ಮೂಲ್ಕಿ: ಕಿನ್ನಿಗೋಳಿಯ ಯುಗಪುರುಷ ಸಂಸ್ಥೆಯ ಸಂಸ್ಥಾಪಕ ಕೊ.ಅ.ಉಡುಪ ಅವರ ಸ್ಮರಣಾರ್ಥ ಪ್ರತಿ ವರ್ಷ ನೀಡಲಾಗುವ ಕೊ.ಅ.ಉಡುಪ ಪ್ರಶಸ್ತಿಗೆ ಕನ್ನಡ-ತುಳು ಸಾಹಿತಿ, ಕವಿ, ನಾಟಕಕಾರ, ನಿರ್ದೇಶಕ, ಯಕ್ಷಗಾನ ಅರ್ಥಧಾರಿ, ನಿರೂಪಕ, ಸಂಘಟಕ ಕದ್ರಿ ನವನೀತ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ.
30ಕ್ಕೂ ಹೆಚ್ಚು ನಾಟಕ ಕೃತಿಗಳನ್ನು ರಚಿಸಿ, ತುಳು ಭಾಷೆಯ ಟಿ.ವಿ.ವಾರ್ತಾ ವಾಹಿನಿಯ ನಿರೂಪಕರಾಗಿ, ಪರಿಚಯ ಲೇಖನ, ವಿಮರ್ಶೆ, ಪುರವಣಿ ಲೇಖನ, ಟ್ಯಾಬ್ಲೊ ಸಾಹಿತ್ಯ, ಸಮ್ಮೇಳನ ಶೀರ್ಷಿಕೆ ಗೀತೆ, ಸ್ಮರಣ ಸಂಚಿಕೆಗಳಲ್ಲಿ ಬರಹಗಳ ಮೂಲಕ ನವನೀತ ಶೆಟ್ಟಿ ಅವರು ಪ್ರಸಿದ್ಧರಾಗಿದ್ದಾರೆ. ಅವರು ತುಳು ಸಿನಿಮಾಗಳಿಗೆ ಸಾಹಿತ್ಯವನ್ನೂ ರಚಿಸಿದ್ದಾರೆ. ಬೋಳಾರದ ಮಾರಿಯಮ್ಮ ಹಾಗೂ ಶ್ರೀದೇವಿ ಚರಿತಾಮೃತ ಸಂಶೊಧನಾ ಕೃತಿಗಳನ್ನು ರಚಿಸಿದ್ದು, ವೀಕ್ಷಕ ವಿವರಣೆಗಾರರಾಗಿಯೂ ಗಮನ ಸೆಳೆದಿದ್ದಾರೆ. ಈ ಹಿಂದೆ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿದ್ದ ಅವರು ಆದಿತ್ಯ ಮಂಜರಿ, ಶ್ರೀ ಶಿರಡಿ ಸಾಯಿಬಾಬಾ, ಶ್ರೀ ದೇವಿ ಮಾರಿಯಮ್ಮ ಪ್ರಸಂಗಗಳನ್ನು ರಚಿಸಿದ್ದಾರೆ.
ಇದೇ 24ರಂದು ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು ನಗದು, ಗೌರವ ಫಲಕ, ಪ್ರಶಸ್ತಿ ಪತ್ರದೊಂದಿಗೆ ಅವರನ್ನು ಗೌರವಿಸಲಾಗುವುದು ಎಂದು ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.