‘ವಿದ್ಯಾರ್ಥಿಗಳು ‘ಫ್ರೆಂಡ್ ಶಿಪ್ ಬ್ಯಾಂಡ್’ ಧರಿಸಿದ್ದಾರೆ ಎಂದುಕೊಂಡು ಅದನ್ನು ತೆಗೆಸಿದ್ದೇವೆ’ ಎಂದು ಶಿಕ್ಷಕರು ಪೋಷಕರಿಗೆ ಸಮಜಾಯಿಷಿ ಹೇಳಿದರು. ಇದಕ್ಕೊಪ್ಪದ ಪೋಷಕರು, ‘ಫ್ರೆಂಡ್ ಶಿಪ್ ಡೇ ಕಳೆದು ಅನೇಕ ದಿನಗಳೇ ಕಳೆದಿದೆ. ಶಿಕ್ಷಕಿ ಫ್ರೆಂಡ್ ಶಿಪ್ ಬ್ಯಾಂಡ್ ತೆಗೆಸಿಲ್ಲ. ಉದ್ದೇಶಪೂರ್ವಕವಾಗಿ ಮಕ್ಕಳ ಕೈಯಲ್ಲಿದ್ದ ರಾಖಿಯನ್ನು ಕಿತ್ತು ಕಸದ ಬುಟ್ಟಿಗೆ ಎಸೆದಿದ್ದಾರೆ’ ಎಂದು ದೂರಿದರು. ಈ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸುವುದಾಗಿ ಶಾಲೆಯ ಮುಖ್ಯಶಿಕ್ಷಕರು ತಿಳಿಸಿದರೂ ಪೋಷಕರ ಆಕ್ರೋಶ ತಣಿಯಲಿಲ್ಲ. ರಾಖಿ ತೆಗೆಸಿದ ಶಿಕ್ಷಕಿಯೇ ಮಕ್ಕಳ ಕೈಗೆ ಮತ್ತೆ ರಾಖಿ ಕಟ್ಟಬೇಕು ಎಂದು ಪೋಷಕರು ಪಟ್ಟು ಹಿಡಿದರು. ಪರಿಸ್ಥಿತಿ ಹದ್ದು ಮೀರದಂತೆ ತಡೆಯಲು ಸುರತ್ಕಲ್ ಠಾಣೆಯ ಪೊಲೀಸರು ಆಡಳಿತ ಮಂಡಳಿ ಹಾಗೂ ಪೋಷಕರ ಜೊತೆ ಮಾತುಕತೆ ನಡೆಸಿದರು. ಬಳಿಕ ಶಾಲಾ ಮುಖ್ಯ ಶಿಕ್ಷಕರ ಕೈಗೂ ಪೋಷಕರು ರಾಖಿ ಕಟ್ಟಿದರು.