ದಾವಣಗೆರೆ: ಸಾಮಾಜಿಕ ಭದ್ರತಾ ಯೋಜನೆಗಳಾದ ಸಂಧ್ಯಾ ಸುರಕ್ಷಾ, ವೃದ್ದಾಪ್ಯ, ವಿಧವಾ, ಅಂಗವಿಕಲರ ಮಾಸಾಶನ ಸೇರಿದಂತೆ ಇನ್ನಿತರೆ ಮಾಸಾಶನಗಳನ್ನು ಅಂಚೆ ಇಲಾಖೆಯಿಂದ ನಿಗದಿತ ಸಮಯಕ್ಕೆ ತಲುಪಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ.ವೆಂಕಟೇಶ್ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಂಚೆ ಇಲಾಖೆ ಅಧಿಕಾರಿಗಳು ಹಾಗೂ ಸಾಮಾಜಿಕ ಭದ್ರತಾ ಯೋಜನೆ ಅನುಷ್ಠಾನಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
‘ಮಾಸಾಶನ ಸಕಾಲದಲ್ಲಿ ತಲುಪದ ಕಾರಣ ಜೀವನ ನಿರ್ವಹಣೆ ಹಾಗೂ ದಿನನಿತ್ಯದ ಖರ್ಚು ವೆಚ್ಚಗಳಿಗೆ ಸಮಸ್ಯೆಯಾಗಿದೆ ಹವು ಫಲಾನುಭವಿಗಳು ದೂರು ನೀಡಿದ್ದು, ಅಂಚೆ ಇಲಾಖೆಯಿಂದ ಮಾಸಾಶನಗಳು ಸಕಾಲದಲ್ಲಿ ತಲುಪಿದೆಯೋ ಇಲ್ಲವೋ ಎಂಬ ಬಗ್ಗೆ ಪರಿಶೀಲಿಸಬೇಕು. ಮಾಸಾಶನದ ಮಾಹಿತಿ ಕೇಳಲು ಬರುವವರಿಗೆ ಅಂಚೆ ಕಚೇರಿಯಲ್ಲಿ ಸೌಜನ್ಯದಿಂದ ವರ್ತಿಸಬೇಕು. ಜೊತೆಗೆ ಅವರ ಖಾತೆಯಲ್ಲಿ ಹಣ ಜಮಾ ಆಗಿರುವ ಬಗ್ಗೆ ನಿಖರ ಮಾಹಿತಿಯನ್ನು ನೀಡಬೇಕು’ ಎಂದರು.
‘ಕೆಲವು ವೇಳೆ ಅಂಚೆ ಇಲಾಖೆ ನೌಕರರು ವಿತರಣೆಯ ವೇಳೆ ವಿಳಂಬ ಮಾಡುವ ಸಂಭವವಿದ್ದು, ಇದನ್ನು ಪೋಸ್ಟ್ ಮಾಸ್ಟರ್ ಪ್ರತಿನಿತ್ಯ ಪರಿಶೀಲನೆ ಮಾಡಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಸರ್ಕಾರದಿಂದ ಜಮಾ ಮಾಡಿದ್ದರೂ ಮಾಸಾಶನ ತಲುಪದಿದ್ದಲ್ಲಿ ಅಂತಹ ಸಿಬ್ಬಂದಿಯ ಮೇಲೆ ಶಿಸ್ತುಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಅಂಚೆ ಅಧೀಕ್ಷಕ ಚಂದ್ರಶೇಖರ್, ಸಾಮಾಜಿಕ ಭದ್ರತಾ ಯೋಜನೆ ಸಹಾಯಕ ನಿರ್ದೇಶಕಿ ಪುಷ್ಪಾ ಹಾಗೂ ಅಂಚೆ ಇಲಾಖೆ ವಿವಿಧ ಅಧಿಕಾರಿಗಳು ಇದ್ದರು.