ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು ಪಾಲಿಕೆ: ₹157.43 ಕೋಟಿ ಉಳಿತಾಯ ಬಜೆಟ್

ಕಂಬಳಕ್ಕೆ ಉತ್ತೇಜನ, ‍ಪಿಂಕ್ ಶೌಚಾಲಯ ನಿರ್ಮಾಣ, ಯಕ್ಷಗಾನ ತರಬೇತಿಗೆ ‍ಪ್ರೋತ್ಸಾಹ
Published 27 ಫೆಬ್ರುವರಿ 2024, 15:37 IST
Last Updated 27 ಫೆಬ್ರುವರಿ 2024, 15:37 IST
ಅಕ್ಷರ ಗಾತ್ರ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯು 2024–25ನೇ ಸಾಲಿನಲ್ಲಿ ₹157.43 ಕೋಟಿ ಮೊತ್ತದ ಉಳಿತಾಯದ ಬಜೆಟ್ ಮಂಡಿಸಿದೆ.

ಮಂಗಳವಾರ ಪಾಲಿಕೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಬಜೆಟ್ ಮಂಡಿಸಿದ ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷ ವರುಣ್ ಚೌಟ್ ಅವರು, ಪಾಲಿಕೆ ಬಳಿ ಆರಂಭಿಕ ಶಿಲ್ಕು ₹292.57 ಕೋಟಿ ಇದ್ದು, ₹820.87 ಕೋಟಿ ಆದಾಯ ಮತ್ತು ₹956.01 ಕೋಟಿ ಖರ್ಚು ಅಂದಾಜಿಸಲಾಗಿದೆ’ ಎಂದರು.

ಮೂಲ ಸೌಕರ್ಯ ಅಭಿವೃದ್ಧಿಗೆ ಪೂರಕವಾದ ಯೋಜನೆಗಳ ಜೊತೆಗೆ, ತುಳು ಭಾಷೆಯ ಅಭಿವೃದ್ಧಿಗೆ ‘ಬಲೆ ತುಳು ಒರಿಪಾಲೆ’, ಕಂಬಳ ಕ್ರೀಡೆಗೆ ಉತ್ತೇಜನ, ಮಹಿಳೆಯರಿಗಾಗಿ ಪಿಂಕ್ ಶೌಚಾಲಯ ನಿರ್ಮಾಣ, ಪ್ರಾಣಿ– ಪಕ್ಷಿಗಳ ಶವ ಸಂಸ್ಕಾರಕ್ಕೆ ಪ್ರತ್ಯೇಕ ವ್ಯವಸ್ಥೆ, ಬ್ರಹ್ಮಶ್ರೀ ನಾರಾಯಣಗುರು ಮಂದಿರಗಳಿಗೆ ಅನುದಾನ, ಯಕ್ಷಗಾನ ತರಬೇತಿಗೆ ‍ಪ್ರೋತ್ಸಾಹ ಮೊದಲಾದ ಯೋಜನೆಗಳನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.

ಉಚಿತ ಆಂಬುಲೆನ್ಸ್‌: ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಬೀದಿಬದಿ ವ್ಯಾಪಾರ ತಡೆಗಟ್ಟುವ ನಿಟ್ಟಿನಲ್ಲಿ ‘ಟೈಗರ್ ಗ್ಯಾಂಗ್’ ಕಾರ್ಯಾಚರಣೆ ನಡೆಸಲು ₹75 ಲಕ್ಷ ಅನುದಾನ ಮೀಸಲಿಡಲಾಗಿದೆ. ತುಳು ಭಾಷೆ ಮತ್ತು ಲಿಪಿ, ಸಂಗೀತ, ಸಾಹಿತ್ಯ, ಸಾಂಸ್ಕೃತಿಕ ಮೊದಲಾದ ಕಲಾ ಪ್ರಕಾರಗಳ ಉತ್ತೇಜನಕ್ಕೆ, ತುಳು ಭಾಷೆಯ ಏಳಿಗೆಗೆ ಶ್ರಮಿಸುವವರನ್ನು ಗುರುತಿಸಿ ಪ್ರೋತ್ಸಾಹಿಸಲು, ಬಜೆಟ್‌ನಲ್ಲಿ ₹10 ಲಕ್ಷ, ಕಂಬಳ ಕ್ರೀಡೆ ಉತ್ತೇಜಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲು ₹5 ಲಕ್ಷ, ಆಯ್ದ ಪ್ರದೇಶಗಳಲ್ಲಿ ಪಿಂಕ್ ಶೌಚಾಲಯ ನಿರ್ಮಾಣಕ್ಕೆ ₹1 ಕೋಟಿ, ತುರ್ತು ಸಂದರ್ಭದಲ್ಲಿ ಮಾನವೀಯ ನೆಲೆಯಲ್ಲಿ ಸಾರ್ವಜನಿಕರಿಗೆ ಉಚಿತ ಆಂಬುಲೆನ್ಸ್ ಒದಗಿಸಲು ₹25 ಲಕ್ಷ, ಅನಾಥ ಪ್ರಾಣಿ– ಪಕ್ಷಿಗಳ ಶವ ಸಂಸ್ಕಾರಕ್ಕೆ ತಿರುವೈಲು ಗ್ರಾಮದಲ್ಲಿ ಲಭ್ಯವಿರುವ ಒಂದು ಎಕರೆ ಜಾಗದಲ್ಲಿ ರುದ್ರಭೂಮಿ ನಿರ್ಮಿಸಲು ₹1.50 ಕೋಟಿ ಅನುದಾನ ಕಾಯ್ದಿಡಲಾಗಿದೆ.

ಪಾಲಿಕೆಗೆ ಭೂಮಿ ಬಿಟ್ಟುಕೊಡುವ ಭೂ ಮಾಲೀಕರಿಗೆ ಟಿಡಿಆರ್‌ ವಿತರಿಸಲಾಗುತ್ತಿದ್ದು, ಈ ಟಿಡಿಆರ್‌ ಮಾರಾಟ ಮತ್ತು ಖರೀದಿಸುವವರಿಗೆ ಅನುಕೂಲವಾಗುವಂತೆ ಪಾಲಿಕೆಯಲ್ಲಿ ಟಿಡಿಆರ್ ಬ್ಯಾಂಕ್ ಸ್ಥಾಪಿಸುವ ಬಗ್ಗೆ ಪ್ರಸ್ತಾಪಿಸಲಾಗಿದೆ.

ಹೈನುಗಾರಿಕೆ ಉತ್ತೇಜಿಸುವ ‘ಕಾಮಧೇನು’  ಕಾರ್ಯಕ್ರಮಕ್ಕೆ ₹5 ಲಕ್ಷ, ಸಿಸಿಟಿವಿ ಕ್ಯಾಮೆರಾ, ಉಚಿತ ವೈಫೈ, ಶುದ್ಧ ಕುಡಿಯುವ ನೀರು, ಎಫ್‌ಎಂ ರೇಡಿಯೊ ಸಂಪರ್ಕ, ಪ್ರಥಮ ಚಿಕಿತ್ಸೆ ಸೌಲಭ್ಯ ಒಳಗೊಂಡ ಎರಡು ಸ್ಮಾರ್ಟ್ ಮತ್ತು ಡಿಜಿಟಲ್ ಬಸ್ ನಿಲ್ದಾಣ ನಿರ್ಮಾಣಕ್ಕೆ ₹50 ಲಕ್ಷ ಮೀಸಲಿಡಲಾಗಿದೆ.

ಯಕ್ಷಗಾನ ತರಬೇತಿ ಹಮ್ಮಿಕೊಳ್ಳುವ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಸಹಾಯಧನ ನೀಡಲು ₹10 ಲಕ್ಷ ನಿಗದಿಪಡಿಸಲಾಗಿದೆ. ವೆಂಡಿಂಗ್ ಝೋನ್ ನಿರ್ಮಾಣಕ್ಕೆ ₹10 ಲಕ್ಷ, ಕರಕುಶಲ ಕರ್ಮಿಗಳಿಗೆ ಪ್ರೋತ್ಸಾಹಧನ ನೀಡಲು ₹10 ಲಕ್ಷ, ಎಂಟು ಕೊಳೆಗೇರಿ ಪ್ರದೇಶಗಳ ಮೂಲ ಸೌಕರ್ಯ ಅಭಿವೃದ್ಧಿ, ಪಾಲಿಕೆಯ ಸಿಬ್ಬಂದಿಗೆ ನೀಡಿದ ವಿಮೆ ಯೋಜನೆಯನ್ನು ಅವರ ಕುಟುಂಬದ ಸದಸ್ಯರಿಗೆ ವಿಸ್ತರಣೆ, ಅಗ್ನಿಪಥ ಯೋಜನೆಯಡಿ ಅಗ್ನಿವೀರರ ಪ್ರೋತ್ಸಾಹಕ್ಕೆ ನೆರವು, ವೀರ ಯೋಧರ ಕುಟುಂಬಕ್ಕೆ ನೆರವು, ಮಳೆನೀರು ಇಂಗಿಸುವಿಕೆ, ಅಂತರ್ಜಲ ಸಂರಕ್ಷಣೆಗೆ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ.

‘2023–24ನೇ ಸಾಲಿನಲ್ಲಿ ಅಂದಾಜು 1.58 ಲಕ್ಷ ಆಸ್ತಿಗಳ ಮೇಲೆ ₹77.29 ಕೋಟಿ ತೆರಿಗೆ ನಿರೀಕ್ಷಿಸಲಾಗಿದ್ದು, ಮುಂದಿನ ಸಾಲಿನಲ್ಲಿ ಸೆಸ್ ಹೊರತುಪಡಿಸಿ, ₹93.66 ಕೋಟಿ ಆದಾಯ, ನೀರಿನ ಶುಲ್ಕದಿಂದ ₹68.25 ಕೋಟಿ, ಉದ್ದಮೆ ಪರವಾನಗಿಯಿಂದ ₹93.66 ಕೋಟಿ, ಕಟ್ಟಡ ಪರವಾನಗಿ ಮತ್ತು ಪ್ರೀಮಿಯಂ ಎಫ್‌ಎಆರ್‌ನಿಂದ ₹43.90 ಕೋಟಿ ಆದಾಯ ನಿರೀಕ್ಷಿಸಲಾಗಿದೆ’ ಎಂದು ವರುಣ್ ಚೌಟ ಹೇಳಿದರು.

ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಉಪಮೇಯರ್ ಸುನೀತಾ, ಆಯುಕ್ತ ಆನಂದ್ ಇದ್ದರು.

ಮಂಗಳೂರು ಮಹಾನಗರಪಾಲಿಕೆಯ 2024-25 ಸಾಲಿನ ಬಜೆಟ್‌ ಪ್ರತಿ ಓದುತ್ತಿರುವ ಪಾಲಿಕೆ ಸದಸ್ಯರು – ಪ್ರಜಾವಾಣಿ ಚಿತ್ರ 
ಮಂಗಳೂರು ಮಹಾನಗರಪಾಲಿಕೆಯ 2024-25 ಸಾಲಿನ ಬಜೆಟ್‌ ಪ್ರತಿ ಓದುತ್ತಿರುವ ಪಾಲಿಕೆ ಸದಸ್ಯರು – ಪ್ರಜಾವಾಣಿ ಚಿತ್ರ 
ಪಾಲಿಕೆಯ ಬಜೆಟ್‌ ಹೊಸ ಬಾಟಲಿಯಲ್ಲಿ ಹಳೆ ಸೋಡಾ ಹಾಕಿದಂತಾಗಿದೆ. ಕಾರ್ಯಕ್ರಮ ಘೋಷಣೆಗಳು ಪ್ರಾಯೋಗಿಕವಾಗಿ ಅನುಷ್ಠಾನ ಆಗಬೇಕು. ಆದಾಯ ಹೆಚ್ಚು ಕಾರ್ಯಕ್ರಮ ಇರಬೇಕು.
ಶಶಿಧರ್ ಹೆಗ್ಡೆ ಪಾಲಿಕೆ ಕಾಂಗ್ರೆಸ್ ಸದಸ್ಯ
ಕ್ರೀಡಾ ಚಟುವಟಿಕೆಗೆ ಕನಿಷ್ಠ ₹50 ಲಕ್ಷ ಮೀಸಲಿಡಬೇಕಿತ್ತು. ಯುವ ಕ್ರೀಡಾಪಟುಗಳಿಗೆ ಪಾಲಿಕೆಯಿಂದ ಪ್ರೋತ್ಸಾಹ ಸಿಗಬಹುದೆಂಬ ನಿರೀಕ್ಷೆ ಹುಸಿಯಾಗಿದೆ.
ಅಬ್ದುಲ್ ಲತೀಫ್ ಪಾಲಿಕೆ ಕಾಂಗ್ರೆಸ್ ಸದಸ್ಯ
ಜನಸಾಮಾನ್ಯರಿಗೆ ಹೆಚ್ಚಿನ ಹೊರೆಯಾಗದಂತೆ ಮಂಡಿಸಿರುವ ಉತ್ತಮ ಬಜೆಟ್ ಇದಾಗಿದೆ. ತುಳು ಭಾಷೆಗೆ ಪ್ರೋತ್ಸಾಹ ಮನೆ ದುರಸ್ತಿಗೆ ಅನುದಾನ ಹೆಚ್ಚಳ ಶ್ಲಾಘನೀಯ.
ಕಿರಣ್ ಕೋಡಿಕಲ್ ಪಾಲಿಕೆ ಬಿಜೆಪಿ ಸದಸ್ಯ
ಅಂಕಿ–ಅಂಶದ ಲೆಕ್ಕ ತೋರಿಸುವ ಬಜೆಟ್ ಇದಾಗಿದೆ. ಉದ್ದಿಮೆ ಪರವಾನಗಿ ಹೊಸ ಉಪ ಕಚೇರಿ ಪ್ರಾರಂಭದಂತಹ ದೂರದೃಷ್ಟಿ ಯೋಜನೆಗಳ ಉಲ್ಲೇಖ ಇಲ್ಲ. ನವೀನ್ ಡಿಸೋಜ ಪಾಲಿಕೆ ಕಾಂಗ್ರೆಸ್ ಸದಸ್ಯ
ರಾಜಕಾಲುವೆ ಒತ್ತುವರಿ ತೆರವು ಪಾಲಿಕೆಗೆ ಸೇರಿದ ಭೂಮಿ ಸ್ವಾಧೀನ ಪಡಿಸಿಕೊಳ್ಳುವಂತಹ ಯೋಜನೆಗಳಿಗೆ ಬಜೆಟ್‌ನಲ್ಲಿ ಆದ್ಯತೆ ಸಿಕ್ಕಿಲ್ಲ. ಸ್ಮಶಾನಕ್ಕೆ ಹೆಚ್ಚಿನ ಅನುದಾನ ದೊರೆತಿಲ್ಲ.
ಅಬ್ದುಲ್ ರವೂಫ್ ಪಾಲಿಕೆ ಕಾಂಗ್ರೆಸ್ ಸದಸ್ಯ

‘ಅದೇ ರಾಗ ಅದೇ ತಾಳ’

ರಾಜ್ಯದಲ್ಲಿ ಅತಿವೇಗವಾಗಿ ಬೆಳೆಯುತ್ತಿರುವ ಮಂಗಳೂರು ಮಹಾನಗರ ಪಾಲಿಕೆಯ ಬಜೆಟ್‌ ಗಾತ್ರ ಇನ್ನಷ್ಟು ದೊಡ್ಡದಾಗಬೇಕಿತ್ತು. ಆದಾಯ ಹೆಚ್ಚಿಸುವ ಯೋಜನೆಗಳ ಪ್ರಸ್ತಾಪ ಕಡಿಮೆ ಇದೆ. ಜಾಹೀರಾತು ಫಲಕಗಳು ಶುಲ್ಕ ಸಹಿತ ವಾಹನ ನಿಲುಗಡೆಯಂತಹ ಕಾರ್ಯಕ್ರಮಗಳಿದ್ದರೆ ಪಾಲಿಕೆಯ ಆದಾಯ ಹೆಚ್ಚುತ್ತದೆ. ಘನತ್ಯಾಜ್ಯ ನಿರ್ವಹಣೆ ಹಳೆ ತ್ಯಾಜ್ಯ ನಿರ್ವಹಣೆಗೆ ಅಂಕಿ–ಸಂಖ್ಯೆ ಲೆಕ್ಕ ತೋರಿಸಲು ಅನುದಾನ ನಿಗದಿಪಡಿಸಿದಂತಿದೆ. ಹೆಚ್ಚುತ್ತಿರುವ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಅನುದಾನ ಮೀಸಲಿಟ್ಟಿಲ್ಲ. ಪಾಲಿಕೆ ಮಂಡಿಸಿರುವ ಬಜೆಟ್ ಅದೇ ರಾಗ ಅದೇ ತಾಳ ಎನ್ನುವಂತಿದೆ ಎಂದು ವಿರೋಧ ಪಕ್ಷದಲ್ಲಿ ನಾಯಕ ಪ್ರವೀಣ್‌ಚಂದ್ರ ಆಳ್ವ ಟೀಕಿಸಿದರು. 

ಪ್ರಮುಖ ಕಾರ್ಯಕ್ರಮ ಮತ್ತು ಅನುದಾನಗಳು

  • ಪರಿಶಿಷ್ಟ ಜಾತಿ ಪಂಗಡದ ಅಭಿವೃದ್ಧಿಗೆ (ರಾಜ್ಯ ಹಣಕಾಸು ಅನುದಾನ ಸೇರಿ) ₹734 ಲಕ್ಷ

  • ಕುಟೀರ ಭಾಗ್ಯ– ಕುಟೀರ ಜ್ಯೋತಿ ಯೋಜನೆಗೆ ₹2.5 ಲಕ್ಷ

  • ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗೆ ₹30 ಲಕ್ಷ

  • ಘನತ್ಯಾಜ್ಯ ನಿರ್ವಹಣೆಗೆ ₹89.80 ಕೋಟಿ

  • ಬೀದಿದೀಪಗಳ ನಿರ್ವಹಣೆಗೆ ₹13 ಕೋಟಿ

  • ರಾಜಕಾಲುವೆಗಳ ಸಮಗ್ರ ನಿರ್ವಹಣೆ ಕೃತಕ ನೆರೆ ನಿಯಂತ್ರಣಕ್ಕೆ ₹5.50 ಕೋಟಿ

  • ನೀರು ಸರಬರಾಜು ಮತ್ತು ನಿರ್ವಹಣೆಗೆ ₹45.40 ಕೋಟಿ

  • ಒಳಚರಂಡಿ ಅಭಿವೃದ್ಧಿ ಮತ್ತು ನಿರ್ವಹಣೆಗೆ ₹35.90 ಕೋಟಿ

  • ರಸ್ತೆ ಚರಂಡಿ ಪಾದಚಾರಿ ಮಾರ್ಗ ನಿರ್ಮಾಣ ಮತ್ತು ನಿರ್ವಹಣೆಗೆ ₹150 ಕೋಟಿ

  • ಸಾರ್ವಜನಿಕ ಆರೋಗ್ಯ ಮತ್ತು ನಗರ ನೈರ್ಮಲ್ಯಕ್ಕೆ ₹22.27 ಕೋಟಿ

ತಾತ್ಕಾಲಿಕ ರಾತ್ರಿ ವಸತಿ ಕೇಂದ್ರ

ಪಾಲಿಕೆ ವ್ಯಾಪ್ತಿಯಲ್ಲಿ 73 ಲಿಂಗತ್ವ ಅಲ್ಪಸಂಖ್ಯಾತರಿದ್ದು ಅವರಿಗೆ ತಾತ್ಕಾಲಿಕ ರಾತ್ರಿ ವಸತಿ ಕೇಂದ್ರ ತೆರೆಯಲು ಉದ್ದೇಶಿಸಲಾಗಿದ್ದು ಸದ್ಯಕ್ಕೆ ಬಾಡಿಗೆ ಕಟ್ಟಡದಲ್ಲಿ ವ್ಯವಸ್ಥೆ ಕಲ್ಪಿಸಲಾಗುವುದು. ಇದಕ್ಕೆ ₹10 ಲಕ್ಷ ಅನುದಾನ ಇಡಲಾಗಿದೆ ಎಂದು ವರುಣ್ ಚೌಟ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT