ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಗಮದಿಂದ ‘ಮನೆಗೊಂದು ಗೇರು ಗಿಡ’ ಕಾರ್ಯಕ್ರಮ

ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಅಧಿಕಾರ ಸ್ವೀಕಾರ
Published 12 ಮಾರ್ಚ್ 2024, 2:46 IST
Last Updated 12 ಮಾರ್ಚ್ 2024, 2:46 IST
ಅಕ್ಷರ ಗಾತ್ರ

ಮಂಗಳೂರು: ಗೇರು ಬೆಳೆಗೆ ಉತ್ತೇಜನ ನೀಡುವ ಉದ್ದೇಶದಿಂದ ಕರ್ನಾಟಕ ಗೇರು ಅಭಿವೃದ್ಧಿ ನಿಗಮವು ‘ಮನೆಗೊಂದು ಗೇರು ಗಿಡ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದೆ ಎಂದು ನಿಗಮ ನೂತನ ಅಧ್ಯಕ್ಷೆ ಮಮತಾ ಗಟ್ಟಿ ತಿಳಿಸಿದರು.

ನಿಗಮದ ಅಧ್ಯಕ್ಷೆಯಾಗಿ ಸೋಮವಾರ ಅಧಿಕಾರ ಸ್ವೀಕರಿಸಿದ ಬಳಿಕ  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಬಗ್ಗೆ ಪ್ರಸ್ತಾವ ಸಿದ್ದಪಡಿಸಿ ನಿಗಮದ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ ಅಂತಿನ ನಿರ್ಧಾರ ಕೈಗೊಳ್ಳಲಿದ್ದೇವೆ’ ಎಂದರು.

‘ಗೋಡಂಬಿಯಂತೆ, ಗೇರು ಹಣ್ಣಿನಲ್ಲೂ ಸಿ–ಜೀವಸತ್ವ ಹೇರಳವಾಗಿದೆ. ಗೇರು ಹಣ್ಣಿನ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ. ಗೇರು ಬೆಳೆಗೆ ಉತ್ತೇಜನ ನೀಡಲು ಕರಾವಳಿಯ ಮೂರೂ ಜಿಲ್ಲೆಗಳ ಪ್ರತಿ ವಿಧಾನಸಭಾ ಕ್ಷೇತ್ರದ ಹೋಬಳಿ ಮಟ್ಟದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದೇವೆ. ಜಿಲ್ಲಾ ಮಟ್ಟದಲ್ಲೂ ಕಾರ್ಯಾಗಾರ ನಡೆಸಲಿದ್ದೇವೆ’ ಎಂದರು.

‘ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಒಟ್ಟು 25,630 ಹೆಕ್ಟೇರ್‌ ಪ್ರದೇಶದಲ್ಲಿ ಗೇರು ಬೆಳೆಯಲಾಗುತ್ತಿದೆ. ಗೇರು ಬೆಳೆಯುವ ಪ್ರದೇಶದ ವಿಸ್ತೀರ್ಣದಲ್ಲಿ ಕರ್ನಾಟಕವು ದೇಶದಲ್ಲಿ ಐದನೇ ಸ್ಥಾನ ಹಾಗೂ ಗೇರುಬೀಜ ಉತ್ಪಾದನೆಯಲ್ಲಿ ಆರನೇ ಸ್ಥಾನದಲ್ಲಿದೆ. ನಿಗಮವು ಗೇರು ತೋಪುಗಳನ್ನು ಬೆಳೆಸಲು ಉತ್ತೇಜನ ನೀಡುತ್ತಾ ಬಂದಿದೆ’ ಎಂದರು.

ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಕಮಲಾ ಕೆ., ‘ರಾಜ್ಯದಲ್ಲಿ 53 ಸಾವಿರ ಟನ್‌ ಕಚ್ಚಾ ಗೇರುಬೀಜ ಉತ್ಪಾದನೆಯಾಗುತ್ತಿದ್ದು, ಇದರಲ್ಲಿ ನಿಗಮದ ಗೇರು ತೋಪುಗಳ ಪಾಲು 616 ಟನ್‌ಗಳಷ್ಟಿದೆ. ನಮ್ಮ ದೇಶದಲ್ಲಿ ಹೆಕ್ಟೇರ್‌ಗೆ ಸರಾಸರಿ 700 ಟನ್‌ ಗೇರು ಉತ್ಪಾದನೆಯಾದರೆ, ರಾಜ್ಯ ದಲ್ಲಿ ಈ ಪ್ರಮಾಣ 450 ಟನ್‌ ಮಾತ್ರ ಇದೆ. ಹವಾಮಾನ, ಭೌಗೋಳಿಕತೆ ಹಾಗೂ ಮಣ್ಣಿನಲ್ಲಿರುವ ಪೋಷಕಾಂಶಗಳಿಗೆ ಅನುಗುಣವಾಗಿ ಗೇರು ಇಳುವರಿ ಬರುತ್ತದೆ’ ಎಂದು ತಿಳಿಸಿದರು.

‘ಆಫ್ರಿಕಾ ಖಂಡದ ದೇಶಗಳಿಂದಲೂ ಗೇರು ಬೀಜ ಆಮದಾಗುತ್ತಿದ್ದು, ಅದರ ದರ ಕಡಿಮೆ ಇದೆ. ಇದರಿಂದ ಇಲ್ಲಿನ ಗೇರುಬೀಜ ಮಾರುಕಟ್ಟೆಗೆ ಹೊಡೆತ ಬೀಳುತ್ತಿದೆ. ಇಲ್ಲಿ ಹವಾಮಾನ ವೈಪರೀತ್ಯವೂ ಗೇರು ಉತ್ಪಾದನೆ ಮೇಲೆ ಪರಿಣಾಮ ಬೀರುತ್ತಿದೆ. ಗೇರು ಹೂ ಬಿಡುವ ಸಂದರ್ಭದಲ್ಲಿ ಚಳಿ ಮತ್ತು ಬಿಸಿಲು ಹೆಚ್ಚು ಇದ್ದರೆ ಒಳ್ಳೆಯದು. ಹವಾಮಾನ ಪೂರಕವಾಗಿಲ್ಲದಿದ್ದರೆ ಗೇರು ಹೂಗಳು ಒಣಗುತ್ತವೆ. ಇಬ್ಬನಿಯೂ ಗೇರು ಹೂಗಳ ಮೇಲೆ ಪರಿಣಾಮ ಬೀರುತ್ತದೆ. ಕಳೆದ ಡಿಸೆಂಬರ್‌ನಲ್ಲಿ ಮಳೆಯಾಗಿದ್ದರಿಂದ ಗೇರು ಹೂಬಿಡುವುದು ವಿಳಂಬವಾಯಿತು. ಈ ವರ್ಷ ಇಳುವರಿ ಕಡಿಮೆಯಾಗುವ ಸಾಧ್ಯತೆ ಇದೆ’ ಎಂದು ಅವರು ವಿವರಿಸಿದರು.

‘ನಿಗಮದ 1 ಸಾವಿರ ಹೆಕ್ಟೇರ್‌ಗಳಷ್ಟು ಗೇರು ತೋಪುಗಳ ಪುನರುಜ್ಜೀವನಕ್ಕೆ ಕಳೆದ ಸೆಪ್ಟೆಂಬರ್‌ನಲ್ಲಿ ₹2 ಕೋಟಿ ಅನುದಾನ ಬಿಡುಗಡೆಯಾಗಿದೆ. ಇದರ ಶೇ 70ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಗೇರು ತೋಪು ಪುನರುಜ್ಜಿವನ ಮತ್ತು ಗೇರು ನರ್ಸರಿ ಅಭಿವೃದ್ಧಿಗೆ ಆರ್‌ಕೆವೈವಿ ಅಡಿ ನಿಗಮಕ್ಕೆ ₹1.89 ಕೋಟಿ ಬಿಡುಗಡೆಯಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ’ ಎಂದರು. 

‘ಗೇರುಬೀಜದಿಂದ ಸಸಿ ಮಾಡಿದ ಗಿಡಗಳನ್ನು  ಹಿಂದೆ ಗೇರು ತೋಪುಗಳಲ್ಲಿ ನಾಟಿ ಮಾಡಲಾಗಿತ್ತು. ಕಸಿ ಮಾಡಿದ ಗಿಡಗಳು ಹೆಚ್ಚು ಇಳುವರಿ ನೀಡುವುದಲ್ಲದೇ, ಬಾಳಿಕೆಯೂ ಜಾಸ್ತಿ. ಹಾಗಾಗಿ ಗೇರು ತೋಪುಗಳ ಪುನರುಜ್ಜೀವನದ ವೇಳೆ ಕಸಿ ಗಿಡಗಳನ್ನೇ ಬಳಸಲಿದ್ದೇವೆ’ ಎಂದರು.

 ಕಮಲ ಕೆ.
 ಕಮಲ ಕೆ.

Quote - ನಿಗಮದಿಂದ ಭೋಗ್ಯಕ್ಕೆ ಪಡೆದ ಗೇರು ತೋಪುಗಳನ್ನು ಅನ್ಯ ವಾಣಿಜ್ಯ ಉದ್ದೇಶಗಳಿಗೆ ಬಳಸುತ್ತಿರುವುದು ಗಮನಕ್ಕೆ ಬಂದಿಲ್ಲ. ಇಂತಹ ದೂರು ಬಂದರೆ ಪರಿಶೀಲಿಸಿ ಕ್ರಮಕೈಗೊಳ್ಳುತ್ತೇವೆ ಮಮತಾ ಗಟ್ಟಿ ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ

Quote - ನಿಗಮದ ಗೇರು ತೋಪುಗಳಲ್ಲಿ ಎಂಡೋಸಲ್ಪಾನ್‌ ಅಥವಾ ಇತರ ರಾಸಾಯನಿಕಗಳ ಸಿಂಪಡಣೆ ಮಾಡುತ್ತಿಲ್ಲ. ಇದನ್ನು ಕೆಲ ವರ್ಷಗಳ ಹಿಂದೆಯೇ ಸ್ಥಗಿತಗೊಳಿಸಿದ್ದೇವೆ ಕಮಲಾ ಕೆ. ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ

Cut-off box - ಅಂಕಿ ಅಂಶ ₹ 4.14 ಕೋಟಿ ಗೇರು ಫಸಲಿನ ಮಾರಾಟದಿಂದ 2022–23ರಲ್ಲಿ ನಿಗಮವು ಗಳಿಸಿದ ವರಮಾನ 25630 ಹೆಕ್ಟೇರ್‌ ನಿಗಮದ ವ್ಯಾಪ್ತಿಯಲ್ಲಿರುವ ಗೇರು ತೋಪುಗಳು

Cut-off box - ‘ಗೇರು ತೋಪು ಅಭಿವೃದ್ಧಿ ₹ 50 ಕೋಟಿ ಪ್ರಸ್ತಾವ’ ‘ರಾಜ್ಯದಲ್ಲಿ ಹೊಸ ಗೇರು ತೋಪುಗಳನ್ನು ಅಭಿವೃದ್ಧಿಪಡಿಸಲು ನಿಗಮವು ಪ್ರಸ್ತಾವ ಸಿದ್ದಪಡಿಸಿದೆ.  ಗೇರು ಸಸಿ ನರ್ಸರಿ ಅಭಿವೃದ್ಧಿ ಗೇರು ಗಿಡಗಳ ನಾಟಿ ಹಾಗೂ ಹೊಸ ಕಸಿ ಗಿಡಗಳನ್ನು ಬೆಳೆಸಿ ಹಳೆ ಗೇರು ತೋಪುಗಳ ಪುನರುಜ್ಜಿವನಗೊಳಿಸಲು ಒಟ್ಟು ₹ 50 ಕೋಟಿ  ನೀಡುವಂತೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಿದ್ದೇವೆ. ರಾಷ್ಟ್ರೀಯ ತೋಟಗಾರಿಕಾ ಅಭಿಯಾನದಡಿ ₹ 10 ಕೋಟಿ  ಹಾಗೂ ರಾಷ್ಟ್ರಿಯ ಕೃಷಿ ವಿಕಾಸ ಯೋಜನೆಯಡಿ (ಆರ್‌ಕೆವಿವೈ) ₹ 8 ಕೋಟಿ ಒದಗಿಸುವಂತೆಯೂ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಮಮತಾ ಗಟ್ಟಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT