ದಾವಣಗೆರೆ: ಸಿಬಿಎಸ್ಇ ಪಠ್ಯಕ್ರಮದ 10ನೇ ತರಗತಿಗೆ ಮಾರ್ಚ್ನಲ್ಲಿ ನಡೆದ ಪರೀಕ್ಷೆಯಲ್ಲಿ ಶ್ರೀ ತರಳಬಾಳು ಸೆಂಟ್ರಲ್ ಸ್ಕೂಲ್ ವಿದ್ಯಾರ್ಥಿ ರಾಹುಲ್ ಜೀವನ್ ಎಚ್.ಎ. 500ಕ್ಕೆ 492 (ಶೇ 98.40) ಅಂಕ ಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾನೆ.
ಗಣಿತ ವಿಷಯದಲ್ಲಿ 99, ಸಮಾಜ ವಿಜ್ಞಾನ–99, ವಿಜ್ಞಾನ–99, ಇಂಗ್ಲಿಷ್–98 ಹಾಗೂ ಕನ್ನಡ–97 ಅಂಕಗಳಿಸಿದ್ದಾನೆ.
ಹರಪನಹಳ್ಳಿ ತಾಲ್ಲೂಕಿನ ಚಿಕ್ಕಮೇಗಳಗೆರೆಯ ಸರ್ಕಾರಿ ಶಾಲೆಯ ಶಿಕ್ಷಕ ದಂಪತಿಗಳಾದ ಅಜ್ಜಯ್ಯ ನಾಗೇಂದ್ರಪ್ಪ ಹಾಲವರ್ತಿ ಹಾಗೂ ಎಸ್. ಅನಿತಾ ಅವರ ಪುತ್ರ ರಾಹುಲ್ ಜೀವನ್ ಐಎಎಸ್ ಅಧಿಕಾರಿಯಾಗುವ ಕನಸು ಕಾಣುತ್ತಿದ್ದಾನೆ.
‘ದ್ವಿತೀಯ ಪಿಯು ಪರೀಕ್ಷೆ ಬಳಿಕ ಎಂ.ಬಿ.ಬಿ.ಎಸ್ ಓದುತ್ತೇನೆ. ನಂತರ ಯುಪಿಎಸ್ಸಿ ಪರೀಕ್ಷೆ ತೆಗೆದುಕೊಂಡು ಐಎಎಸ್ ಅಧಿಕಾರಿಯಾಗುತ್ತೇನೆ’ ಎಂದು ‘ಪ್ರಜಾವಾಣಿ’ ಜೊತೆ ಆತ್ಮವಿಶ್ವಾಸದಿಂದಲೇ ತಮ್ಮ ಬದುಕಿನ ಪಯಣದ ಕನಸು ಅನಾವರಣಗೊಳಿಸಿದನು.
‘ಶಾಲೆಯ ಶಿಕ್ಷಕರು ತುಂಬಾ ಕಾಳಜಿ ವಹಿಸಿ ಪಾಠ ಮಾಡುತ್ತಿದ್ದರು. ಗಣಿತ ಹೊರತುಪಡಿಸಿ ಉಳಿದ ಎಲ್ಲಾ ವಿಷಯಗಳನ್ನು ನವೆಂಬರ್ ಒಳಗೆ ಪಾಠ ಮಾಡಿ ಮುಗಿಸಿದ್ದರು. ಜನವರಿಯಲ್ಲಿ ಪಠ್ಯಗಳನ್ನು ಪುನರಾವರ್ತನೆ ಮಾಡಿಸಿದ್ದರು. ಫೆಬ್ರುವರಿ ತಿಂಗಳಲ್ಲಿ ದಿನಾಲೂ ಒಂದೊಂದು ವಿಷಯಕ್ಕೆ ಪೂರ್ವಸಿದ್ಧತಾ ಪರೀಕ್ಷೆ ನಡೆಸಿದ್ದರು. ಕೊನೆಯಲ್ಲಿ 18 ದಿನಗಳ ಕಾಲ ಓದಲು ಬಿಟ್ಟಿದ್ದರು’ ಎಂದು ತಿಳಿಸಿದರು.
‘ತರಗತಿಯಲ್ಲಿ ಹೇಳಿಕೊಟ್ಟಿದ್ದನ್ನು ಅದೇ ದಿನ ಓದುತ್ತಿದ್ದೆ. ತರಗತಿ ಅವಧಿ ಬಿಟ್ಟು ದಿನಾಲೂ ನಾಲ್ಕೈದು ಗಂಟೆ ಓದುತ್ತಿದ್ದೆ. ಭಾನುವಾರ ಹಾಗೂ ಉಳಿದ ರಜಾ ದಿನಗಳಂದು 8ರಿಂದ 9 ಗಂಟೆ ಓದುತ್ತಿದ್ದೆ. ಆಟ ಆಡಲು ಹೋಗಿದ್ದು ಕಡಿಮೆ’ ಎಂದು ಸಾಧನೆಯ ಗುಟ್ಟನ್ನು ಬಿಚ್ಚಿಟ್ಟನು.