ದಾವಣಗೆರೆ: ‘ದಾವಣಗೆರೆ ಲೋಕಸಭಾ ಜನರ ಆಶೀರ್ವಾದ, ಸಹಕಾರದಿಂದ ಗೆಲ್ಲುವ ಮೂಲಕ ತಾವರೆ ಹೂವು ಮುಡಿದು ಸಂಸತ್ ಪ್ರವೇಶಿಸುತ್ತೇನೆ’ ಎಂದು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ವಿಶ್ವಾಸ ವ್ಯಕ್ತಪಡಿಸಿದರು.
‘ಪಕ್ಷದ ಹಿರಿಯರು, ಮುಖಂಡರು ದೇಶಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಇಲ್ಲಿಯವರೆಗೆ ಮನೆಯೇ ನನ್ನ ಕುಟುಂಬವಾಗಿತ್ತು. ಈಗ ನನಗೆ ದಾವಣಗೆರೆಯೇ ಕುಟುಂಬವಾಗಿದೆ. ಇಡೀ ಕ್ಷೇತ್ರದ ಜನರಿಗೆ ಎಲ್ಲ ರೀತಿಯಲ್ಲಿ ಸ್ಪಂದಿಸುತ್ತೇನೆ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘28 ವರ್ಷಗಳಿಂದಲೂ ಕಾರ್ಯಕರ್ತರೊಂದಿಗೆ ಒಡನಾಟವಿದೆ. ನಮ್ಮ ಮಾವನವರು ಏಳು ವರ್ಷ, ಪತಿ 20 ವರ್ಷ ಸೇವೆ ಮಾಡಿದ್ದಾರೆ. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಎಲ್ಲ ಮನೆಗಳಿಗೆ ಹೋಗಿದ್ದೇನೆ. ಕಾರ್ಯಕರ್ತರ ಒಡನಾಟವಿದೆ. ಆದ್ದರಿಂದ ಸಕ್ರಿಯ ರಾಜಕಾರಣ ನನಗೇನು ಹೊಸದು ಅನಿಸುತ್ತಿಲ್ಲ’ ಎಂದರು.
‘ನನಗೆ ಟಿಕೆಟ್ ಸಿಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ರಾಷ್ಟ್ರದ ನಾಯಕರು ನನಗೆ ಅವಕಾಶ ನೀಡಿದ್ದಾರೆ. ಯಾವುದೇ ಕಳಂಕ ಬಾರದಂತೆ ಎಲ್ಲರ ಸಹಕಾರದಿಂದ ಗೆದ್ದು ಬರುತ್ತೇನೆ. ಪತಿಯವರ ಸಹಕಾರದಿಂದ ಎಲ್ಲ ಕೆಲಸ ಸಮರ್ಥವಾಗಿ ನಿಭಾಯಿಸುವೆ’ ಎಂದು ತಿಳಿಸಿದರು.
‘ಸಿದ್ದೇಶ್ವರ ಅವರು ಎಲ್ಲಿಗೂ ಹೋಗುವುದೇ ಇಲ್ಲ. ಕ್ಷೇತ್ರದ ಜನರೊಂದಿಗೆ ಇದ್ದೇ ಇರುತ್ತಾರೆ. 20 ವರ್ಷಗಳ ಕಾಲ ಉತ್ತಮ ಕೆಲಸ ಮಾಡಿದ್ದಾರೆ. ಮುಂದೆ ಅವರ ಸಲಹೆ, ಸಹಕಾರ ಪಡೆದು ಕೆಲಸ ಮಾಡುತ್ತೇನೆ’ ಎಂದು ತಿಳಿಸಿದರು.
‘ವಿರೋಧ ಎಲ್ಲಿಲ್ಲ ಹೇಳಿ. ದೇಶದಲ್ಲಿ ಎಲ್ಲ ಕಡೆ ವಿರೋಧ ಇದ್ದೇ ಇರುತ್ತದೆ. ಅವರೇನೂ ವಿರೋಧ ಮಾಡುತ್ತಿಲ್ಲ. ಅವರನ್ನು ಕರೆಸಿ ಮಾತನಾಡುತ್ತೇವೆ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಹೋಗಲಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇಂದು ಸಂಸದರ ರಿಪೋರ್ಟ್ ಕಾರ್ಡ್ ಬಿಡುಗಡೆ
ಸಂಸದ ಜಿ.ಎಂ.ಸಿದ್ದೇಶ್ವರ ಅವರು 10 ವರ್ಷಗಳಲ್ಲಿ ಕೈಗೊಂಡ ಯೋಜನೆ ಹಾಗೂ ಕಾರ್ಯಗಳ ಸಮಗ್ರ ಮಾಹಿತಿಯುಳ್ಳ ರಿಪೋರ್ಟ್ ಕಾರ್ಡ್ ಬಿಡುಗಡೆ ಹಾಗೂ ಲೋಕಸಭಾ ಕ್ಷೇತ್ರದ ಚುನಾವಣಾ ಕಾರ್ಯಾಲಯ ಉದ್ಘಾಟನೆ ಕಾರ್ಯಕ್ರಮ ಮಾ.15ರಂದು ಬೆಳಿಗ್ಗೆ 11ಕ್ಕೆ ಪಿ.ಬಿ. ರಸ್ತೆಯ ಅರುಣಾ ಟಾಕೀಸ್ ಮುಂಭಾಗದ ವಾಣಿ ಹೊಂಡ ಹಳೇ ಶೋ ರೂಂ ಆವರಣದಲ್ಲಿ ನಡೆಯಲಿದೆ. ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಸಂಸದ ಜಿ.ಎಂ. ಸಿದ್ದೇಶ್ವರ ಮಾಜಿ ಸಚಿವ ಬೈರತಿ ಬಸವರಾಜ್ ಶಾಸಕ ಬಿ.ಪಿ ಹರೀಶ್ ಇತರರು ಪಾಲ್ಗೊಳ್ಳುವರು
- ವಿವಿಧ ಮಠಗಳಿಗೆ ಭೇಟಿ
ಬಿಜೆಪಿ ಅಭ್ಯರ್ಥಿಯಾಗಿ ಟಿಕೆಟ್ ಸಿಕ್ಕ ಹಿನ್ನೆಲೆಯಲ್ಲಿ ಗಾಯತ್ರಿ ಸಿದ್ದೇಶ್ವರ ಅವರು ಸಿರಿಗೆರೆ ಬೃಹ್ಮನ್ಮಠಕ್ಕೆ ಭೇಟಿ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹಾಗೂ ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಸಂಸದರ ಪುತ್ರರಾದ ಜಿ.ಎಸ್.ಅನಿತ್ಕುಮಾರ್ ಪುತ್ರಿ ಅಶ್ವಿನಿ ಶ್ರೀನಿವಾಸ್ ಹಾಗೂ ಮುಖಂಡರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.