ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹರೋಸಾಗರ: ಬಗೆಹರಿಯದ ಸ್ಮಶಾನ ಭೂಮಿ ಸಮಸ್ಯೆ

ಬೇರೆ ನಿವೇಶನ ಕೊಡಿಸಲು ಮುಂದಾದ ಎಸ್‌ಟಿ ಸಮುದಾಯ
Published 12 ಡಿಸೆಂಬರ್ 2023, 13:55 IST
Last Updated 12 ಡಿಸೆಂಬರ್ 2023, 13:55 IST
ಅಕ್ಷರ ಗಾತ್ರ

ಬಸವಾಪಟ್ಟಣ: ಸಮೀಪದ ಹರೋಸಾಗರದಲ್ಲಿ ಸ್ಮಶಾನಕ್ಕಾಗಿ ಸರ್ಕಾರ ಗುರುತಿಸಿರುವ ಸ್ಥಳದಲ್ಲಿ ಶವ ಸಂಸ್ಕಾರ ಮಾಡುವ ವಿಚಾರದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮಧ್ಯೆ ಹಲವು ವರ್ಷಗಳಿಂದ ಉಂಟಾಗಿರುವ ಸಮಸ್ಯೆ ಬಗೆಹರಿಯುತ್ತಿಲ್ಲ.

ಹರೋಸಾಗರದ ಪರಿಶಿಷ್ಟ ಜಾತಿಗೆ ಸೇರಿದ ಚಂದ್ರಪ್ಪ ಅವರು ಮೃತಪಟ್ಟಿದ್ದು, ಅವರ ಶವ ಸಂಸ್ಕಾರವನ್ನು ಸರ್ಕಾರ ಗುರುತಿಸಿರುವ ಸ್ಥಳದಲ್ಲಿ ಮಾಡಲು ಶವವನ್ನು ತಂದಾಗ ಎಸ್‌ಟಿ ಸಮುದಾಯದವರು ವಿರೋಧ ವ್ಯಕ್ತಪಡಿಸಿದರು. ಆಗ ಎಸ್‌ಸಿ ಸಮುದಾಯದವರು ‘ನಮಗೆ ನ್ಯಾಯ ಬೇಕು’ ಎಂದು ಡಾ.ಬಿ.ಆರ್.ಅಂಬೇಡ್ಕರ್‌ ಅವರ ಭಾವಚಿತ್ರ ಹಿಡಿದು ಧರಣಿ ನಡೆಸಿದರು.

ವಿಷಯ ತಿಳಿದು ಸ್ಥಳಕ್ಕೆ ಬಂದ ಸಂತೇಬೆನ್ನೂರು ಸಿಪಿಐ ನಿಂಗನಗೌಡ ನೆಗಳೂರು ಅವರು, ‘ಸರ್ಕಾರ ಈ ಜಾಗವನ್ನು ಸ್ಮಶಾನಕ್ಕಾಗಿ ಗುರುತಿಸಿದೆ.  ಶವ ಸಂಸ್ಕಾರ ನಡೆಸಲು ಯಾರೂ ಅಡ್ಡಿ ಮಾಡಬಾರದು’ ಎಂದು ತಿಳಿ ಹೇಳಿದರು. ಬಳಿಕ ಶವ ಸಂಸ್ಕಾರ ನಡೆಸಲಾಯಿತು.

ಆದರೆ ಎಸ್‌ಟಿ ಸಮುದಾಯದವರು ‘ಇದರಿಂದ ನಮಗೆ ನ್ಯಾಯ ದೊರೆತಿಲ್ಲ. ಈ ಜಾಗದಲ್ಲಿ ನಾವು ಅಡಿಕೆ ಬೆಳೆದಿದ್ದೇವೆ. ಫಸಲು ಕಟಾವಿಗೆ ಬಂದಿದೆ. ಇಂತಹ ಸ್ಥಳ ಸ್ಮಶಾನವಾದರೆ ನಮ್ಮ ಕುಟುಂಬಗಳ ಗತಿ ಏನು’ ಎಂದು ಪ್ರಶ್ನಿಸಿದರು.

‘ಸರ್ಕಾರ ಈ ಜಾಗವನ್ನು ಎಸ್‌ಸಿ ಸಮುದಾಯದವರಿಗೆ ಸ್ಮಶಾನಕ್ಕಾಗಿ ಗುರುತಿಸಿದೆ. ಇದಕ್ಕೆ ವಿರೋಧ ವ್ಯಕ್ತವಾದರೆ ಹೇಗೆ ನ್ಯಾಯ ದೊರೆಯಲು ಸಾಧ್ಯ. ಶವ ಸಂಕಾರಕ್ಕೆ ಅವಕಾಶ ಕೊಡಿ’ ಎಂದು ದಸಂಸ ಮುಖಂಡ ಚಿತ್ರಲಿಂಗಪ್ಪ ಹೇಳಿದರು.

ಸೋಮವಾರ ಮೃತರಾಗಿದ್ದ ಎಸ್‌ಸಿ ಸಮುದಾಯದ ಚಂದ್ರಪ್ಪ ಅವರ ಶವ ಸಂಸ್ಕಾರ ಪೊಲೀಸ್‌ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ಮಧ್ಯಸ್ಥಿಕೆಯಿಂದ ಸರ್ಕಾರ ಸೂಚಿಸಿದ ಸ್ಥಳದಲ್ಲಿ ನಡೆಯಿತಾದರೂ ಮುಂದೆ ಈ ಸಮಸ್ಯೆಗೆ ಒಂದು ಶಾಶ್ವತ ಪರಿಹಾರ ದೊರೆತಿಲ್ಲ.

ಪ್ರತಿ ಬಾರಿ ಎಸ್‌ಸಿ ಸಮುದಾಯದವರು ಮೃತರಾದಾಗಲೂ ಇದೇ ಸಮಸ್ಯೆ ಎದುರಾಗುತ್ತಿದೆ. ಅಧಿಕಾರಿಗಳು ಎರಡೂ ಸಮುದಾಯದವರೂ ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಳ್ಳಲು ಸೂಚಿಸಿದರು. ಇದಕ್ಕೆ ಸ್ಪಂದಿಸಿದ ಎಸ್‌.ಟಿ. ಜನಾಂಗದವರು ಎಸ್‌ಸಿ ಸಮುದಾಯದವರ ಸ್ಮಶಾನಕ್ಕಾಗಿ ಬೇರೆಡೆ ನಿವೇಶನ ಒದಗಿಸಲಾಗುವುದು ಎಂದು ಹೇಳಿದ್ದಾರೆ. ಇದಕ್ಕೆ ಎಸ್‌ಸಿ ಸಮುದಾಯದವರು ಒಪ್ಪಿಗೆ ಕೊಟ್ಟು ಸೌಹಾರ್ದ ಮೂಡಿಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT