ಮಂಗಳೂರು: ಆಯುರ್ವೇದ ಪದ್ಧತಿಯಲ್ಲಿ ಕ್ಯಾನ್ಸರ್ ಗುಣಪಡಿಸಲು ಸಾಧ್ಯವಿಲ್ಲವೆಂಬ ತಪ್ಪು ಕಲ್ಪನೆ ಇದೆ. ಆರಂಭಿಕ ಹಂತದಲ್ಲಿ ಚಿಕಿತ್ಸೆ ನೀಡಿದರೆ ಖಂಡಿತ ಗುಣಪಡಿಸಲು ಸಾಧ್ಯವಿದೆ ಎಂದು ಕೇರಳದ ಕ್ಯಾನ್ಸರ್ ಆಯುರ್ವೇದ ತಜ್ಞೆ ಡಾ. ಜನ್ನಾತುಲ್ ಫಿರ್ದೋಸ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವೆನ್ಲಾಕ್ ಆಯುಷ್ ಆಸ್ಪತ್ರೆ ಹಾಗೂ ಆಯುಷ್ ಕಾಲೇಜುಗಳ ಆಶ್ರಯದಲ್ಲಿ ಶುಕ್ರವಾರ ಇಲ್ಲಿ ಆಯೋಜಿಸಿದ್ದ ಎಂಟನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯಲ್ಲಿ ಅವರು ‘ಆಯುರ್ವೇದದಲ್ಲಿ ಕ್ಯಾನ್ಸರ್ ಚಿಕಿತ್ಸೆ’ ಕುರಿತು ಉಪನ್ಯಾಸ ನೀಡಿದರು.
ಕ್ಯಾನ್ಸರ್ ಎಂಬುದು ರೋಗಿಗಳನ್ನಷ್ಟೇ ಅಲ್ಲ, ಅವರ ಕುಟುಂಬದವರನ್ನು ಮಾನಸಿಕವಾಗಿ ಕುಗ್ಗಿಸುವ ಕಾಯಿಲೆ. ವೇದದಲ್ಲೂ ಅರ್ಬುದದ (ಕ್ಯಾನ್ಸರ್) ಬಗ್ಗೆ ಉಲ್ಲೇಖವಿದೆ. ಕ್ಯಾನ್ಸರ್ ಕಾಯಿಲೆ ಹಿಂದೆಯೂ ಇತ್ತು. ಅದಕ್ಕೆ ಪುರಾತನ ಪದ್ಧತಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು ಎಂದ ಅವರು ತಮ್ಮ ಬಳಿ ಚಿಕಿತ್ಸೆ ಪಡೆದು ಗುಣಮುಖರಾದ ಅನೇಕ ರೋಗಿಗಳನ್ನು ಉದಾಹರಿಸಿದರು.
ಸಾಮಾನ್ಯವಾಗಿ ಆರ್ಥಿಕ ಮುಗ್ಗಟ್ಟಿನಲ್ಲಿರುವವರು ದುಬಾರಿ ವೆಚ್ಚದ ಅಲೋಪಥಿ ಚಿಕಿತ್ಸೆ ಪಡೆಯಲಾಗದೆ, ಆಯುರ್ವೇದ ಚಿಕಿತ್ಸೆಗೆ ಬರುತ್ತಾರೆ. ಇನ್ನು ಕೆಲವರು ಬೇರೆ ಬೇರೆ ಕಡೆಗಳಲ್ಲಿ ಚಿಕಿತ್ಸೆ ಪಡೆದು, ಫಲಿತಾಂಶ ದೊರೆಯದಿದ್ದಾಗ ಆಯುರ್ವೇದ ಚಿಕಿತ್ಸೆಗೆ ದಾಖಲಾಗುತ್ತದೆ. ಆರಂಭದಲ್ಲೇ ಕಾಯಿಲೆಯನ್ನು ಗುರುತಿಸಿ ಚಿಕಿತ್ಸೆ ನೀಡಿದರೆ, ಕ್ಯಾನ್ಸರ್ ಗುಣಪಡಿಸಬಹುದು ಎಂದು ಹೇಳಿದರು.
ಸ್ತನ ಕ್ಯಾನ್ಸರ್ನಿಂದ ಬಳಲುತ್ತಿದ್ದ ಮಹಿಳೆ ಚಿಕಿತ್ಸೆಗೆ ದಾಖಲಾಗಿ ಗುಣಮುಖರಾಗಿ, ಆರೋಗ್ಯಯುತ ಜೀವನ ನಡೆಸುತ್ತಿರುವ ಉದಾಹರಣೆಯನ್ನು ವಿವರಿಸಿದರು.
ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಚೀನ ಆಯುರ್ವೇದ ಪದ್ಧತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಆಯುರ್ವೇದಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿದೆ. ಮಂಗಳೂರಿನ ಆಯುಷ್ ಆಸ್ಪತ್ರೆಯು ರಾಷ್ಟ್ರಕ್ಕೇ ಮಾದರಿಯಾಗಿದೆ ಎಂದರು.
ವೆನ್ಲಾಕ್ ಆಯುಷ್ ಆಸ್ಪತ್ರೆಯ ಆಯುಷ್ ಜಿಲ್ಲಾ ವೈದ್ಯಾಧಿಕಾರಿ ಡಾ. ಮುಹಮ್ಮದ್ ಇಕ್ಬಾಲ್ ಮಾತನಾಡಿದರು. ಡಾ.ಆಶಾಜ್ಯೋತಿ ರೈ, ಆಯುಷ್ ಆಸ್ಪತ್ರೆಯ ವೈದ್ಯರಾದ ಸೈಯ್ಯದ್ ಝಾಹಿದ್ ಹುಸೇನ್, ಡಾ. ಅಜಿತ್ ಇಂದ್ರ ಇದ್ದರು.
‘ಆಯುರ್ವೇದದಲ್ಲಿ ಕ್ಯಾನ್ಸರ್ ಚಿಕಿತ್ಸೆ’ ಕುರಿತು ಉಪನ್ಯಾಸ ಆಯುಷ್ ಮಾಹಿತಿ ಕೈಪಿಡಿ ಬಿಡುಗಡೆ ಆಯುಷ್ ಆಸ್ಪತ್ರೆಯ ಶಸ್ತ್ರಚಿಕಿತ್ಸೆ ಕೊಠಡಿ ಉದ್ಘಾಟನೆಗೆ ಸಿದ್ಧ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.