ದಾವಣಗೆರೆ: ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಬ್ರಾಹ್ಮಣ ಸಮುದಾಯಕ್ಕೆ ಸರ್ಕಾರ ವೈದ್ಯಕೀಯ ಸೌಲಭ್ಯ, ಪಿಂಚಣಿ ವೇತನ, ಸ್ವಯಂ ಉದ್ಯೋಗಿಗಳಿಗೆ ಪ್ರೋತ್ಸಾಹ ನೀಡಬೇಕು ಎಂದುಕರ್ನಾಟಕ ರಾಜ್ಯ ಅಸಂಘಟಿತ ಪುರೋಹಿತರ ಕಾರ್ಮಿಕರ ಕ್ಷೇಮಾಭಿವೃದ್ಧಿ (ತ್ರಿಮತಸ್ಥ) ಸಂಘದ ಸಂಸ್ಥಾಪಕ ರಾಜ್ಯ ಘಟಕದ ಅಧ್ಯಕ್ಷ ಡಾ.ಎಂ.ಬಿ. ಅನಂತಮೂರ್ತಿ ಆಗ್ರಹಿಸಿದರು.
ಇಲ್ಲಿನ ಎವಿಕೆ ಕಾಲೇಜು ರಸ್ತೆಯಲ್ಲಿರುವ ರಂಗಮಹಲ್ನಲ್ಲಿ ಬುಧವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯ ಅಸಂಘಟಿತ ಪುರೋಹಿತರ ಕಾರ್ಮಿಕರ ಕ್ಷೇಮಾಭಿವೃದ್ಧಿ (ತ್ರಿಮತಸ್ಥ) ಸಂಘದ ಜಿಲ್ಲಾ ಕಾರ್ಯಕಾರಿಣಿ ಸಮಿತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ನಮ್ಮ ಸಮುದಾಯದವರಿಗೆ ಉದ್ಯೋಗ ಭದ್ರತೆ ಇಲ್ಲದೇ ಸಂಕಷ್ಟದಲ್ಲಿ ಇದ್ದಾರೆ. ಗಂಗಾ ಕಲ್ಯಾಣ, ವೇದಾಧ್ಯಯನ ಪಂಡಿತರಿಗೆ ಗೌರವಧನ, ಸಬ್ಸಿಡಿ ಸೇರಿ ಗೃಹ ನಿರ್ಮಾಣ ಸಾಲ ಸೇರಿವಿವಿಧ ಸೌಲಭ್ಯಕ್ಕೆ ಆಗ್ರಹಿಸಿ ಬುಧವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದೇವೆ’ ಎಂದರು.
‘ಆರ್ಥಿಕವಾಗಿ ಸಂಕಷ್ಟದಲ್ಲಿರುವ ಬ್ರಾಹ್ಮಣರ ಅಭಿವೃದ್ಧಿಗೆ ಸರ್ಕಾರ ನಿಗಮ ಸ್ಥಾಪಿಸಿದ್ದು, ನಮ್ಮ ಸಂಘಟನೆಯಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳುವ ಮೂಲಕ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.
‘ಮಂತ್ರಶಕ್ತಿ, ಬುದ್ಧಿಶಕ್ತಿಯಿಂದ ದೇವತಾ ಕಾರ್ಯಗಳನ್ನು ನೆರವೇರಿಸಿ, ದೇಶಕ್ಕೆ, ದೇಶದ ಜನರಿಗೆ ಒಳಿತನ್ನೇ ಬಯಸುವ ಬ್ರಾಹ್ಮಣರಿಗೆ ಆರ್ಥಿಕ ಭದ್ರತೆಯಿಲ್ಲದೇ ಸಂಕಷ್ಟದಲ್ಲಿ ಕಾಲ ಕಳೆಯುವಂತಾಗಿದೆ. ಪೌರೋಹಿತ್ಯ ಮುಗಿಸಿ ಹೋಗುವ ಸಂದರ್ಭದಲ್ಲಿ ಅಪಘಾತವಾದರೆ ಅವರಿಗೆ ವಿಮೆಯ ಯೋಜನೆಯಿಲ್ಲ. ಕೆಲಸಗಳ ಭದ್ರತೆಯಿಲ್ಲ ಜತೆಗೆ ಯಾವುದೇ ಕ್ಷೇತ್ರದಲ್ಲಿ ಮೀಸಲಾತಿಯೂ ಇಲ್ಲ’ ಎಂದು ವಿಷಾದಿಸಿದರು.
‘ಸರ್ಕಾರ ಕೂಡಲೇ ನಮ್ಮ ಸಮಸ್ಯೆಗಳಿಗೆ ಸ್ಪಂದಿಸಿ ಮಾರ್ಚ್ ಅಂತ್ಯದೊಳಗಾಗಿ ಬ್ರಾಹ್ಮಣ ಸಮುದಾಯಕ್ಕೆ ಗುರುತಿನ ಚೀಟಿ ನೀಡುವ ಮೂಲಕ ನಮ್ಮ ಸಮಾಜವನ್ನು ಉಳಿಸುವ ಕೆಲಸ ಮಾಡಬೇಕು. ಇಲ್ಲವಾದರೆ ವಿಧಾನಸೌಧದ ಟೌನ್ ಹಾಲ್ ಮುಂಭಾಗ ಪ್ರತಿಭಟನೆ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
ಸಂಘದ ಗೌರವಾಧ್ಯಕ್ಷ ಕೆ.ಆರ್. ವರದರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷ ಎಸ್.ಎ. ಆಂಜನೇಯ, ಎಂ.ಟಿ. ಮುರುಳಿಧರರಾವ್, ಖಜಾಂಚಿ ರಂಗನಾಥ್ ಭಾರಧ್ವಜ್, ಎಸ್. ನಾಗರಾಜ್, ಪ್ರಭುಮೂರ್ತಿ, ಎಚ್.ಕೆ. ನಾಗೇಂದ್ರಮೂರ್ತಿ, ರಾಜೇಶ್, ನಾಗೇಶ್ ಉಪಸ್ಥಿತರಿದ್ದರು.