ದಾವಣಗೆರೆ: ‘ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಸುಮಾರು 300 ಹಳ್ಳಿಗಳಿಗೂ ಹೆಚ್ಚು ಕಡೆಗಳಲ್ಲಿ ಬಸ್ಗಳಿಲ್ಲ. ಮೂರು ದಶಕ ಅಧಿಕಾರ ಅನುಭವಿಸಿದರು ಯಾಕೆ ಮಾಡಲಿಲ್ಲ ಎಂಬ ಪ್ರಶ್ನೆ ಕೇಳಿ’ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯ್ ಕುಮಾರ್ ಹೇಳಿದರು.
ಚನ್ನಗಿರಿ ತಾಲ್ಲೂಕಿನ ಮರಡಿ ಗ್ರಾಮದಲ್ಲಿ ರೋಡ್ ಶೋ ನಡೆಸಿ ಅವರು ಮಾತನಾಡಿದ ಅವರು, ‘ಶಿಕ್ಷಣ, ಉದ್ಯೋಗ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿ ಕ್ರಾಂತಿ ಮಾಡಿ ತೋರಿಸುತ್ತೇನೆ. ಹಳ್ಳಿಗಳಲ್ಲಿ ಸೂಕ್ತ ಬಸ್ ಸೌಲಭ್ಯ ಇಲ್ಲದ ಕಾರಣ ಸಾವಿರಾರು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ. ಪೋಷಕರು ಈ ಬಗ್ಗೆ ಗಂಭೀರವಾಗಿ ಆಲೋಚಿಸಬೇಕು. ಅಧಿಕಾರಕ್ಕೆ ಬಂದವರ ಕೈಯಲ್ಲಿ ಯಾಕೆ ಸಾಧ್ಯವಾಗಿಲ್ಲ’ ಎಂದು ಪ್ರಶ್ನಿಸಿದರು.
‘ಜಿಲ್ಲೆಯ ಅಭಿವೃದ್ಧಿಗಾಗಿ ದೊಡ್ಡ ದೊಡ್ಡ ಕನಸು ಕಂಡಿದ್ದೇನೆ. ಕ್ಷೇತ್ರದ ಜನರು, ಯುವಕರು, ಮಕ್ಕಳಿಗೆ ಒಳ್ಳೆಯದಾಗಬೇಕು ಎಂದು. ಯುವಕರಿಗೆ ಉದ್ಯೋಗಾವಕಾಶ ಸಿಗುವಂತಾಗಬೇಕು. ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಚಲಾಯಿಸಿ. ಇಬ್ಬರನ್ನು ಸೋಲಿಸಲು ಸ್ವಾಭಿಮಾನಿಯಾಗಿ ಸ್ಪರ್ಧೆ ಮಾಡಿ ಗೆಲುವಿಗೆ ಹೋರಾಟ ಮಾಡಿದ್ದೇನೆ. ನಿಮ್ಮೆಲ್ಲರ ಆಶೀರ್ವಾದ ಬೇಕು’ ಎಂದು ಹೇಳಿದರು.
ಮರಡಿ ಗ್ರಾಮದ ಮುಖಂಡರಾದ ಟಿ. ಆರ್. ನಾಗರಾಜ್, ರುದ್ರೇಶ್, ರಂಗಪ್ಪ, ಸತೀಶ, ಎಂ. ಬಿ. ಮನು, ರಮೇಶ್, ಪರಶುರಾಮ್, ಎಸ್. ಆರ್. ರುದ್ರೇಶ್, ಗುಡ್ಡಪ್ಪ, ಯೋಗೇಶ್, ನಾಗರಾಜ್ ಮತ್ತಿತರರು ಹಾಜರಿದ್ದರು.
ತಣಿಗೆರೆಯಲ್ಲಿ ಪ್ರಚಾರ:
ತಣಿಗೆರೆಯಲ್ಲಿಯೂ ಪ್ರಚಾರ ನಡೆಸಿದ ವಿನಯ್ ಕುಮಾರ್, ‘ಬಿಜೆಪಿಯವರದ್ದು ಮೋದಿ ಗ್ಯಾರಂಟಿ, ಕಾಂಗ್ರೆಸ್ನವರದ್ದು ಸಿದ್ದರಾಮಯ್ಯರ ಗ್ಯಾರಂಟಿ. ನನಗೆ ಜನರ ಬೆಂಬಲವೇ ಗ್ಯಾರಂಟಿ. ನಿಮ್ಮ ಆಶೀರ್ವಾದ ನನ್ನ ಮೇಲಿರಲಿ’ ಎಂದು ಹೇಳಿದರು.
ತಣಿಗೆರೆ ಗ್ರಾಮದ ಮುಖಂಡರಾದ ಸುನೀಲ್, ಶ್ರೇಯಸ್, ಈಶಪ್ಪ ದೊಡ್ಮನೆ, ರಾಕೇಶ, ಟಿ. ಸಿ. ಹನುಮಂತಪ್ಪ, ಎ. ಕೆ. ಶಿವಕುಮಾರ್, ರಂಗಸ್ವಾಮಿ, ಸುರೇಶ್ ಹಾಜರಿದ್ದರು.