ಮಂಗಳೂರು: ‘ನಾನು ಹಳ್ಳಿಯಿಂದ ಬಂದವ, ಕೃಷಿಕ. ಹಳ್ಳಿಯವ ಎಂಬ ಕಾರಣಕ್ಕೆ ಈಗಲೂ ನನ್ನ ಕಾಲೆಳೆಯುವ ಕೆಲಸ ನಿರಂತರವಾಗಿ ಸಾಗುತ್ತಿದೆ’ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಅವರು
ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು ನಗರದ ಕುಲಶೇಖರದಲ್ಲಿರುವ ಒಕ್ಕೂಟದ ಡೇರಿ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಮಂಗಳೂರು ಡೈರಿಯ ಉಗ್ರಾಣಕ್ಕೆ ಶಂಕುಸ್ಥಾಪನೆ ಹಾಗೂ ವಸತಿ ಸಮುಚ್ಚಯದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ಕೃಷಿಕ ಎಂಬ ಕಾರಣದಿಂದ ನನ್ನನ್ನು ಕೆಳಕ್ಕೆ ಇಳಿಸುವ ಹುನ್ನಾರ ನಡೆಯುತ್ತಿದೆ’ ಎಂದರು.
‘ನಾನು ಈಗಲೂ 32 ನಾಟಿ ಹಸುಗಳನ್ನು ಸಾಕುತ್ತಿದ್ದೇನೆ. ದಿನಕ್ಕೆ 4 ಲೀಟರ್ ಹಾಲು ಮಾತ್ರ ಅವುಗಳಿಂದ ಸಿಗುತ್ತದೆ. ಆದರೂ ಹೈನುಗಾರಿಕೆ ಮತ್ತು ಪಶುಪಾಲನೆಯ ಸಂಸ್ಕೃತಿ ಉಳಿಯಬೇಕು ಎಂಬ ಕಾರಣಕ್ಕೆ ದನಗಳನ್ನು ಉಳಿಸಿಕೊಂಡಿದ್ದೇನೆ’ ಎಂದು ಹೇಳಿದರು.