂದಿದ್ದೆವು. ಆದರೆ ದುರಸ್ತಿಯ ಭರವಸೆ ಮಾತ್ರ ದೊರಕಿದ್ದು, ರಸ್ತೆ ದುರಸ್ತಿಯಾಗಿಲ್ಲ’ ಎಂದು ಸ್ಥಳೀಯ ಕೌನ್ಸಿಲರ್ ಝರೀನಾ ರವೂಫ್ ತಿಳಿಸಿದರು.
ಘಟನಾ ಸ್ಥಳಕ್ಕೆ ನಗರಸಭಾ ಪೌರಾಯುಕ್ತ ರಾಯಪ್ಪ, ಗ್ರಾಮಕರಣಿಕ ಪ್ರಮೋದ್, ಸಹಾಯಕ ನವನೀತ್, ಕೌನ್ಸಿಲರ್ ಝರೀನ ರವೂಫ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.