ಮಲೇಬೆನ್ನೂರು:ಬ್ಯಾಂಕಿನಲ್ಲಿ ಅಡ ಇಟ್ಟ ಚಿನ್ನಾಭರಣ ಹರಾಜು ವಿರೋಧಿಸಿ ರೈತರು ನಂದಿತಾವರೆ ಕರ್ನಾಟಕ ಗ್ರಾಮೀಣ ಬ್ಯಾಂಕಿನ ಎದುರು ಸೋಮವಾರ ಧರಣಿ ನಡೆಸಿದರು.
ರೈತ ಮುಖಂಡ ತೇಜಸ್ವಿ ಪಟೇಲ್, ‘ಬ್ಯಾಂಕಿಂಗ್ ವ್ಯವಸ್ಥೆ ಹಿಂದಿನಂತಿಲ್ಲ. ಬದಲಾಗಿದೆ. ರಾಜ್ಯ ಮಟ್ಟದ ಬ್ಯಾಂಕರುಗಳ ಸಭೆಯಲ್ಲಿ ಸಮಸ್ಯೆ ಚರ್ಚಿಸಲಾಗುವುದು.ರೈತರ ಕಷ್ಟ ಪರಿಹರಿಸಲು ಬ್ಯಾಂಕ್ ಸಿಬ್ಬಂದಿ ಮನಸ್ಸು ಮಾಡಬೇಕು. ರೈತ ಹಾಗೂ ಬ್ಯಾಂಕ್ ಎರಡೂ ಉಳಿಯಬೇಕು. ಸಮಸ್ಯೆ ಪರಿಹರಿಸುವಂತೆ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ, ಸೌಹಾರ್ದಯುತ ಪರಿಹಾರ ಕಂಡುಕೊಳ್ಳಿ’ ಎಂದು ಹೇಳಿದರು.
‘ರೈತರು ಸಂಕಷ್ಟದಲ್ಲಿದ್ದಾರೆ. ಸಾಲ ಮರುಪಾವತಿಗೆ ಬ್ಯಾಂಕ್ ನೋಟಿಸ್ ನೀಡಿದೆ. ಸಮಸ್ಯೆಯನ್ನು ತಹಶೀಲ್ದಾರ್ ಅವರ ಗಮನಕ್ಕೆ ತರಲಾಗಿದೆ. ರೈತರ ಸಂಕಷ್ಟಕ್ಕೆ ಬ್ಯಾಂಕ್ ಸ್ಪಂದಿಸುತ್ತಿಲ್ಲ’ ಎಂದು ರೈತ ಮುಖಂಡರಾದ ಶಂಭುಲಿಂಗಪ್ಪ, ಪ್ರಭುಗೌಡ, ಅಂಜನಪ್ಪ ವಾಗ್ವಾದ ನಡೆಸಿದರು.
ಬ್ಯಾಂಕ್ ವ್ಯವಸ್ಥಾಪಕ ಕುಮಾರ್ ನಾಯ್ಕ್, ‘ಆರ್ಬಿಐ ನಿಯಮದಂತೆ ಕೆಲಸ ಮಾಡುತ್ತಿದ್ದೇವೆ. ಒಬ್ಬ ವ್ಯಕ್ತಿ ಪಡೆದ ಸಾಲಕ್ಕೆ ಜಾಮೀನುದಾರರು, ಬೇರೆ ಬೇರೆ ಸಾಲಗಳು ಜಂಟಿ ಆಗಿರುತ್ತವೆ’ ಎಂದು ಸಮಜಾಯಿಷಿ ನೀಡಿದರು.
ಇದಕ್ಕೆ ರೈತರು ಒಪ್ಪಲಿಲ್ಲ. ಸಾಲ ಮರುಪಾವತಿ ಮಾಡಿದರೂ ಸ್ಪಂದಿಸುತ್ತಿಲ್ಲ ಎಂದು ದೂರಿದರು.
ವಲಯ ಕಚೇರಿಯಿಂದ ಬಂದಿದ್ದ ಹಿರಿಯ ವ್ಯವಸ್ಥಾಪಕ ಶರಣಪ್ಪ ಧರಣಿನಿರತರೊಂದಿಗೆ ನಡೆಸಿದ ಮಾತುಕತೆ ವಿಫಲವಾಯಿತು.
ವಾಗ್ವಾದ ನಡೆಯುತ್ತಿದ್ದ ವೇಳೆ ಪಿಎಸ್ಐ ವೀರಬಸಪ್ಪ ಕುಸಲಾಪುರ ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
‘ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಬ್ಯಾಂಕಿನ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡುವ ತನಕ ಬಂಗಾರದ ಹರಾಜು ಮಾಡಬೇಡಿ.ಒಂದು ವಾರದ ಒಳಗಾಗಿ ಸಮಸ್ಯೆ ಪರಿಹರಿಸದಿದ್ದರೆ ಉಗ್ರ ಹೋರಾಟ ನಡೆಸುತ್ತೇವೆ’ ಎಂದು ರೈತರು ಎಚ್ಚರಿಕೆ ನೀಡಿದರು.
ರೈತ ಮುಖಂಡರಾದ ಭಾನುವಳ್ಳಿ ಕೊಟ್ರೇಶ್, ಹೊಳೆಸಿರಿಗೆರೆ ಫಾಲಾಕ್ಷಪ್ಪ, ಮಂಜುಳಮ್ಮ, ಜಿ. ರಂಗನಗೌಡ, ಬಸವರಾಜಪ್ಪ ಭಾನುವಳ್ಳಿ, ವೀರಭದ್ರಯ್ಯ, ಕರಿಬಸಮ್ಮ, ನಂದೀಶ್, ವೇದಮೂರ್ತಿ ಇದ್ದರು.