ಮಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜನ್ಮದಿನದ ಪ್ರಯುಕ್ತ ಯುವ ಕಾಂಗ್ರೆಸ್ ದಕ್ಷಿಣ ಬ್ಲಾಕ್ ಉಪಾಧ್ಯಕ್ಷ ಸವಾನ್ ಎಸ್.ಕೆ., ರಮಾನಂದ ಪೂಜಾರಿ ಅವರುಶನಿವಾರ ನಗರದ ವೆನ್ಲಾಕ್ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಅಂಗವಿಕಲ ರೋಗಿಗಳಿಗೆ ಉಚಿತ ವಾಕರ್ (ಊರುಗೋಲು), ಸಲಕರಣೆಗಳನ್ನು ಹಸ್ತಾಂತರಿಸಿದರು.
ಮಾಜಿ ಶಾಸಕ ಜೆ. ಆರ್. ಲೋಬೊ ಮಾತನಾಡಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜನ್ಮದಿನದ ಪ್ರಯುಕ್ತ ರೋಗಿಗಳಿಗೆ ವಾಕರ್, ಸಲಕರಣೆ ನೀಡಿರುವುದು ಶ್ಲಾಘನೀಯ. ಬಡ ರೋಗಿಗಳಿಗೆ ಸಹಕಾರಿ ಎಂದರು.
ಮುಖಂಡ ಮಿಥುನ್ ರೈ ಮಾತನಾಡಿ, ರಾಹುಲ್ ಗಾಂಧಿ ಜನ್ಮದಿನ ಪ್ರಯುಕ್ತ ಜಿಲ್ಲೆಯ ವಿವಿಧೆಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲಿ ಬೆಳಗಿನ ಹಾಗೂ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಪಕ್ಷ ಒದಗಿಸುತ್ತಿದೆ ಎಂದರು.
ಬಟ್ಟೆ ವಿತರಣೆ: ಎನ್ಎಸ್ಯುಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಬಟ್ಟೆ ಸಂಗ್ರಹ ಅಭಿಯಾನದಲ್ಲಿ ಸಂಗ್ರಹಿಸಲಾದ ಬಟ್ಟೆಗಳನ್ನು, ರಾಹುಲ್ ಗಾಂಧಿ ಜನ್ಮ ದಿನಾಚರಣೆ ಪ್ರಯುಕ್ತ ನಗರದ ಸ್ಟೇಟ್ ಬ್ಯಾಂಕ್ ಪ್ರದೇಶದ 500ಕ್ಕೂ ಅಧಿಕ ನಿರಾಶ್ರಿತರಿಗೆ ವಿತರಿಸಲಾಯಿತು.
ಎನ್ಎಸ್ಯುಐ ಜಿಲ್ಲಾ ಘಟಕದ ಅಧ್ಯಕ್ಷ ಸವಾದ್ ಸುಳ್ಯ, ಸುಹಾನ್ ಆಳ್ವ, ಅನ್ಸಾರುದ್ದೀನ್ ಸಾಲ್ಮರ, ರಾಜ್ಯ ಸಮಿತಿ ಕಾರ್ಯದರ್ಶಿ ಫಾರೂಕ್ ಬಯಬೆ, ಉಪಾಧ್ಯಕ್ಷರಾದ ನಿಖಿಲ್ ಪೂಜಾರಿ, ಅಂಕುಶ್ ಶೆಟ್ಟಿ, ಬಾತೀಷ್ ಅಳಕೆಮಜಲು, ಶ್ರೀನಿವಾಸ ವಿಶ್ವವಿದ್ಯಾಲಯ ಘಟಕದ ಅಧ್ಯಕ್ಷ ತಮೀಝ್ ಅಳಕೆಮಜಲು, ಅಯಾಝ್ ಚಾರ್ಮಾಡಿ, ಸುಳ್ಯ ತಾಲ್ಲೂಕು ಘಟಕದ ಉಪಾಧ್ಯಕ್ಷ ಯಶವಂತ್ ಅಡ್ಯಡ್ಕ, ನಜೀಬ್ ಮಂಚಿ ಇದ್ದರು.