ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ ಜಿಲ್ಲೆಯ ಆರು ಹೋಬಳಿಗಳಲ್ಲಿ ಬರದ ಛಾಯೆ

ಜಿ.ಪಂ ಕೆಡಿಪಿ ಸಭೆಯಲ್ಲಿ ಮಾಹಿತಿ ನೀಡಿದ ಕೃಷಿ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್‌
Last Updated 11 ಸೆಪ್ಟೆಂಬರ್ 2018, 13:02 IST
ಅಕ್ಷರ ಗಾತ್ರ

ದಾವಣಗೆರೆ: ‘ಜಿಲ್ಲೆಯ ಆರು ಹೋಬಳಿಗಳಲ್ಲಿ ತೀವ್ರ ಮಳೆಯ ಕೊರತೆ ಉಂಟಾಗಿದ್ದು, ಬರಗಾಲದ ಛಾಯೆ ಕಾಡುತ್ತಿದೆ’ ಎಂದು ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದಗಲ್‌ ಅವರು ಜಿಲ್ಲಾ ಪಂಚಾಯಿತಿಯಲ್ಲಿ ಮಂಗಳವಾರ ನಡೆದ ತಿಂಗಳ ಕೆಡಿಪಿ ಸಭೆಯ ಗಮನಕ್ಕೆ ತಂದರು.

‘ಹರಪನಹಳ್ಳಿ ತಾಲ್ಲೂಕಿನ ನಾಲ್ಕೂ ಹೋಬಳಿ, ಹೊನ್ನಾಳಿ ತಾಲ್ಲೂಕಿನ ಗೋವಿನಕೋವಿ, ಹರಿಹರ ಹೋಬಳಿಯಲ್ಲಿ ಮಳೆಯ ತೀವ್ರ ಕೊರತೆಯಾಗಿದೆ. ಮೆಕ್ಕೆಜೋಳ ಕಾಳು ಕಟ್ಟುವ ಹಂತಕ್ಕೆ ಬಂದಿದೆ. ಈ ವಾರದಲ್ಲಿ ಮಳೆಯಾಗದೇ ಇದ್ದರೆ ಇಳುವರಿಯಲ್ಲಿ ಭಾರಿ ಕುಸಿತವಾಗಲಿದೆ. ತೇವಾಂಶ, ಮಳೆಯ ಕೊರತೆ ಆಧರಿಸಿ ಸರ್ಕಾರ ಶೀಘ್ರದಲ್ಲೇ ಬರಗಾಲ ತಾಲ್ಲೂಕುಗಳ ಪಟ್ಟಿಯನ್ನು ಪ್ರಕಟಿಸಲಿದೆ’ ಎಂದು ಮಾಹಿತಿ ನೀಡಿದರು.

ತಡವಾಗಿ ಬಿತ್ತನೆ ಮಾಡಿದ ಕಡೆ ಹುಳು ಬಾಧೆಯೂ ಕಾಣಿಸಿಕೊಂಡಿದ್ದು, ಅವುಗಳ ನಿಯಂತ್ರಣಾ ಕ್ರಮದ ಬಗ್ಗೆ ರೈತರಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.

ತೋಟಗಾರಿಕೆ ಇಲಾಖೆ ಉಪನಿರ್ದೇಶಕ ವೇದಮೂರ್ತಿ, ‘ಮಳೆಯ ಕೊರತೆಯಾಗಿದ್ದರೂ ಕೊಳವೆಬಾವಿಗಳಲ್ಲಿ ನೀರು ಲಭಿಸುತ್ತಿರುವುದರಿಂದ ತೋಟಗಾರಿಗೆ ಬೆಳೆ ಇನ್ನೂ ಹಾನಿಯಾಗಿಲ್ಲ. ಕಾಲುವೆ ಪ್ರದೇಶ ಹೊರತುಪಡಿಸಿ ಜಗಳೂರು ಹಾಗೂ ಹರಪನಹಳ್ಳಿ ಭಾಗದಲ್ಲಿ ನೀರಿನ ಕೊರತೆಯಿಂದ ತೆಂಗಿನ ಬೆಳೆ ಒಣಗುವ ಸಾಧ್ಯತೆ ಇದೆ’ ಎಂದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಎಂಜಿನಿಯರ್‌ ರಾಜು, ‘ಮಳೆಯ ಕೊರತೆಯಿಂದ ಕೆಲವೆಡೆ ಕೊಳವೆಬಾವಿಗಳಲ್ಲಿ ನೀರು ಬತ್ತುತ್ತಿವೆ. ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಈಗಾಗಲೇ ಕೊಳವೆಬಾವಿ ಕೊರೆಸಲು ಜಾಗ ಗುರುತಿಸಲಾಗುತ್ತಿದೆ. ಕೆಲವು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಮುಕ್ತಾಯ ಹಂತದಲ್ಲಿದ್ದು, ಆದಷ್ಟು ಬೇಗನೆ ಕುಡಿಯುವ ನೀರು ಸರಬರಾಜು ಮಾಡಲಾಗುವುದು’ ಎಂದು ತಿಳಿಸಿದರು.

ಉಪಾಧ್ಯಕ್ಷೆ ರಶ್ಮಿ ಜಿ., ‘ಉಚ್ಚಂಗಿದುರ್ಗಕ್ಕೆ ಸಾವಿರಾರು ಭಕ್ತರು ಬರುತ್ತಾರೆ. ಅಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದ್ದು, ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.

ರಾಜಕಾರಣ ಮಾಡಲು ಆಗದು: ಕೊಳವೆಬಾವಿ ಕೊರೆಸಲು ನಿಯಮಾವಳಿ ಅಡ್ಡಿಯಾಗುತ್ತದೆ ಎಂಬ ಅಧಿಕಾರಿಗಳ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಕೃಷಿ ಮತ್ತು ಕೈಗಾರಿಕೆ ಸಮಿತಿ ಅಧ್ಯಕ್ಷ ಎಂ.ಆರ್‌. ಮಹೇಶ್‌, ‘ಹಳ್ಳಿಯ ಜನ ಕಾನೂನು ಏನಿದೆ ಎಂಬುದನ್ನು ನೋಡುವುದಿಲ್ಲ. ಪ್ರತಿಯೊಂದಕ್ಕೂ ನಮ್ಮನ್ನು ಕೇಳುತ್ತಾರೆ. ಅದನ್ನೇ ಹೇಳಿಕೊಳ್ಳುತ್ತ ಹೋದರೆ ನಾವು ರಾಜಕಾರಣ ಮಾಡಲು ಆಗುವುದಿಲ್ಲ. ಜನರಿಗೆ ನೀರು ಕೊಡಲು ನಿಯಮಾವಳಿಯನ್ನು ಬದಲಾಯಿಸಬೇಕು. ಜನರಿಗಾಗಿ ಸಂವಿಧಾನವನ್ನೇ ಬದಲಾಯಿಸಿಲ್ಲವೇ’ ಎಂದು ಪ್ರಶ್ನಿಸಿದರು.

ಜಗಳೂರು ಆಸ್ಪತ್ರೆ ಅವ್ಯವಸ್ಥೆ: ‘ಜಗಳೂರು ಸರ್ಕಾರಿ ಆಸ್ಪತ್ರೆಯಲ್ಲಿ ಔಷಧವನ್ನು ಹೊರಗೆ ಮಾರಲಾಗುತ್ತಿದೆ. ಚಿಕಿತ್ಸೆಗೆ ರೋಗಗಳಿಂದ ಹಣ ಪಡೆಯಲಾಗುತ್ತಿದೆ. ಸರಿಯಾಗಿ ಊಟ ನೀಡುತ್ತಿಲ್ಲ. ಕುಡಿಯುವ ನೀರಿನ ಸೌಲಭ್ಯವೂ ಇಲ್ಲ. ಆಡಳಿತ ವೈದ್ಯಾಧಿಕಾರಿ ಡಾ. ಮುರಳೀಧರ ಅವರನ್ನು ಕೂಡಲೇ ಬದಲಾಯಿಸಬೇಕು’ ಎಂದು ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಜೆ. ಸವಿತಾ ಒತ್ತಾಯಿಸಿದರು.

‘ಈ ಹಿಂದಿನ ಸಭೆಯಲ್ಲೂ ಈ ಬಗ್ಗೆ ಗಮನ ಸೆಳೆದಿದ್ದೆ. ಈ ಸಮಸ್ಯೆಗಳಿಗೆ ಪರಿಹಾರ ಸಿಗಲು ಇನ್ನೂ ಎಷ್ಟು ಸಭೆಗಳು ನಡೆಯಬೇಕು. ನಮ್ಮ ಅವಧಿ ಮುಗಿಯುವವರೆಗೂ ಹೀಗೆಯೇ ಕಾಲ ಕಳೆಯುತ್ತೀರಾ’ ಎಂದು ಆರೋಗ್ಯ ಇಲಾಖೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿಯನ್ನು ಪರಿಶೀಲಿಸಲಾಯಿತು. ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಜಿ.ಎಸ್‌. ಷಡಕ್ಷರಪ್ಪ, ಮುಖ್ಯ ಯೋಜನಾಧಿಕಾರಿ ಬಸನಗೌಡ, ಮುಖ್ಯ ಲೆಕ್ಕಾಧಿಕಾರಿ ಟಿ. ಆಂಜನೇಯ ಹಾಜರಿದ್ದರು.

ಸಭೆಯಲ್ಲಿ ಕೋಳಿ– ಕುರಿ ಗಲಾಟೆ...!

ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ಫಲಾನುಭವಿಗಳಿಗೆ ಗಿರಿರಾಜ ಕೋಳಿ ಮರಿ ಬದಲಾಗಿ ಕುರಿ ಮರಿ ವಿತರಿಸಬೇಕು ಎಂಬ ವಿಷಯದಲ್ಲಿ ಜನಪ್ರತಿನಿಧಿಗಳ ಹಾಗೂ ಅಧಿಕಾರಿ ನಡುವೆ ಮುಸುಕಿನ ಗುದ್ದಾಟ ನಡೆಯಿತು.

₹ 15 ಲಕ್ಷ ವೆಚ್ಚದಲ್ಲಿ 17,647 ಫಲಾನುಭವಿಗಳಿಗೆ ಗಿರಿರಾಜ ಕೋಳಿ ಹಾಗೂ ಇತರೆ ಹಕ್ಕಿಗಳ ಮರಿಗಳನ್ನು ವಿತರಿಸಲು ಗುರಿ ನಿಗದಿಗೊಳಿಸಲಾಗಿದೆ ಎಂದು ಇಲಾಖೆಯ ಉಪನಿರ್ದೇಶಕ ಡಾ. ಶಿವಪ್ರಕಾಶ್‌ ಮಾಹಿತಿ ನೀಡುತ್ತಿದ್ದಂತೆ ಎಂ.ಆರ್‌. ಮಹೇಶ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಎಂ.ಆರ್‌. ಮಹೇಶ್‌: ಗಿರಿರಾಜ ಕೋಳಿ ಮರಿ ವಿತರಿಸುವುದು ಬೇಡ; ಅದರ ಬದಲು ಕುರಿ ಮರಿಯನ್ನು ವಿತರಿಸಬೇಕು ಎಂದು ಈ ಹಿಂದೆಯೇ ಸದಸ್ಯರು ತೀರ್ಮಾನಿಸಿದ್ದರೂ ಮರಿಯನ್ನೇಕೆ ತರಿಸಿದ್ದೀರಿ?

ಡಾ. ಶಿವಪ್ರಕಾಶ್‌: ಈ ಯೋಜನೆಯಡಿ ಗಿರಿರಾಜ ಕೋಳಿ ಮರಿಯನ್ನೇ ವಿತರಿಸಬೇಕು; ಅನುದಾನವನ್ನು ಬೇರೆ ಉದ್ದೇಶಕ್ಕೆ ಬಳಸುವಂತಿಲ್ಲ ಎಂದು ಸೆ. 5ರಂದು ಇಲಾಖೆಯಿಂದ ಸುತ್ತೋಲೆ ಬಂದಿದೆ.

ಎಂ.ಆರ್‌. ಮಹೇಶ್‌: ಸುತ್ತೋಲೆ ಬಂದಿರುವುದನ್ನು ನಮ್ಮ ಗಮನಕ್ಕೆ ಏಕೆ ತಂದಿಲ್ಲ? ನೀವು ಕೋಳಿ ಮರಿಯನ್ನು ಈಗಾಗಲೇ ಕೊಟ್ಟಿದ್ದೀರಿ. ಹೀಗಾಗಿಯೇ ಕೋಳಿ ಮರಿಯನ್ನೇ ವಿತರಿಸಬೇಕು ಎಂದು ಪಟ್ಟು ಹಿಡಿಯುತ್ತಿದ್ದೀರಿ.

ಡಾ. ಶಿವಪ್ರಕಾಶ್‌: ಇಲಾಖೆಯಿಂದ ಬಂದ ನಿರ್ದೇಶನದಂತೆ ನಡೆದುಕೊಂಡಿದ್ದೇವೆ. ನಿನ್ನೆಯಷ್ಟೇ ಕೋಳಿ ಮರಿಗಳನ್ನು ತರಿಸಿದ್ದೇವೆ. ಮಾರುಕಟ್ಟೆಯಲ್ಲಿ ಒಂದು ಮರಿಗೆ ₹ 85 ಬೆಲೆ ಇದೆ. ಪರಿಶಿಷ್ಟ ಜಾತಿ ಫಲಾನುಭವಿಗಳಿಗೆ ಉಚಿತವಾಗಿ ನೀಡುತ್ತೇವೆ. ಉಳಿದವರಿಗೆ ಒಂದು ಮರಿಗೆ ₹ 21.25 ಬೆಲೆಯಲ್ಲಿ ಕೊಡುತ್ತೇವೆ.

ಎಂ.ಆರ್‌. ಮಹೇಶ್‌: ಹಣ ವಾಪಸ್‌ ಹೋದರೂ ಪರವಾಗಿಲ್ಲ. ಕೋಳಿ ಮರಿ ವಿತರಿಸುವುದನ್ನು ಅಧ್ಯಕ್ಷರು ತಡೆಯಬೇಕು. ಇಲಾಖೆಯ ಸಚಿವರ ಬಳಿಗೆ ಹೋಗಿ ಕುರಿ ಮರಿ ವಿತರಿಸಲು ಒಪ್ಪಿಗೆ ಪಡೆದುಕೊಂಡು ಬರೋಣ.

ಜಯಶೀಲಾ ಕೆ.ಆರ್‌: ಸದ್ಯಕ್ಕೆ ಫಲಾನುಭವಿಗಳಿಗೆ ಕೋಳಿ ಮರಿಯನ್ನು ವಿತರಿಸಬೇಡಿ. ಈ ಬಗ್ಗೆ ನಂತರ ತೀರ್ಮಾನ ಕೈಗೊಳ್ಳೋಣ.

**

ಅಧಿಕಾರಿಗಳಿಗೆ ಗತ್ತು ತೋರಿಸಿದ ಅಧ್ಯಕ್ಷೆ

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯಾದ ಬಳಿಕ ಇದೇ ಮೊದಲ ಬಾರಿಗೆ ಸಭೆ ನಡೆಸಿದ ಜಯಶೀಲಾ ಕೆ.ಆರ್‌. ಅವರು ಸಮರ್ಪಕವಾಗಿ ಮಾಹಿತಿ ನೀಡದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುವ ಮೂಲಕ ತಮ್ಮ ಗತ್ತನ್ನು ಪ್ರದರ್ಶಿಸಿದರು.

ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಗೈರಾಗಿ ತಮ್ಮ ಅಧೀನ ಅಧಿಕಾರಿಗಳನ್ನು ಕಳುಹಿಸಿರುವುದಕ್ಕೆ ಸಿಟ್ಟಿಗೆದ್ದ ಅಧ್ಯಕ್ಷೆ, ‘ಯಾವ ಕಾರಣಕ್ಕೆ ಗೈರಾಗಿದ್ದಾರೆ ಎಂಬ ಬಗ್ಗೆ ಸೂಕ್ತ ದಾಖಲೆಗಳನ್ನು ಒದಗಿಸಬೇಕು. ಮುಂದಿನ ಸಭೆಗೆ ಹಿರಿಯ ಅಧಿಕಾರಿಗಳು ಗೈರಾಗುತ್ತಿರುವ ಬಗ್ಗೆ ದಾಖಲೆ ತರದಿದ್ದರೆ ಅಧೀನ ಅಧಿಕಾರಿಗಳನ್ನು ವಾಪಸ್‌ ಕಳುಹಿಸಲಾಗುವುದು’ ಎಂದು ಗುಡುಗಿದರು.

ಅನುಪಾಲನಾ ವರದಿ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ ಶಿಕ್ಷಣ ಇಲಾಖೆಯ ಅಧೀನ ಅಧಿಕಾರಿ, ‘ಬೆಳಿಗ್ಗೆ ಸಭೆಗೆ ಹೋಗುವಂತೆ ಡಿಡಿಪಿಐ ನನಗೆ ಹೇಳಿದರು. ವರದಿ ತಂದಿಲ್ಲ’ ಎಂಬ ಉತ್ತರ ನೀಡಿದರು. ಇದರಿಂದ ಕೆರಳಿದ ಅಧ್ಯಕ್ಷೆ, ‘ಇದು ಜಿಲ್ಲಾ ಪಂಚಾಯಿತಿ ಆಡಳಿತ ವ್ಯವಸ್ಥೆಯನ್ನು ತೋರಿಸುತ್ತದೆ. ವರದಿ ತರಿಸುವವರೆಗೂ ನೀವು ನಿಂತುಕೊಂಡೇ ಇರಿ’ ಎಂದು ಶಿಕ್ಷಿಸಲು ಮುಂದಾದರು.

ಆಗ ಮಧ್ಯ ಪ್ರವೇಶಿಸಿದ ಶಿಕ್ಷಣ ಮತ್ತು ಆರೋಗ್ಯ ಸಮಿತಿ ಅಧ್ಯಕ್ಷ ಬಿ.ಎಂ. ವಾಗೀಶಸ್ವಾಮಿ, ‘ಇವರು ಸುಮ್ಮನೆ ಇಲ್ಲಿ ನಿಂತುಕೊಂಡಿರುವ ಬದಲು ಹೋಗಿ ವರದಿಯನ್ನು ತರಲಿ’ ಎಂದರು.

ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯುತ್ತಿದ್ದಾಗ ಬಸನಗೌಡ, ಕೃಷಿ ಇಲಾಖೆ ಹೆಸರು ಕರೆದರು. ಅಷ್ಟರೊಳಗೆ ಒಳಗೆ ಬಂದು ಕುಳಿತಿದ್ದ ಕೃಷಿ ಇಲಾಖೆಯ ಅಧೀನ ಅಧಿಕಾರಿ, ಅನುಪಾಲನಾ ವರದಿ ಓದತೊಡಗಿದರು. ಮತ್ತೆ ಸಿಟ್ಟಿಗೆದ್ದ ಅಧ್ಯಕ್ಷೆ, ‘ಅನುಪಾಲನಾ ವರದಿ ಓದುವಂತೆ ಯಾರು ಹೇಳಿದರು? ಇಲ್ಲಿ ಏನು ನಡೆಯುತ್ತಿದೆ’ ಎಂದು ಬಸನಗೌಡ ಅವರನ್ನು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಬಸನಗೌಡ, ‘ನಿಮ್ಮ ಅಧ್ಯಕ್ಷತೆಯಲ್ಲೇ ಸಭೆ ನಡೆಯುತ್ತಿದೆ. ನಾನು ಕೇವಲ ಸಂಯೋಜಕನಾಗಿ ಕೆಲಸ ಮಾಡುತ್ತಿದ್ದೇನೆ. ಮಾಹಿತಿ ನೀಡುವುದು ಆಯಾ ಇಲಾಖೆಗಳ ಅಧಿಕಾರಿಗಳ ಕೆಲಸ. ಅವರು ಮಾಡುವ ತಪ್ಪಿಗೆ ನಾನು ಜವಾಬ್ದಾರನಲ್ಲ’ ಎಂದು ಪ್ರತ್ಯುತ್ತರ ನೀಡಿದರು.

ಕೃಷಿ ಅಧಿಕಾರಿ ಮಾಹಿತಿ ನೀಡುವಲ್ಲಿ ತಡಬಡಾಯಿಸಿದಾಗ, ‘ಅಸ್ಪಷ್ಟ ಮಾಹಿತಿ ನೀಡಿ ಗೊಂದಲ ಮೂಡಿಸುತ್ತಿದ್ದಾರೆ. ಅಧೀನ ಅಧಿಕಾರಿಗಳಿಂದ ಮಾಹಿತಿ ಪಡೆದು ಸಭೆ ನಡೆಸುವುದಾದರೆ ನಾವು ಹೊರಗೆ ಹೋಗುತ್ತೇವೆ’ ಎಂದು ವಾಗೀಶಸ್ವಾಮಿ ಅಧ್ಯಕ್ಷರಿಗೆ ಎಚ್ಚರಿಕೆ ನೀಡಿದರು.

ಬಳಿಕ ಅಧ್ಯಕ್ಷೆ ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಮಾತ್ರ ಮಾಹಿತಿ ಪಡೆದುಕೊಂಡರು.

ಪೋಷಣ್‌ ಅಭಿಯಾನ

‘ಕೇಂದ್ರ ಸರ್ಕಾರದ ರಾಷ್ಟ್ರೀಯ ಪೋಷಕಾಂಶ ಮಿಷನ್‌ನಡಿ ದಾವಣಗೆರೆ ಜಿಲ್ಲೆಯನ್ನು ಪ್ರಧಾನಮಂತ್ರಿ ಪೋಷಣ್‌ ಅಭಿಯಾನಕ್ಕೆ ಆಯ್ಕೆ ಮಾಡಲಾಗಿದ್ದು, ಸೆ. 30ರವರೆಗೆ ಇದು ಜಾರಿಯಲ್ಲಿರುತ್ತದೆ. ಗರ್ಭಿಣಿ, ಬಾಳಂತಿ ಹಾಗೂ ಆರು ವರ್ಷದೊಳಗಿನ ಮಕ್ಕಳ ಆರೋಗ್ಯ ತಪಾಸಣೆ, ರಕ್ತ ತಪಾಸಣೆ, ಪೂರಕ ಪೋಷಕಾಂಶಗಳನ್ನು ಪರೀಕ್ಷೆ ಮಾಡಲಾಗುತ್ತದೆ. ಪೋಷಕಾಂಶದ ಮಹತ್ವದ ಬಗ್ಗೆ ಜನಜಾಗೃತಿ ಮೂಡಿಸಲಾಗುತ್ತದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಎಚ್‌. ವಿಜಯಕುಮಾರ್‌ ಮಾಹಿತಿ ನೀಡಿದರು.

ಜಯಶೀಲಾ ಹೇಳಿದ್ದೇನು?

* ಕಲಬೆರಕೆ ಹಾಲು ಮಾರಲಾಗುತ್ತಿದೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿವೆ. ಶಿವಮೊಗ್ಗ ಹಾಲು ಒಕ್ಕೂಟ ಅಧಿಕಾರಿಗಳು ಬರಿ ಪರಿಶೀಲನೆ ಮಾಡಿದ್ದೇವೆ ಎಂದರೆ ಸಾಲದು. ಒಂದಿಬ್ಬರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು.

* ಹಾಸ್ಟೆಲ್‌ಗಳಲ್ಲಿ ಶುದ್ಧ ಆಹಾರ ಕೊಡುತ್ತಿಲ್ಲ ಎಂಬ ಬಗ್ಗೆ ಚನ್ನಗಿರಿ ತಾಲ್ಲೂಕು ಕೆಡಿಪಿ ಸಭೆಯಲ್ಲೇ ದೂರು ಕೇಳಿ ಬಂದಿದೆ. ಮಕ್ಕಳಿಗೆ ಮೊದಲು ಒಳ್ಳೆಯ ಊಟವನ್ನು ಕೊಡಿ.

* ಸರ್ಕಾರಿ ಶಾಲೆಗಳಿಗೆ ಯಾವ ಸೌಲಭ್ಯ ಬೇಕು ಎಂಬುದನ್ನು ಸದಸ್ಯರಿಂದ ಮಾಹಿತಿ ಪಡೆಯಬೇಕು. ಅದನ್ನು ಬಿಟ್ಟು ಬರಿ ಡೆಸ್ಕ್‌ಗಳನ್ನು ಕೊಡುತ್ತ ಹೋದರೆ ವಾಪಸ್‌ ಕಳುಹಿಸುತ್ತೇವೆ.

ಮಹೇಶ್‌ ಹೇಳಿದ್ದೇನು?

* ಹೊನ್ನಾಳಿ ಮುಖ್ಯ ರಸ್ತೆಯ ಬಾಡಿಗೆ ಕಟ್ಟಡದಲ್ಲಿರುವ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಸ್ಟೆಲ್‌ನ ಸುತ್ತಲಿನ ಪ್ರದೇಶ ಸರಿಯಾಗಿಲ್ಲ. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಬೇರೆ ಕಟ್ಟಡಕ್ಕೆ ಸ್ಥಳಾಂತರಿಸಬೇಕು.

* ಹೊನ್ನಾಳಿಯಲ್ಲಿ ಮೀನುಗಾರರ ಸಭೆ ನಡೆಸಿ ಮೀನುಗಾರಿಕೆ ಇಲಾಖೆಯಲ್ಲಿನ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಬೇಕು.

* ಜಿಲ್ಲೆಯಲ್ಲಿ ಸಾವಯವ ಕೃಷಿ ಯೋಜನೆಯಲ್ಲಿ ಹಣ ಸಮರ್ಪಕವಾಗಿ ಬಳಕೆಯಾಗಿಲ್ಲ ಎಂಬ ದೂರುಗಳು ಬಂದಿವೆ. ಈ ಬಗ್ಗೆ ಸಮಗ್ರ ಮಾಹಿತಿ ನೀಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT