ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಜ್ಯೋತಿ’ಗೆ ಪರ್ಯಾಯವಾಗಿ ‘ಸಹ್ಯಾದ್ರಿ ಕೆಂಪುಮುಕ್ತಿ’ ತಳಿ

ರೈತ ಸಂಪರ್ಕ ಕೇಂದ್ರಗಳಲ್ಲಿ ಭತ್ತದ ಬಿತ್ತನೆ ಬೀಜ ಲಭ್ಯ
Published 22 ಮೇ 2024, 4:51 IST
Last Updated 22 ಮೇ 2024, 4:51 IST
ಅಕ್ಷರ ಗಾತ್ರ

ಮಂಗಳೂರು: ಮುಂಗಾರು ಹಂಗಾಮಿನಲ್ಲಿ ರೈತರಿಗೆ ಅವಶ್ಯಕವಿರುವ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಪೂರೈಕೆಗೆ ಕೃಷಿ ಇಲಾಖೆ ವ್ಯವಸ್ಥೆ ಕಲ್ಪಿಸಿದೆ.

ಜೂನ್ ಮೊದಲ ವಾರದಿಂದ ಮುಂಗಾರು ಪ್ರಾರಂಭವಾಗುವ ನಿರೀಕ್ಷೆ ಇದೆ. ಕೃಷಿ ಇಲಾಖೆಯು ರಾಜ್ಯ ಬೀಜ ನಿಗಮದಿಂದ ಪ್ರಮಾಣೀಕೃತವಾದ ಬಿತ್ತನೆ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳ ಮೂಲಕ ಸಹಾಯಧನದಲ್ಲಿ ಒದಗಿಸಲಾಗುತ್ತಿದೆ.

ಜಿಲ್ಲೆಯಲ್ಲಿ ಸಹ್ಯಾದ್ರಿ ಕೆಂಪುಮುಕ್ತಿ ತಳಿಯನ್ನು ಹೊಸದಾಗಿ ಬಿತ್ತನೆಗೆ ಪರಿಚಯಿಸಲಾಗುತ್ತಿದ್ದು, ಇದು ಜ್ಯೋತಿ ತಳಿಗೆ ಪರ್ಯಾಯವಾದ ಕೆಂಪಕ್ಕಿ ತಳಿಯಾಗಿದೆ. ಸಹ್ಯಾದ್ರಿ ಕೆಂಪುಮುಕ್ತಿಯು ಅಧಿಕ ಇಳುವರಿ, ಬೆಂಕಿ ಮತ್ತು ಊದುಬತ್ತ ರೋಗ ನಿರೋಧಕ ಮುಂತಾದ ಗುಣಲಕ್ಷಣಗಳನ್ನು ಹೊಂದಿದೆ. ಎಕರೆಗೆ ಅಂದಾಜು 20-25 ಕ್ವಿಂಟಲ್  ಇಳುವರಿ ನೀಡುತ್ತದೆ. ಎಂಒ-4 ತಳಿಗೆ ಹೋಲಿಸಿದರೆ ಸಹ್ಯಾದ್ರಿ ಕೆಂಪುಮುಕ್ತಿಯು 8 ರಿಂದ 10 ದಿನಗಳು ಮುಂಚಿತವಾಗಿ ಕಟಾವಿಗೆ ಬರುತ್ತದೆ.

ಜಿಲ್ಲೆಯಲ್ಲಿ ಕೆಂಪಕ್ಕಿ ತಳಿಯ ಭತ್ತದ ಬಿತ್ತನೆ ಬೀಜಕ್ಕೆ ಹೆಚ್ಚಿನ ಬೇಡಿಕೆ ಇde. ರಾಜ್ಯ ಬೀಜ ನಿಗಮದಲ್ಲಿ ಲಭ್ಯವಿರುವ ಕೆಂಪಕ್ಕಿ ತಳಿಗಳಾದ ಜಯ (140-150 ದಿನಗಳು) 60.5 ಕ್ವಿಂಟಲ್, ಜ್ಯೋತಿ (115-120 ದಿನಗಳು) 65.5 ಕ್ವಿಂಟಲ್, ಎಂಒ-4 (130-135ದಿನಗಳು) 198 ಕ್ವಿಂಟಲ್ ಮತ್ತು ಸಹ್ಯಾದ್ರಿ ಕೆಂಪುಮುಕ್ತಿ (120-125 ದಿನಗಳು) 180 ಕ್ವಿಂಟಲ್ ಭತ್ತದ ಬಿತ್ತನೆ ಬೀಜ ದಾಸ್ತಾನು ಮಾಡಲು ಕ್ರಮವಹಿಸಲಾಗಿದೆ. 

ರೈತ ಸಂಪರ್ಕ ಕೇಂದ್ರದಲ್ಲಿ ಎಂಒ-4 ತಳಿಯ 112 ಕ್ವಿಂಟಲ್, ಸಹ್ಯಾದ್ರಿ ಕೆಂಪುಮುಕ್ತಿ 80 ಕ್ವಿಂಟಲ್, ಜಯ  28.25 ಕ್ವಿಂಟಲ್, ಜ್ಯೋತಿ – 26 ಕ್ವಿಂಟಲ್ ದಾಸ್ತಾನಿದೆ. ರೈತ ಸಂಪರ್ಕ ಕೇಂದ್ರಗಳಿಂದ ಬಿತ್ತನೆ ಬೀಜ ಪಡೆಯುವ ರೈತರು  ವಿವಿಧ ತಳಿಯ ಭತ್ತ ಬೆಳೆಯುವ ಅವಧಿ, ಬೇಸಾಯ ಕ್ರಮ ಹಾಗೂ ಸಸ್ಯ ಸಂರಕ್ಷಣಾ ವಿಧಾನಗಳ ಮಾಹಿತಿ ಪಡೆದು ಅದಕ್ಕನುಗುಣವಾಗಿ ಬಿತ್ತನೆಗೆ ಉಪಯೋಗಿಸಬೇಕು.

ಮೇ ಅಂತ್ಯದವಗೆ ರಸಗೊಬ್ಬರದ ಬೇಡಿಕೆ 6,772 ಟನ್ ಗಳಷ್ಟಿದೆ. ಕಾಪು ದಾಸ್ತಾನಿನ ಸೇರಿದಂತೆ ಜಿಲ್ಲೆಯ ವಿವಿಧ ಸಹಕಾರಿ ಹಾಗೂ ಖಾಸಗಿ ಮಾರಾಟ ಮಳಿಗೆಗಳಲ್ಲಿ 14,608 ಟನ್ ರಸಗೊಬ್ಬರ ಲಭ್ಯವಿದೆ ಎಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT