ದಾವಣಗೆರೆ: ವಿಶ್ವ ತಂಬಾಕು ರಹಿತ ದಿನಾಚರಣೆಯ ಪ್ರಯುಕ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಿ.ಜಿ.ಆಸ್ಪತ್ರೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವತಿಯಿಂದ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ‘ತಂಬಾಕು ತ್ಯಜಿಸಲು ಬದ್ಧರಾಗಿರಿ’ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆಯ ವರದಿ ಪ್ರಕಾರ ಕರ್ನಾಟಕದಲ್ಲಿ ಒಟ್ಟು ಜನಸಂಖ್ಯೆಯಲ್ಲಿ ಶೇ 8.5 ರಷ್ಟು ಮಹಿಳೆಯರು ಮತ್ತು ಶೇ 27 ರಷ್ಟು ಪುರುಷರು ತಂಬಾಕು ಸೇವನೆ ಮಾಡುತ್ತಿದ್ದಾರೆ. ಜಿಎಟಿಎಸ್ ಸಮೀಕ್ಷೆಯ ಪ್ರಕಾರ ಕರ್ನಾಟಕದಲ್ಲಿ ಶೇ 22.8 ವಯಸ್ಕರು ತಂಬಾಕು ಸೇವನೆ ಮಾಡುತ್ತಿದ್ದಾರೆ. ಶೇ 25.2 ರಷ್ಟು ಮಂದಿ ಮನೆಯಲ್ಲಿಯೇ ವಯಸ್ಕರು ಪರೋಕ್ಷ ಧೂಮಪಾನಕ್ಕೆ ಒಳಗಾಗುತ್ತಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿ ಡಾ. ನಾಗರಾಜ ತಿಳಿಸಿದರು.
ಪ್ರತಿ ವರ್ಷ ಜಗತ್ತಿನಾದ್ಯಂತ ತಂಬಾಕು ಸೇವನೆಯಿಂದ 80 ಲಕ್ಷ ಜನ ಸಾಯುತ್ತಿದ್ದಾರೆ. ಅದರಲ್ಲಿ 70 ಲಕ್ಷ ಸಾವುಗಳು ತಂಬಾಕಿನ ನೇರ ಬಳಕೆಯಿಂದ ಸಂಭವಿಸುತ್ತದೆ. ಸುಮಾರು 10 ಲಕ್ಷ ಜನ ಪರೋಕ್ಷ ಧೂಮಪಾನದಿಂದ ಸಾವನ್ನಪ್ಪುತ್ತಿದ್ದಾರೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಜಯಪ್ರಕಾಶ ಮಾಹಿತಿ ನೀಡಿದರು.
ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ. ಮುರುಳಿಧರ್, ನೋಡಲ್ ಅಧಿಕಾರಿ ಡಾ. ಮುನಾವರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಾ. ಸುರೇಶ್ ಬಾರ್ಕಿ, ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಎಂ.ವಿ. ಹೊರಕೇರಿ, ಡಾ. ನಂದಿನಿ, ಲೋಕೇಶ್, ಉಮಾಪತಿ, ಸತೀಶ ಕಲಹಾಳ, ದೇವರಾಜ್ ಕೆ.ಪಿ. ಇದ್ದರು.
ತಂಬಾಕು ತ್ಯಜಿಸಲು ಲಾಕ್ಡೌನ್ ಸುಸಂದರ್ಭ: ಪೂಜಾರ ವೀರಮಲ್ಲಪ್ಪ ದಾವಣಗೆರೆ: ತಂಬಾಕು ಉತ್ಪನ್ನಗಳ ಸೇವನೆಯನ್ನು ತ್ಯಜಿಸಲು ಲಾಕ್ಡೌನ್ ಉತ್ತಮ ಸಂದರ್ಭ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ‘ತಂಬಾಕು ತ್ಯಜಿಸಲು ಬದ್ಧರಾಗಿರಿ’ ಪೋಸ್ಟರ್ ಬಿಡುಗಡೆ ಮಾಡಿ ಅವರು ಮಾತನಾಡಿದರು.
ತಂಬಾಕು ಬಳಸುವವರಿಗೆ ಕೊರೊನಾ ಬರುವ ಸಾಧ್ಯತೆ ಹೆಚ್ಚು. ಬಹಳ ಸಮಯ ತಂಬಾಕು ಬಳಸುವವರ ಶ್ವಾಸಕೋಶ ದುರ್ಬಲವಾಗಿರುತ್ತದೆ ಎಂದು ಹೇಳಿದರು.