ದಾವಣಗೆರೆ: ಸಂಪುಟದಲ್ಲಿ ಡಿಸಿಎಂ ಸ್ಥಾನವನ್ನು ತೆಗೆದು ಹಾಕುವುದಾದರೆ ನಮ್ಮ ವಿರೋಧವಿಲ್ಲ, ಆದರೆ ಉಪ ಮುಖ್ಯಮಂತ್ರಿ ಸ್ಥಾನ ಇರುವುದಾದರೆ ನಮ್ಮ ಸಮಾಜಕ್ಕೆ ನೀಡಬೇಕು ಎಂದು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಆಗ್ರಹಿಸಿದರು.
ನಗರದಲ್ಲಿ ಶುಕ್ರವಾರ ನಡೆದ ವಾಲ್ಮೀಕಿ ಜಾತ್ರಾ ಮಹೋತ್ಸವದ ಪೂರ್ವಸಿದ್ಧತಾ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
‘ಪರಿಶಿಷ್ಟ ಪಂಗಡದವರಿಗೆ ಶೇ. 7.5 ಮೀಸಲಾತಿ ನೀಡಬೇಕು. ಮುಖ್ಯಮಂತ್ರಿ ಯಡಿಯೂರಪ್ಪ ಆ ಸೌಲಭ್ಯ ನೀಡುತ್ತಾರೆ ಎಂಬುದರ ಬಗ್ಗೆ ಅಪಾರ ವಿಶ್ವಾಸವಿದೆ’ ಎಂದರು.
‘ಮೀಸಲಾತಿ ವಿಚಾರವಾಗಿ ಆಯೋಗದ ಅಧ್ಯಕ್ಷ ನಾಗಮೋಹನ ದಾಸ್ ಅವರನ್ನು ನಮ್ಮ ಸಮುದಾಯದ ನಿಯೋಗ ಇತ್ತೀಚೆಗೆ ಭೇಟಿ ಮಾಡಿತ್ತು. ವಾಲ್ಮೀಕಿ ಜಾತ್ರೆ ನಂತರವಾದರೂ ನಮಗೆ ಮೀಸಲಾತಿ ನೀಡುತ್ತಾರೆ ಎನ್ನುವ ನಂಬಿಕೆ ಇದೆ. ವರದಿ ಬರುವುದು ವಿಳಂಬವಾದರೆ ಜಾತ್ರೆ ನಂತರ ನಿರ್ಧಾರ ಕೈಗೊಳ್ಳುತ್ತೇವೆ’ ಎಂದು ಪ್ರತಿಕ್ರಿಯಿಸಿದರು.