ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಸ್ಥಾನಗಳಿಗೆ ರಕ್ಷಣೆ ಕೊಡಿ: ವಿಶ್ವ ಹಿಂದೂ ಪರಿಷತ್‌ ಆಗ್ರಹ

Last Updated 26 ನವೆಂಬರ್ 2022, 4:37 IST
ಅಕ್ಷರ ಗಾತ್ರ

ಮಂಗಳೂರು: ‘ಕುಕ್ಕರ್‌ ಬಾಂಬ್‌ ಸ್ಫೋಟದ ಆರೋಪಿ ಮೊಹಮ್ಮದ್‌ ಶಾರಿಕ್‌, ನಗರದ ಕದ್ರಿ ಮಂಜುನಾಥ ದೇವಸ್ಥಾನ, ಕುದ್ರೋಳಿ ಗೋಕರ್ಣನಾಥ ಹಾಗೂ ಮಂಗಳಾದೇವಿ ದೇವಸ್ಥಾನಗಳನ್ನು ಗುರಿಯಾಗಿಸಿ ಭಯೋತ್ಪಾದನಾ ಕೃತ್ಯ ನಡೆಸುವ ಉದ್ದೇಶ ಹೊಂದಿದ್ದುದು ಮೇಲ್ನೊಟಕ್ಕೆ ಸಾಬೀತಾಗಿದೆ. ಈ ಧಾರ್ಮಿಕ ಕೇಂದ್ರಗಳಿಗೆ ಸರ್ಕಾರ ಭದ್ರತೆ ಒದಗಿಸಬೇಕು‘ ಎಂದು ವಿಶ್ವ ಹಿಂದೂ ಪರಿಷತ್‌ನ ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್‌ ಒತ್ತಾಯಿಸಿದರು.

ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆರ್‌ಎಸ್ಎಸ್‌ನ ಕಚೇರಿ ಸಂಘ ನಿಕೇತನಕ್ಕೂ ಬೆದರಿಕೆ ಇದ್ದು, ಇದಕ್ಕೂ ಸರ್ಕಾರ ರಕ್ಷಣೆ ನೀಡಬೇಕು’ ಎಂದು ಒತ್ತಾಯಿಸಿದರು.

’ಆರೋಪಿಯು ಹಿಂದೂ ಗುರುತನ್ನು ದುರ್ಬಳಕೆ ಮಾಡಿಕೊಂಡಿದ್ದ. ಆತ ಜೀವಂತವಾಗಿ ಸಿಕ್ಕಿದ್ದರಿಂದ ಆತ ಮುಸಲ್ಮಾನ ಎಂಬ ಸತ್ಯ ಹೊರ ಜಗತ್ತಿಗೆ ಗೊತ್ತಾಗಿದೆ. ಇಲ್ಲದಿದ್ದರೆ ಕುಕ್ಕರ್‌ ಬಾಂಬ್‌ ಸ್ಫೊಟವನ್ನೂ ಹಿಂದೂಗಳ ತಲೆಗೆ ಕಟ್ಟಲಾಗುತ್ತಿತ್ತು’ ಎಂದರು.

’ಉಗ್ರಗಾಮಿ ಸಂಘಟನೆಗಳ ಪರವಾಗಿ ಗೋಡೆ ಬರೆಹ ಬರದ ಪ್ರಕರಣದಲ್ಲಿ ಬಂಧಿತನಾಗಿದ್ದ. ಶಾರಿಕ್‌ಗೆ ಜಾಮೀನು ಕೊಡಿಸಿದ್ದು ಯಾರು, ಹಣಕಾಸು ಎಲ್ಲಿಂದ ಬರುತ್ತಿತ್ತು ಎಂದು ತನಿಖೆ ನಡೆಸುವಂತೆ ಗೃಹಸಚಿವರನ್ನು ಒತ್ತಾಯಿಸಿದ್ದೇವೆ’ ಎಂದರು.

‘ಆಟೊರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಅವರಿಗೆ ಸಂಘಟನೆಯಿಂದ ನೆರವು ನಿಡುತ್ತೇವೆ. ಸರ್ಕಾರವೂ ಅವರಿಗೆ ಪರಿಹಾರ ನೀಡಬೇಕು‘ ಎಂದು ಒತ್ತಾಯಿಸಿದರು.

’ಶಾರಿಕ್‌ಗಿಂತ ಹಿಂದೆಯೂ ಅನೇಕ ಘಟನೆಗಳು ಕರಾವಳಿ ಜಿಲ್ಲೆಯಲ್ಲಿ ನಡೆದಿದೆ. ಕೇವಲ ಭಯೋತ್ಪಾದನೆ ಕೃತ್ಯ ಮಾತ್ರವಲ್ಲ, ಲವ್‌ ಜಿಹಾದ್‌, ಬೇನಾಮಿ ಹಣ ಬಳಸಿ ಭೂಮಿ ಖರೀದಿ, ಡ್ರಗ್ಸ್‌ ದಂಧೆ, ಸೆಕ್ಸ್‌ ಜಿಹಾದ್‌ ಕೂಡಾ ಜಿಲ್ಲೆಯಲ್ಲಿ ನಡೆಯುತ್ತಿದೆ’ ಎಂದರು.

‘ಹಿಂದೂ ದೇವಸ್ಥಾನಗಳ ಪರಿಸರದಲ್ಲಿ ಅತ್ಯಮತೀಯರ ವ್ಯಾಪಾರಕ್ಕೆ ಅವಕಾಶ ನೀಡಬಾರದು’ ಎಂದು ಒತ್ತಾಯಿಸಿದರು.

ವಿಎಚ್‌ಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಹರೀಶ್‌ ಶೇಟ್‌, ಜಿಲ್ಲಾ ಅಧ್ಯಕ್ಷ ಗೋಪಾಲ್‌ ಕುತ್ತಾರ್‌, ವಿಭಾಗ ಸಂಚಾಲಕ ಭುಜಂಗ ಕುಲಾಲ್, ಬಜರಂಗ ದಳದ ಜಿಲ್ಲಾ ಸಂಚಾಲಕ ಪುನೀತ್‌ ಅತ್ತಾವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT