ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧೂಡಾ ಮಹಾಯೋಜನೆಗೆ ಅನುಮೋದನೆ: ಎ.ವೈ. ಪ್ರಕಾಶ್‌

ದಾವಣಗೆರೆ–ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ವೈ. ಪ್ರಕಾಶ್‌
Last Updated 29 ಮಾರ್ಚ್ 2023, 6:25 IST
ಅಕ್ಷರ ಗಾತ್ರ

ದಾವಣಗೆರೆ: ದಾವಣಗೆರೆ–ಹರಿಹರ ಸ್ಥಳೀಯ ಯೋಜನಾ ಪ್ರದೇಶದ ಮಹಾಯೋಜನೆಗೆ ಸರ್ಕಾರವು ಅಂತಿಮ ಅನುಮೋದನೆ ನೀಡಿದೆ ಎಂದು ದಾವಣಗೆರೆ–ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ವೈ. ಪ್ರಕಾಶ್‌ ತಿಳಿಸಿದರು.

ಈ ಹಿಂದೆ 40 ಹಳ್ಳಿಗಳು ಧೂಡಾ ವ್ಯಾಪ್ತಿಗೆ ಬರುತ್ತಿದ್ದವು. ಈಗ ಹರಿಹರ ತಾಲ್ಲೂಕಿನ ಕೆ.ಬೇವಿನಹಳ್ಳಿ, ಬನ್ನಿಕೋಡು, ಸಾಲಕಟ್ಟೆ, ಬೆಳ್ಳೂಡಿ, ಷಂಶೀಪುರ ಈ ಐದು ಗ್ರಾಮಗಳಿಗೆ ಯೋಜನಾ ಪ್ರದೇಶ ವಿಸ್ತರಣೆ
ಗೊಂಡಿದೆ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.

2041ರ ವರೆಗೆ ಈ ಮಹಾಯೋಜನೆ ಇರುತ್ತದೆ. ಬಳಿಕ ಮತ್ತೆ ವಿಸ್ತಾರಗೊಳಿಸಿ ಹೊಸ ಮಹಾಯೋಜನೆ ಬರಲಿದೆ. 2011ರ ಜನಗಣತಿಯ ಪ್ರಕಾರ ದಾವಣಗೆರೆ–ಹರಿಹರ ಪಟ್ಟಣದ ಜನಸಂಖ್ಯೆ 5,47,943 ಇತ್ತು. 2041ಕ್ಕೆ 9,25,000ಕ್ಕೆ ಏರಿಕೆಯಾಗಲಿದೆ. ಅದಕ್ಕೆ ಸರಿಯಾಗಿ ಮಹಾಯೋಜನೆ ತಯಾರಿಸಲಾಗಿದೆ. ದಾವಣಗೆರೆ–ಹರಿಹರ ಪಟ್ಟಣದ ಜನಸಂಖ್ಯೆ, ಸಾಮಾಜಿಕ, ಆರ್ಥಿಕ ಸ್ಥಿತಿಗತಿ, ಹಾಲಿ ಬೆಳವಣಿಗೆಗಳ ಗತಿ, ಹವಾಗುಣ, ರಸ್ತೆಗಳ ಜಾಲಿ ಪರಿಚಲನೆ ವ್ಯವಸ್ಥೆಯ ಸಮಸ್ಯೆಗಳನ್ನು ವಿಶ್ಲೇಷಿಸಿ 13,505.37 ಹೆಕ್ಟೇರ್‌ ಪ್ರದೇಶಗಳನ್ನು ವಿವಿಧ ಬಳಕೆಗೆ ವಿಂಗಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಶೇ 55.28ರಷ್ಟು ವಸತಿಗಾಗಿ, ಶೇ 5.75ರಷ್ಟು ವಾಣಿಜ್ಯಕ್ಕಾಗಿ, ಶೇ 5.75, ಕೈಗಾರಿಕೆಗಾಗಿ ಶೇ 5.66, ಸಾರ್ವಜನಿಕ/ಅರೆಸಾರ್ವಜನಿಕ ಉಪಯೋಗಕ್ಕಾಗಿ ಶೇ. 5.08 ಪ್ರದೇಶ, ಪುರತತ್ವ ಪ್ರದೇಶ 0.91 ಹೆಕ್ಟೇರ್‌, ಉದ್ಯಾನ/ಬಯಲು ಜಾಗಕ್ಕಾಗಿ ಶೇ 7.74, ಸಾರ್ವಜನಿಕ ಉಪಯೋಗಕ್ಕಾಗಿ ಶೇ 0.52, ಸಾರಿಗೆ ಸಂಪರ್ಕ ವಲಯಕ್ಕೆ ಶೇ 19.97ರಷ್ಟು ಪ್ರದೇಶವನ್ನು ಮೀಸಲಿರಿಸಲಾಗಿದೆ ಎಂದರು.

ಹೆಚ್ಚಾಗಬಹುದಾದ ಜನಸಂಖ್ಯೆಗೆ ಅನುಗುಣವಾಗಿ ಸಾರಿಗೆ ದಟ್ಟಣೆ ಕಡಿಮೆ ಮಾಡಲು ಮತ್ತು ಸುಗಮ ಸಾರಿಗೆಗಾಗಿ 60 ಮೀಟರ್‌ ಅಗಲದ ವರ್ತುಲ ರಸ್ತೆಯನ್ನು ಮಾಡಲಾಗುವುದು. ರಾಷ್ಟ್ರೀಯ ಹೆದ್ದಾರಿ ನಿಯಮಾವಳಿಯಂತೆ ಹೆದ್ದಾರಿ ಬೈಪಾಸ್‌ ರಸ್ತೆಗೆ 40 ಮೀಟರ್‌ ನಿಗದಿ ಮಾಡಲಾಗಿದೆ ಎಂದು ತಿಳಿಸಿದರು.

ಖಾಸಗಿ ವಸತಿ ವಿನ್ಯಾಸ ಅನುಮೋದನೆ ನೀಡುವಾಗ ಶೇ 10 ಉದ್ಯಾನ, ಶೇ 5 ನಾಗರಿಕ ಸೌಲಭ್ಯ ನಿವೇಶನಕ್ಕೆ ಕಾಯ್ದಿರಿಸಿ, ರಸ್ತೆ ಅಳವಡಿಸಿ ಗರಿಷ್ಠ ಶೇ 55ರವರೆಗೆ ವಸತಿಗೆ ಪರಿಗಣಿಸಿ ಅನುಮೋದನೆ ನೀಡಲಾಗುವುದು. ಮಹಾಯೋಜನೆ ರಸ್ತೆ ಹಾದು ಹೋಗುವಲ್ಲಿ ರಸ್ತೆಯ ವಿಸ್ತೀರ್ಣ ಶೇ 40ಕ್ಕಿಂತ ಅಧಿಕ ಇದ್ದರೆ ಶೇ 5 ನಾಗರಿಕ ಸೌಲಭ್ಯದ ನಿವೇಶನಕ್ಕೆ ಕಾಯ್ದಿರಿಸದೇ ಅನುಮೋದನೆ
ನೀಡಲು ಅವಕಾಶವಿದೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಧೂಡಾ ಆಯುಕ್ತ ಬಸನಗೌಡ ಕೊಟೂರ, ಸದಸ್ಯರಾದ ಮಾರುತಿರಾವ್ ಘಾಟ್ಕೆ, ಲಕ್ಷ್ಮಣ, ಬಾತಿ ಚಂದ್ರಶೇಖರ್‌, ಗೌರಮ್ಮ ವಿ. ಪಾಟಿಲ್‌, ಪ್ರಾಧಿಕಾರದ ನಿರ್ದೇಶಕ ಎಂ. ಅಣ್ಣಪ್ಪ ಇದ್ದರು.

ನಿವೇಶನಕ್ಕಾಗಿ ಜಮೀನು ಹುಡುಕಾಟ

ಕುಂದವಾಡದ ರೈತರು ಜಮೀನು ನೀಡಲು ನಿರಾಕರಿಸಿದ್ದಾರೆ. ಜಮೀನು ಸ್ವಾಧೀನಪಡಿಸಿಕೊಳ್ಳುವ ಅಧಿಕಾರ ಧೂಡಾಕ್ಕೆ ಇಲ್ಲ. ಅದು ಸರ್ಕಾರ ಮಾಡಬೇಕಾದ ಕೆಲಸ. ಹಾಗಾಗಿ ಹೊಸ ಜಮೀನು ಖರೀದಿಸಲು ಅವಕಾಶ ಕೋರಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಲಾಗಿದೆ. ಹೊಸ ಜಮೀನಿಗಾಗಿ ಹುಡುಕಾಟ ನಡೆದಿದೆ ಎಂದು ಧೂಡಾ ಅಧ್ಯಕ್ಷ ಎ.ವೈ. ಪ್ರಕಾಶ್‌ ತಿಳಿಸಿದರು.

ಒತ್ತಾಯಪೂರ್ವಕವಾಗಿ ಭೂಸ್ವಾಧೀನ ಪಡಿಸಿಕೊಳ್ಳಲು ಸಾಧ್ಯವಿಲ್ಲ. ಸರ್ಕಾರ ಏನು ನಿರ್ದೇಶನ ನೀಡುತ್ತದೆಯೋ ಅದರಂತೆ ಕಾರ್ಯ ನಿರ್ವಹಿಸಲಾಗುವುದು ಎಂದರು.

ಮನೆ ಕಟ್ಟದ ಹಲವರು

2005 ಮತ್ತು 2009ರಲ್ಲಿ ಜೆ.ಎಚ್‌. ಪಟೇಲ್ ಬಡಾವಣೆಯಲ್ಲಿ ನಿವೇಶನ ಪಡೆದುಕೊಂಡ ಹಲವರು ಮನೆ ಕಟ್ಟಿಲ್ಲ. ಮನೆ ಕಟ್ಟಲು ಮತ್ತೆ ಎರಡು ವರ್ಷ ಅವಧಿ ವಿಸ್ತರಿಸಲಾಗಿದೆ. ಅದರೊಳಗೆ ಕಟ್ಟದೇ ಇದ್ದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಮನೆ ಇದ್ದವರೇ ನಿವೇಶನ ತೆಗೆದುಕೊಂಡಿದ್ದರೆ ಪರಿಶೀಲಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT