ದಾವಣಗೆರೆ: ಲಾಕ್ಡೌನ್ ವೇಳೆ ಮಡಗಾಸ್ಕರ್ನಲ್ಲಿ ಸಿಲುಕಿರುವ ಜಿಲ್ಲೆಯ 17 ಮಂದಿಯನ್ನು ವಾಪಸ್ ಕರೆತರುವಂತೆ ವಿದೇಶಾಂಗ ವ್ಯವಹಾರಗಳ ಸಚಿವರು ಹಾಗೂ ಪೂರ್ವ ಆಫ್ರಿಕಾದ ಭಾರತೀಯ ರಾಯಭಾರಿಗಳಿಗೆ ಸಂಸದ ಜಿ.ಎಂ. ಸಿದ್ದೇಶ್ವರ ಪತ್ರ ಬರೆದಿದ್ದಾರೆ.
ದಾವಣಗೆರೆಯ ಚನ್ನಗಿರಿ ತಾಲ್ಲೂಕು ಬೋಪನಾಳ್ ಗ್ರಾಮದವರಾದ ಈ 17 ಮಂದಿ ಗಿಡಮೂಲಿಕೆ ವ್ಯಾಪಾರಕ್ಕಾಗಿ ಫೆಬ್ರುವರಿ ತಿಂಗಳಲ್ಲಿ ಮಡಗಾಸ್ಕರ್ಗೆ ತೆರಳಿದ್ದರು. ಕೋವಿಡ್ನಿಂದಾಗಿ ಅಂತರರಾಷ್ಟ್ರೀಯ ವಿಮಾನಗಳು ರದ್ದಾದ್ದರಿಂದ ಭಾರತಕ್ಕೆ ಬರಲು ಆಗದೇ ಅಲ್ಲಿಯೇ ಸಿಲುಕಿಕೊಂಡಿದ್ದಾರೆ. ಅಲ್ಲದೇ ಆಹಾರ ಹಾಗೂ ವಸತಿಗಳಿಗೆ ಸಮಸ್ಯೆಯಾಗಿ ಸಂಕಷ್ಟದಲ್ಲಿದ್ದಾರೆ.
‘ಬೆಂಗಳೂರು, ನವದೆಹಲಿ, ಹೈದರಾಬಾದ್ ಹಾಗೂ ಚನ್ನೈ ಇವುಗಳಲ್ಲಿ ಎಲ್ಲಿಗಾದರೂ ವಂದೇ ಭಾರತ್ ಮಿಷನ್ ವಿಮಾನದ ವ್ಯವಸ್ಥೆ ಮಾಡಿಕೊಡಬೇಕು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರಿಗೆ ಬುಧವಾರ ಪತ್ರ ಬರೆದಿದ್ದರು.
‘ಮಡಗಾಸ್ಕರ್ನಲ್ಲಿರುವ ದಾವಣಗೆರೆಯ ಜಿಲ್ಲೆಯವರ ಸಂಪರ್ಕದಲ್ಲಿದ್ದು, ಅವರಿಗೆ ಊಟ ಹಾಗೂ ವಸತಿಗೆ ತೊಂದರೆಯಾಗದಂತೆ ಕ್ರಮ ವಹಿಸುತ್ತೇವೆ. ಅಲ್ಲದೇ ಚಾರ್ಟರ್ ವಿಮಾನದ ಮುಖಾಂತರ ಶೀಘ್ರ ಭಾರತಕ್ಕೆ ಕಳುಹಿಸುವ ವ್ಯವಸ್ಥೆ ಮಾಡುತ್ತೇವೆ’ ಎಂದು ಮಡಗಾಸ್ಕರ್ನ ಭಾರತೀಯ ರಾಯಭಾರಿ ಕಚೇರಿಯವರು ಇ–ಮೇಲ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.